ನ್ಯೂಸ್ ನಾಟೌಟ್: ಸುಳ್ಯದ ಓಡಬಾಯಿ ಬಳಿ ತೆಂಗಿನ ಮರದಲ್ಲಿದ್ದ ಕೋಲು ಜೇನು ಓಡಿಸುವುದಕ್ಕೆ ಹೋಗಿ ತೆಂಗಿನ ಮರವೇ ಸುಟ್ಟು ಕರಕಲಾದ ವಿಚಿತ್ರ ಘಟನೆ ಮಂಗಳವಾರ (ಡಿ.5) ಸಂಜೆ ನಡೆದಿದೆ.
ಇದನ್ನೊಂದು ರೀತಿಯಲ್ಲಿ ಸ್ವಾರಸ್ಯಕರ ಘಟನೆ ಎಂದೂ ಕರೆಯಬಹುದು. ಸಂಜೆ ಆಗಿದ್ದಿಷ್ಟು. ಓಡಭಾಯಿ ಅಗ್ನಿ ಶಾಮಕ ಕೇಂದ್ರದ ಸಮೀಪದಲ್ಲಿರುವ ಮನೆಯೊಂದರ ತೆಂಗಿನ ಮರದಲ್ಲಿ ಕೋಲು ಜೇನು ಸೇರಿಕೊಂಡಿತ್ತು. ಇದರಿಂದ ತೆಂಗಿನ ಕಾಯಿ ತೆಗೆಯುವುದಕ್ಕೆ ಕಷ್ಟವಾಗಿತ್ತು. ಹೀಗಾಗಿ ಇದನ್ನು ಓಡಿಸುವುದಕ್ಕೆ ಮಾಸ್ಟರ್ ಪ್ಲಾನ್ ರೂಪಿಸಲಾಯಿತು. ಬೆಂಕಿ ಹೊಗೆಯ ಶಾಖ ಕೊಡುವುದಕ್ಕೆ ನಿರ್ಧರಿಸಲಾಗಿದೆ. ವ್ಯಕ್ತಿಯೊಬ್ಬರು ಮರ ಹತ್ತಿ ತೆಂಗಿನ ಮರದಲ್ಲಿ ಜೇನು ಓಡಿಸುವುದಕ್ಕೆ ನಿರತರಾಗಿದ್ದಾರೆ. ಈ ವೇಳೆ ಬೆಂಕಿ ಮಡಲಿಗೆ ತಾಗಿ ದುಪ್ಪನೆ ಉರಿದುಕೊಂಡಿದೆ. ತೆಂಗಿನ ಮರದಲ್ಲಿ ಬೆಂಕಿ ಉರಿದುಕೊಳ್ಳುತ್ತಿದ್ದಂತೆ ಹತ್ತಿರದವರೆಲ್ಲರೂ ಸೇರಿಕೊಂಡಿದ್ದಾರೆ. ತೆಂಗಿನ ಮರಕ್ಕೆ ಇದ್ದಕ್ಕಿದ್ದಂತೆ ಬೆಂಕಿ ತಾಗಿದ್ದು ಹೇಗೆಂದು ರಸ್ತೆಯಲ್ಲಿ ಕೆಲವರು ಕುತೂಹಲ ಭರಿತರಾಗಿ ವಾಹನ ನಿಲ್ಲಿಸಿ ವೀಕ್ಷಿಸಿದ್ದಾರೆ. ಸಮೀಪದಲ್ಲೇ ಇದ್ದ ಅಗ್ನಿ ಶಾಮಕ ಕೇಂದ್ರದ ಸಿಬ್ಬಂದಿಗೆ ತಿಳಿಸಿದ್ದಾರೆ. ತಕ್ಷಣ ಅವರು ಸ್ಥಳಕ್ಕೆ ಬಂದು ತೆಂಗಿನ ಮರದಲ್ಲಿ ಉರಿಯುತ್ತಿದ್ದ ಬೆಂಕಿಯನ್ನು ನಂದಿಸಿದ್ದಾರೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ನ್ಯೂಸ್ ನಾಟೌಟ್ ಗೆ ತಿಳಿಸಿದ್ದಾರೆ.