ಜೀವನಶೈಲಿ

ಬೇಸಿಗೆಯಲ್ಲಿ ಪದೇ ಪದೇ ಪ್ರಿಜ್ ನೀರು ಕುಡಿತ್ತಿದ್ದೀರಾ? ಹಾಗಾದ್ರೆ ಎಚ್ಚರ!!ಏನೆಲ್ಲಾ ಸಮಸ್ಯೆಗಳಾಗುತ್ತವೆ ಓದಿ…

ನ್ಯೂಸ್‌ ನಾಟೌಟ್‌: ಮನೆಯಿಂದ ಹೊರಗಡೆ ಹೋದ್ರೆ ಸಾಕು ತಡೆಯಲಾಗದ ಸೆಕೆ.. ಮಾತ್ರವಲ್ಲ ಈ ಬಿಸಿಲ ಝಳಕ್ಕೆ ಐಸ್‌ ವಾಟರನ್ನೇ ಕುಡಿಬೇಕು ಅನ್ಸುತ್ತೆ. ತಂಪಾದ ಪೇಯಗಳತ್ತ ಮನಸ್ಸು ಹಾತೊರೆಯುತ್ತದೆ. ನೀರಾದರೂ ಸೈ- ಕೊರೆಯುವಷ್ಟು ತಣ್ಣಗೇ ಇರಲಿ ಎಂದು ಬಯಸುತ್ತೇವೆ. ಹೀಗೆ ಫ್ರಿಜ್ ನಿಂದ ತೆಗೆದಿದ್ದನ್ನು ನೇರ ಗಂಟಲಿಗೆ ಸುರಿದುಕೊಳ್ಳುವಾಗೆಲ್ಲಾ,ಅಬ್ಬಾ .. ಎಂದು ಅಂದುಕೊಂಡರೂ,ಹಿರಿಯರು ಆರೋಗ್ಯ ಕೆಡುತ್ತದೆ ಎಂದು ಹೇಳೋದು ಇದೆ.ಹಾಗಾದರೆ ಅದು ನಿಜನಾ?

ಸಾಮಾನ್ಯವಾಗಿ ಫ್ರಿಜ್‌ ನೀರನ್ನು ಒಮ್ಮೊಮ್ಮೆ ಕುಡಿದರೆ ಆರೋಗ್ಯಕ್ಕೆ ಹೇಳುವಂಥ ತೊಂದರೆಯೇನೂ ಆಗುವುದಿಲ್ಲ. ಅದೊಂದು ಗಾದೆ ಮಾತು ಇದ್ಯಲ್ಲಾ, ಅತಿಯಾದ್ರೆ ಅಮೃತವೂ ವಿಷ ಅಂತ.. ಎಲ್ಲಾದರೂ ಅತಿಯಾದ್ರೆ ಮೂಗು-ಗಂಟಲಲ್ಲಿ ಕಫ ಕಟ್ಟಿದಂತಾಗುತ್ತದೆ ಎಂದು ಹಲವಾರು ಮಂದಿ ಹೇಳುತ್ತಾರೆ. ಇದಲ್ಲದೆ, ಮೈಗ್ರೇನ್ ಸಮಸ್ಯೆ ಇರುವವರಲ್ಲಿ ಅತಿಯಾದ ತಣ್ಣಗಿನ ಪಾನೀಯಗಳು ಇದ್ದಕ್ಕಿದ್ದಂತೆ ತಲೆನೋವಿಗೆ ದಾರಿ ಮಾಡಿಕೊಡುತ್ತವೆ. ಇದಕ್ಕೆ ಸಾಕಷ್ಟು ಪುರಾವೆಗಳಿಲ್ಲ ಎಂದು ಪರಿಣತರಲ್ಲಿಯೇ ಕೆಲವರ ವಾದವಿದೆ. ಆದರೆ ಅನುಭವಿಗಳು ಈ ವಾದಕ್ಕೆ ಪುಷ್ಟಿ ನೀಡುವವರಿದ್ದಾರೆ. ಇದಲ್ಲದೆ, ಇನ್ನೂ ಕೆಲವು ಸಮಸ್ಯೆಗಳು ದಾರಿ ಕಾಯಬಹುದು.

ಅತಿಯಾಗಿ ತಣ್ಣೀರು ಕುಡಿಯುವುದು ಜೀರ್ಣಕ್ರಿಯೆಗೆ ತೊಡಕುಂಟು ಮಾಡಬಹುದು. ಅದರಲ್ಲೂ ಹೆಚ್ಚಿನ ಪ್ರಮಾಣದ ಚಿಲ್ಡ್ ನೀರನ್ನು ಕಡಿಮೆ ಸಮಯದಲ್ಲಿ ಹೊಟ್ಟೆಗಿಳಿಸಿದರೆ ಸಮಸ್ಯೆಗಳ ಪ್ರಮಾಣವೂ ಹೆಚ್ಚು. ಇದರಿಂದ ಹೊಟ್ಟೆಯುಬ್ಬರ, ಆಹಾರ ಪಚನವಾಗದಿರುವುದು ಮುಂತಾದ ತೊಂದರೆಗಳು ಕಾಣಿಸಿಕೊಂಡು ಆರೋಗ್ಯವನ್ನು ಹದಗೆಡಿಸುತ್ತವೆ.

ಈ ನೀರನ್ನು ನಾಲ್ಕಾರು ಗುಟುಕುಗಳು ಕುಡಿಯುತ್ತಿದ್ದಂತೆ ಸಾಕು ಎನಿಸಲು ಆರಂಭಿಸುತ್ತದೆ. ಇದರಿಂದ ಬೇಸಿಗೆಯಲ್ಲಿ ಕುಡಿಯುವ ನೀರಿನ ಪ್ರಮಾಣ ಕ್ಷೀಣಿಸಬಹುದು. ದೇಹಕ್ಕೆ ಅಗತ್ಯವಾದಷ್ಟು ನೀರು ದೊರೆಯದೇ ಹೋಗುವ ಸಾಧ್ಯತೆಯೂ ಇದೆ. ನಮ್ಮ ಜೀರ್ಣಾಂಗಗಳ ಕ್ಷಮತೆಗೆ, ಚರ್ಮ ಮತ್ತು ಕಿಡ್ನಿಗಳ ಸುಸ್ಥಿತಿಗೆ, ದೇಹದ ಉಷ್ಣತೆ ನಿಯಂತ್ರಿಸಿ ನಿರ್ಜಲೀಕರಣದಿಂದ ತಪ್ಪಿಸಿಕೊಳ್ಳಲು- ಹೀಗೆ ಬಹಳಷ್ಟು ಕೆಲಸಗಳಿಗೆ ನಮ್ಮ ದೇಹಕ್ಕೆ ನೀರು ಅಗತ್ಯವಾಗಿ ಬೇಕು.

ನೆಗಡಿ, ಕೆಮ್ಮು ಅಥವಾ ಗಂಟಲಲ್ಲಿ ಸಂವೇದನೆಗಳಿದ್ದರೆ ಅವೆಲ್ಲವೂ ಹೆಚ್ಚಾಗಬಹುದು. ಹಾಗಾಗಿ ಆರೋಗ್ಯದ ಸಮಸ್ಯೆಗಳು ಇದ್ದವರಿಗೆ ಶೀತಲ ಜಲ ಹೇಳಿಸಿದ್ದಲ್ಲ. ಹಾಗೆಂದು ಎಂಥಾ ತಣ್ಣೀರು ಕುಡಿದರೂ ಏನೂ ಆಗದೆ ಗುಂಡುಕಲ್ಲಿನಂತೆ ಇರುವವರಿಗೇನೂ ಕೊರತೆಯಿಲ್ಲ. ಆರೋಗ್ಯಕ್ಕೆ ಒಗ್ಗಿದರೆ ಯಾವ ತೊಂದರೆಯೂ ಆಗದಿರಬಹುದು. ಅಪರೂಪಕ್ಕೆ ಅಥವಾ ತೀರಾ ಬಾಯಾರಿದಾಗ ತಣ್ಣೀರು ಕುಡಿದರೆ ಸಾಕು ಎನ್ನುವವರೂ ಇದ್ದಾರೆ. ಇಂಥ ಕೆಲವು ಚಿಕ್ಕ-ಪುಟ್ಟ ತೊಂದರೆಗಳು ಬರುತ್ತವೆ ಎನಿಸಿದರೆ, ಅದರಿಂದ ದೂರ ಉಳಿಯುವುದು ಕ್ಷೇಮ.

ಅತಿಯಾದ ತಣ್ಣೀರಿನ ಸೇವನೆ ಹೊಟ್ಟೆಯ ಭಾಗದಲ್ಲಿರುವ ರಕ್ತನಾಳಗಳು ಸಂಕುಚಿತಗೊಳ್ಳಬಹುದು. ಇದರಿಂದ ಆಹಾರದಲ್ಲಿರುವ ಪೋಷಕಾಂಶಗಳು ಸರಿಯಾಗಿ ಹೀರಲ್ಪಡದೆ ವ್ಯರ್ಥವಾಗಬಹುದು. ಹಾಗಾಗಿ ಊಟ-ತಿಂಡಿಯ ಜೊತೆಗೆ ಫ್ರಿಜ್‌ನ ತಣ್ಣೀರನ್ನು ಕುಡಿಯದಿರುವುದು ಒಳ್ಳೆಯದು.

ಅತಿಯಾದ ತಣ್ಣಗಿನ ವಸ್ತುಗಳು ಹಲ್ಲಿನ ತೊಂದರೆ ಇರುವವರಿಗೆ ಸಾಕಷ್ಟು ಉಪದ್ರವವನ್ನು ನೀಡುತ್ತವೆ. ಸಂವೇದನೆಗಳು ಹೆಚ್ಚಿದ್ದರಂತೂ ಹೇಳೋದೇ ಬೇಡ. ಮಾಮೂಲಿ ಆಹಾರ ತೆಗೆದುಕೊಳ್ಳುವುದೂ ಕಷ್ಟ ಎನ್ನುವ ಹಂತಕ್ಕೆ ಬರುತ್ತದೆ. ಹಾಗಾಗಿ ಒಸಡು ಮತ್ತು ಹಲ್ಲಿನ ತೊಂದರೆ ಇರುವವರಿಗೆ ತಣ್ಣಗೆ ಕೊರೆಯುವ ಪಾನೀಯಗಳು ಹೇಳಿಸಿದ್ದಲ್ಲ.

ಸಮಸ್ಯೆ ಬಂದಿರುವ ತಣ್ಣೀರಿನಿಂದಲೇ ಎಂಬುದು ಖಾತ್ರಿಯಾದರೆ, ಕೆಲ ದಿನಗಳ ಮಟ್ಟಿಗೆ ಚಿಲ್ಡ್‌ ನೀರು ಕುಡಿಯುವುದನ್ನು ನಿಲ್ಲಿಸಿ. ಬದಲಿಗೆ ಉಗುರು ಬಿಸಿಯ ನೀರು ಒಂದೆರಡು ದಿನಗಳ ಮಟ್ಟಿಗೆ ಆರಾಮ ನೀಡೀತು. ಗಂಟಲು, ಹಲ್ಲು ಮತ್ತು ಜೀರ್ಣಾಂಗಗಳ ಸಮಸ್ಯೆಗಳಿಗೆ ಉಗುರು ಬಿಸಿಯ ನೀರಿನ ಉಪಚಾರ ನೆರವಾಗುತ್ತದೆ.

Related posts

ತಂಬಾಕು ಸೇವನೆಯ ಚಟಕ್ಕೆ ದಾಸರಾಗಿದ್ದೀರಾ..? ಇದರಿಂದ ಆರೋಗ್ಯದ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತೆ..?

ಶ್ವಾನಗಳು ಕಾರ್,ಬೈಕ್ ಹಿಂದೆ ಓಡೋದೇಕೆ ಗೊತ್ತಾ? ಈ ಬಗ್ಗೆ ವಿಜ್ಞಾನ ಹೇಳೋದೇನು?

ಮನುಷ್ಯನಿಗಿಂತಲೂ ಫಾಸ್ಟಾಗಿ ಮೊಬೈಲ್ ಆಟ! ತಿನ್ನುತ್ತಾ ಇನ್ಸ್ಟಾಗ್ರಾಮ್ ವೀಕ್ಷಿಸುತ್ತಿರುವ ಕೋತಿ