ಕರಾವಳಿ

ಬೆಳ್ತಂಗಡಿ: ಕುತ್ಲೂರು ಕಾಡಬಾಗಿಲು ಸಂಪರ್ಕ ಸೇತುವೆ ಕುಸಿತ, ಸಂಕಷ್ಟಕ್ಕೆ ಸಿಲುಕಿದ 30ಕ್ಕೂ ಅಧಿಕ ಅರಣ್ಯವಾಸಿ ಮಲೆಕುಡಿಯ ಕುಟುಂಬ

ನ್ಯೂಸ್‌ ನಾಟೌಟ್‌: ಕುಕ್ಕುಜೆಯಿಂದ ಅಳಂಬ, ಬರೆಂಗಾಡಿ, ಒಂಜರ್ದಡಿ, ಏರ್ದಡಿ, ಪಂಜಾಲು ಮೊದಲಾದ ಕಡೆಗೆ ಸಂಪರ್ಕಿಸುವ ಕಾಡಬಾಗಿಲು ಎಂಬಲ್ಲಿಯ ಸೇತುವೆ ಬುಧವಾರ ಕುಸಿದಿದೆ.

ಮೂವತ್ತಕ್ಕೂ ಅಧಿಕ ಅರಣ್ಯವಾಸಿ ಮಲೆಕುಡಿಯ ಮತ್ತು ಇತರ ಅರಣ್ಯವಾಸಿ ಕುಟುಂಬಗಳಿಗೆ ಸಂಪರ್ಕಿಸುವ ಸೇತುವೆ ಇದಾಗಿದೆ. ಸುಮಾರು 50 ವರ್ಷದ ಹಿಂದೆ ಈ ಸೇತುವೆ ನಿರ್ಮಿಸಲಾಗಿತ್ತು. ಇದೀಗ ಸೇತುವೆಯ ಮಧ್ಯದ ಪಿಲ್ಲರ್ ಕುಸಿದಿದೆ. ಅರಣ್ಯವಾಸಿಗಳು ಈ ಸೇತುವೆ ಮೂಲಕ ಸಂಚರಿಸುತ್ತಿದ್ದು, ಇದೀಗ ಸೇತುವೆ ಕುಸಿದಿರುವುದರಿಂದ ಈ ಭಾಗದ ಜನರು ಕಿಲೋಮೀಟರ್ ಗಟ್ಟಲೆ ಕಾಲ್ನಡಿಗೆಯಲ್ಲೇ ಸಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಅರಣ್ಯವಾಸಿಗಳಿಗೆ ಸಂಚಾರಿ ವಾಹನದ ಮೂಲಕ ಅಳಂಬ ಪ್ರದೇಶಕ್ಕೆ ಪಡಿತರ ವಿತರಣೆಯಾಗುತ್ತಿತ್ತು. ಈ ಸೇತುವೆ ಕುಸಿತವಾಗಿರುವುದರಿಂದ ಇನ್ನು ಪಡಿತರ ಸೇರಿದಂತೆ ಇನ್ನಿತರ ವಸ್ತುಗಳನ್ನೂ ಕಾಲ್ನಡಿಗೆಯಲ್ಲೇ ಹೊತ್ತೊಯ್ಯುವ ಅನಿವಾರ್ಯ ಬರಲಿದೆ. ತುರ್ತು ಸಂದರ್ಭಗಳಲ್ಲೂ ಇಲ್ಲಿನ ನಿವಾಸಿಗಳು ತೊಂದರೆ ಅನುಭವಿಸುವಂತಾಗಿದೆ.

ಮೂರು ವರ್ಷದ ಹಿಂದೆ ಕುಕ್ಕುಜೆ ಸಮೀಪದ ಸೇತುವೆ ಇದೇ ರೀತಿ ಕುಸಿತವಾಗಿತ್ತು. ನಂತರ ಹೊಸ ಸೇತುವೆ ನಿರ್ಮಿಸಲಾಗಿತ್ತು. ಇದೇ ಸಂದರ್ಭದಲ್ಲಿ ಕಾಡಬಾಗಿಲು ಸೇತುವೆಯನ್ನೂ ಅಧಿಕಾರಿಗಳು ಪರಿಶೀಲನೆ ನಡೆಸಿದ್ದರು. ಆದರೂ ಹೊಸ ಸೇತುವೆ ನಿರ್ಮಾಣಕ್ಕೆ ಮುಂದಾಗಿರಲಿಲ್ಲ. ಇದೀಗ ಸೇತುವೆ ಕುಸಿತವಾಗಿರುವುದರಿಂದ ಸಂಪರ್ಕ ಸಾಧ್ಯವಿಲ್ಲದಂತಾಗಿದೆ.

ಕಾಡಬಾಗಿಲು ಸೇತುವೆಯನ್ನು ತಕ್ಷಣವೇ ನಿರ್ಮಾಣ ಮಾಡಬೇಕು. ಅರಣ್ಯವಾಸಿಗಳಿಗೆ ಸಂಚರಿಸಲು ತೊಂದರೆಯಾಗದಂತೆ ಕ್ರಮ ವಹಿಸಲು ಆಡಳಿತ ವ್ಯವಸ್ಥೆ ಮುಂದಾಗಬೇಕು ಎಂದು ಸ್ಥಳೀಯ ನಿವಾಸಿ ಚೀಂಕ್ರ ಮಲೆಕುಡಿಯ ಬರೆಂಗಾಡಿ ಒತ್ತಾಯಿಸಿದ್ದಾರೆ.

Related posts

ಬೆಳ್ತಂಗಡಿ: ವಿಪರೀತ ಮಳೆಗೆ ಭಾರೀ ಪ್ರಮಾಣದ ಗುಡ್ಡ ಕುಸಿತ..! ವಾಹನ ಸಂಚಾರ ಸ್ಥಗಿತ..!

ಕಾಂಗ್ರೆಸ್‌ನಿಂದ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ ಶತ ಸೀಯಾಳಾಭಿಷೇಕ

ಪುತ್ತೂರು: ಯುವಕರೊಂದಿಗೆ ಸಂವಾದ ನಡೆಸಿದ ಸಿಂಗಂ! ‘ಹಿಂದುತ್ವದ ಪ್ರತಿಪಾದನೆಗೆ ಯಾರನ್ನು ಬಳಸಿಕೊಳ್ಳಬೇಕು ಎನ್ನುವುದು ಪಕ್ಷಕ್ಕೆ ತಿಳಿದಿದೆ’ – ಅಣ್ಣಾಮಲೈ!