ನ್ಯೂಸ್ ನಾಟೌಟ್: ಎಲ್ಲಾ ಧರ್ಮಕ್ಕಿಂತಲೂ ಮಾನವ ಧರ್ಮ ದೊಡ್ಡದು. ಇನ್ನೊಬ್ಬರ ಕಷ್ಟಗಳಿಗೆ ಹೃದಯ ಯಾವಾಗ ಮಿಡಿಯುತ್ತೋ ಅದರಲ್ಲೇ ಸಾರ್ಥಕ ಭಾವವನ್ನು ಕಾಣಬಹುದು.ಒಂದು ಜೀವ ಉಳಿಸಲು ಅಂಗಾಂಗ ದಾನ ಮಾಡುವವರು, ಅವರ ರಕ್ತದ ಗುಂಪು ಹಾಗೂ ಅವರ ಆರೋಗ್ಯ ಮಹತ್ವ ಪಡೆಯುತ್ತದೆ. ಒಂದು ಹಿಂದು ಕುಟುಂಬಕ್ಕೆ ಇನ್ನೊಂದು ಮುಸ್ಲಿಂ ಕುಟುಂಬ ಅಂಗದಾನವನ್ನು ಧಾರಾಳವಾಗಿ ಮಾಡಬಹುದು. ಮುಂಬೈನ ಪರೇಲ್ ನ ಕೆಇಎಂ ಆಸ್ಪತ್ರೆ ಎರಡು ಬೇರೆ ಜನಾಂಗದ ಕುಟುಂಬವನ್ನು ಮೂತ್ರಪಿಂಡ ಕಸಿಯೊಂದಿಗೆ ಒಂದೇ ಕುಟುಂಬವನ್ನಾಗಿ ಮಾಡಿದೆ.
ಒಂದು ವರ್ಷದ ಹಿಂದೆ, ಕಲ್ಯಾಣ್ ನಿವಾಸಿ ರಫೀಕ್ ಷಾ ಮತ್ತು ಘಾಟ್ಕೋಪರ್ ಮೂಲದ ಆಯುರ್ವೇದ (Ayurveda) ವೈದ್ಯ ರಾಹುಲ್ ಯಾದವ್ ಪರೇಲ್ನಲ್ಲಿರುವ ಕೆಇಎಂ (KEM) ಆಸ್ಪತ್ರೆಯ ಡಯಾಲಿಸಿಸ್ (Dialysis) ಕ್ಲಿನಿಕ್ನಲ್ಲಿ ಪರಸ್ಪರ ಭೇಟಿಯಾಗಿದ್ದರು. ಆಗ ಅಪರಿಚಿತರಾಗಿದ್ದವರ ಮಧ್ಯೆ ಈಗ ಅನ್ಯೂನ್ಯ ಬಂಧ ಬೆಸೆದಿದೆ. 48 ವರ್ಷದ ರಫೀಕ್ ಷಾಗೆ ರಾಹುಲ್ ಯಾದವ್ ಅವರ ತಾಯಿ ಗಿರಿಜಾ ಮೂತ್ರಪಿಂಡವನ್ನು ದಾನ ಮಾಡಿದ್ದಾರೆ. ಇನ್ನು 27 ವರ್ಷದ ವೈದ್ಯ ರಾಹುಲ್ ಯಾದವ್ ಗೆ, ರಫೀಕ್ ಷಾ ಪತ್ನಿ ಖುಷ್ನುಮಾ ಮೂತ್ರಪಿಂಡ ನೀಡಿ ಇಡೀ ಸಮಾಜಕ್ಕೆ ಮಾದರಿಯಾಗಿದ್ದಾರೆ.
ವೈದ್ಯ ರಾಹುಲ್ ಯಾದವ್ ಅವರ ತಂದೆ ಘಾಟ್ಕೋಪರ್ನ ಆಟೋ ಚಾಲಕರು. ಹೆಸರು ಅಶೋಕ್ . ಮಗನಿಗೆ ಕಿಡ್ನಿ ತೊಂದರೆ ಇರುವುದು ತಂದೆಗೆ ಗೊತ್ತಾಗಿತ್ತು. ರಾಹುಲ್ ಯಾದವ್ ಹೊಟ್ಟೆ ಊದಿಕೊಳ್ಳುತ್ತಿತ್ತು. ಮೂರು ವರ್ಷಗಳ ಹಿಂದೆ ಚಿಕಿತ್ಸೆ ನಡೆದಿತ್ತು. ನಂತರ ಡಯಾಲಿಸಿಸ್ ನಡೆದಿತ್ತು. ಓದು ಮುಂದುವರೆಸಿದ್ದ ಯಾದವ್ ವೈದ್ಯರಾದ್ರು. ಅವರ ತಾಯಿ, ಯಾದವ್ ಗೆ ಕಿಡ್ನಿ ದಾನ ಮಾಡಲು ಮುಂದೆ ಬಂದಿದ್ದರು. ಸ್ವ್ಯಾಪ್ ಟ್ರಾನ್ಸ್ಪ್ಲಾಂಟ್ ನಲ್ಲಿ ಕುಟುಂಬದ ಸದಸ್ಯರು ದಾನ ಮಾಡಲು ಬರೋದಿಲ್ಲ. ಯಾದವ್ ಬ್ಲಡ್ ಗ್ರೂಪ್ ಬೇರೆ, ತಾಯಿ ಬ್ಲಡ್ ಗ್ರೂಪ್ ಬೇರೆಯಾಗಿತ್ತು. ಇತ್ತ ಕಲ್ಯಾಣ್ನಲ್ಲಿ ಸಿವಿಲ್ ಗುತ್ತಿಗೆದಾರರೊಂದಿಗೆ ಕೆಲಸ ಮಾಡುತ್ತಿರುವ ರಫೀಕ್ ಷಾ ಕೂಡ ಎರಡು ವರ್ಷಗಳ ಹಿಂದೆ ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿದ್ದರು. ಅವರ ಪತ್ನಿ ಕಿಡ್ನಿ ನೀಡಲು ಸಿದ್ಧವಾಗಿದ್ದರೂ, ಇಬ್ಬರ ಬ್ಲಡ್ ಗ್ರೂಪ್ ಬೇರೆ ಇದ್ದ ಕಾರಣ ಇದು ಸಾಧ್ಯವಾಗಿರಲಿಲ್ಲ..!
ಇದೀಗ ಒಂದು ವರ್ಷಗಳ ಹಿಂದೆ ಭೇಟಿಯಾದ ಇವರಿಬ್ಬರು ಕಿಡ್ನಿ ಅದಲು ಬದಲು ಮಾಡಿಕೊಳ್ಳಲು ಸಿದ್ಧರಾದರು. ಕಾಗದದ ಕೆಲಸ ಶುರುವಾಗಿತ್ತು. ರಕ್ತ ಪರೀಕ್ಷೆಗಳು ನಡೆದ್ವು. ಎಲ್ಲ ಆದ್ಮೇಲೆ ಡಿಸೆಂಬರ್ 15ರಂದು ಕೆಇಎಂ ಆಸ್ಪತ್ರೆಯಲ್ಲಿ ಅಪರೂಪದ ಇಂಟರ್ಜೆನೆರೇಷನ್ ಕಸಿಗಳು ಯಶಸ್ವಿಯಾಗಿ ನಡೆದವು.
ಗಿರಿಜಾ ಅವರು ರಫೀಕ್ ಷಾಗೆ ಹಾಗೂ ಖುಷ್ನುಮಾ ರಾಹುಲ್ ಯಾದವ್ ಗೆ ಕಿಡ್ನಿ ನೀಡುವ ಮೂಲಕ ಹೊಸ ಬಾಂಧವ್ಯ ಬೆಸೆದರು. ಯಶಸ್ವಿ ಶಸ್ತ್ರಚಿಕಿತ್ಸೆ ನಂತ್ರ ಯಾದವ್ ಬುಧವಾರ ಡಿಸ್ಚಾರ್ಜ್ ಆಗಿದ್ದಾರೆ. ಷಾ ತೂಕ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿರುವ ಕಾರಣ ಅವರ ಚೇತರಿಕೆ ತಡವಾಗುತ್ತದೆ. ಹಾಗಾಗಿ ಅವರು ಇನ್ನೂ ಕೆಲವು ದಿನಗಳ ಕಾಲ ಆಸ್ಪತ್ರೆಯಲ್ಲಿ ಇರಬೇಕಾಗುತ್ತದೆ ಎಂದು ವೈದ್ಯ ಡಾ.ತುಕಾರಾಂ ಜಮಾಲೆ ಹೇಳಿದ್ದಾರೆ. ಇವರಿಬ್ಬರು ಪರಸ್ಪರ ಮನೆಗಳಿಗೆ ಭೇಟಿ ನೀಡಿರಲಿಲ್ಲ. ಆಸ್ಪತ್ರೆಯಲ್ಲೇ ಸಂಬಂಧ ಬೆಳೆದಿತ್ತು. ಈಗ ಇಬ್ಬರ ಮಧ್ಯೆ ಬೆಲೆಕಟ್ಟಲಾಗದ ಉಡುಗೊರೆ ವಿನಿಮಯವಾಗಿದೆ. ಅದನ್ನು ಗೌರವಿಸೋದಾಗಿ ಅವರು ಹೇಳಿದ್ದಾರೆ.
ದೇಶದಲ್ಲಿ ಇದೇ ಮೊದಲ ಬಾರಿ ಸ್ವಾಪ್ ಕಸಿ ನಡೆದಿಲ್ಲ. ಈ ಹಿಂದೆ ಮೊದಲ ಬಾರಿ 2006 ರಲ್ಲಿ ಮುಂಬೈನಲ್ಲಿ ಹಿಂದೂ-ಮುಸ್ಲಿಂ ದಂಪತಿ ನಡುವೆ ಸ್ವಾಪ್ ಕಸಿ ನಡೆದಿತ್ತು. ನಂತ್ರ ಜೈಪುರ, ಚಂಡೀಗಢ ಮತ್ತು ಬೆಂಗಳೂರು ಸೇರಿದಂತೆ ಇನ್ನೂ ಕೆಲವು ಅಂತರ್ಧರ್ಮೀಯ ಕಸಿಗಳು ನಡೆದಿವೆ.