ನ್ಯೂಸ್ ನಾಟೌಟ್: ರಾಜ್ಯ ಸರ್ಕಾರ ಬಡವರಿಗೆಂದು ಹಲವು ಯೋಜನೆಗಳು ತರುತ್ತದೆ. ಆದರೆ ಅದೇ ಯೋಜನೆಗಳು ಕೆಲವು ಸಲ ಬಡವರ ಬದುಕಿನಲ್ಲಿ ಬಿರುಗಾಳಿಯನ್ನು ಎಬ್ಬಿಸುತ್ತದೆ ಅನ್ನುವುದಕ್ಕೆ ಇಲ್ಲೊಂದು ಘಟನೆ ತಾಜಾ ಉದಾಹರಣೆಯಾಗಿದೆ.
ಹೌದು, ಇಲ್ಲೊಂದು ಕಡೆ ಗರ್ಭಿಣಿ, ಬಾಣಂತಿಯರಿಗೆ ಅಂಗನವಾಡಿ ಕೇಂದ್ರದಲ್ಲಿ ವಿತರಿಸಲಾದ ಪೌಷ್ಟಿಕ ಆಹಾರ ಪೊಟ್ಟಣದಲ್ಲಿ ಸತ್ತ ಜಿರಳೆಗಳು ಪತ್ತೆಯಾಗಿವೆ. ಈ ಬೆನ್ನಲ್ಲೇ ವ್ಯಾಪಕ ಟೀಕೆಗಳು ಕೂಡ ಕೇಳಿ ಬಂದಿವೆ.
ವಿಜಯಪುರದ ಹಾರೋಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬುಳ್ಳಹಳ್ಳಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಮಂಗಳವಾರ ವಿತರಿಸಲಾದ ಆಹಾರ ಪೊಟ್ಟಣದಲ್ಲಿ 30ಕ್ಕೂ ಹೆಚ್ಚು ಸತ್ತ ಜಿರಳೆಗಳಿವೆ. ಗ್ರಾಮದ ನಿವಾಸಿ ಪೂಜಪ್ಪ ಎಂಬುವರಿಗೆ ನೀಡಿದ ಎರಡು ಆಹಾರ ಪೊಟ್ಟಣಗಳ ಪೈಕಿ ಒಂದರಲ್ಲಿ ಈ ಜಿರಳೆಗಳು ಕಂಡುಬಂದಿವೆ. ಕೂಡಲೇ ಅವರು ಪೊಟ್ಟಣಗಳನ್ನು ಅಂಗನವಾಡಿ ಕೇಂದ್ರಕ್ಕೆ ಒಪ್ಪಿಸಿದ್ದಾರೆ. ‘ಒಂದು ಪೊಟ್ಟಣ ಚೆನ್ನಾಗಿದೆ. ಆದರೂ ಅದರಲ್ಲಿಯ ಹಿಟ್ಟು ಬಳಸಲು, ಮಕ್ಕಳಿಗೆ ಕೊಡಲು ಭಯವಾಗುತ್ತದೆ’ ಎಂದು ಪೂಜಪ್ಪ ಆತಂಕ ವ್ಯಕ್ತಪಡಿಸಿದ್ದಾರೆ.
‘ಪೊಟ್ಟಣಗಳನ್ನು ನಾವು ಇಲ್ಲಿ ತಯಾರು ಮಾಡುವುದಿಲ್ಲ. ನಮಗೆ ಮೂಟೆಗಳಲ್ಲಿ ಸರಬರಾಜು ಮಾಡುತ್ತಾರೆ. ನಾವು ಅವನ್ನು ವಿತರಿಸಿದ್ದೇವೆ ಅಷ್ಟೇ. ಜಿರಳೆ ಸೇರಿಕೊಂಡಿರುವುದಕ್ಕೂ ನಮಗೂ ಸಂಬಂಧವಿಲ್ಲ’ ಎಂದು ಅಂಗನವಾಡಿ ಸಹಾಯಕಿ ತಿಳಿಸಿದ್ದು ಈ ಬಗ್ಗೆ ತನಿಖೆ ನಡೆಸಬೇಕು ಎಂದು ಒತ್ತಾಯ ಕೂಡ ಕೇಳಿ ಬಂದಿವೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೂಲಕ ಅಂಗನವಾಡಿಗಳಿಗೆ ಪೂರೈಸುವ ಈ ಪೌಷ್ಟಿಕ ಆಹಾರ ಪೊಟ್ಟಣಗಳು ದೇವನಹಳ್ಳಿ ಪಟ್ಟಣದ ಒಂದನೇ ವಾರ್ಡ್ ಪ್ರಸನ್ನಹಳ್ಳಿಯಲ್ಲಿ ತಯಾರಾಗುತ್ತಿವೆ. 112ನೇ ಬ್ಯಾಚ್ ನಲ್ಲಿ ತಯಾರಾದ ಪೊಟ್ಟಣದಲ್ಲಿ ಜಿರಳೆಗಳು ಪತ್ತೆ ಆಗಿವೆ. ಜೂನ್ ತಿಂಗಳಲ್ಲಿ ಈ ಆಹಾರ ಪೊಟ್ಟಣ ಪ್ಯಾಕ್ ಮಾಡಲಾಗಿದೆ. ಆಗಸ್ಟ್ 28ರವರೆಗೂ ಉಪಯೋಗಿಸಬಹುದಾಗಿದೆ.
ದೇವನಹಳ್ಳಿಯಲ್ಲಿನ ಆಹಾರ ತಯಾರಿಕ ಘಟಕದಲ್ಲಿ ರಾಜ್ಯದಲ್ಲೇ ಉತ್ತಮವಾದ ಗುಣಮಟ್ಟದ ಪೌಷ್ಟಿಕ ಆಹಾರ ಪೊಟ್ಟಣ ತಯಾರಿಸುತ್ತಿದ್ದಾರೆ. ಇದುವರೆಗೂ ಯಾವುದೇ ದೂರು ಬಂದಿರಲಿಲ್ಲ. ಪಾಕೇಟ್ ನಲ್ಲಿ ಜಿರಳೆಗಳು ಕಾಣಿಸಿಕೊಂಡಿರುವ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಉಪನಿರ್ದೇಶಕ ನಟರಾಜ್ ತಿಳಿಸಿದ್ದಾರೆ.