ನ್ಯೂಸ್ ನಾಟೌಟ್: ರಸ್ತೆ ಬದಿ ನಿಲ್ಲಿಸಿದ್ದ ಸ್ಕೂಟಿಯೊಂದಕ್ಕೆ ಡಿಕ್ಕಿ ಹೊಡೆದು ಪಿಕಪ್ ಚಾಲಕ ಪರಾರಿಯಾಗಿರುವ ಘಟನೆ ಸುಳ್ಯದಿಂದ ವರದಿಯಾಗಿದೆ. ಜು.3 ರಂದು ಸಂಜೆ ಸುಳ್ಯದ ವಿದ್ಯಾನಗರದಲ್ಲಿ ಘಟನೆ ನಡೆದಿದೆ. ಈ ವೇಳೆ ಸುಳ್ಯ ಪೊಲೀಸರು ಸಿನಿಮೀಯ ಶೈಲಿಯಲ್ಲಿ ಬೆನ್ನಟ್ಟಿ ಹಿಡಿದಿದ್ದಾರೆ.
ಅಜ್ಜಾವರದ ಮಾರ್ಗ ಶಿವರಾಮ ಎಂಬವರು ಜು.3 ರಂದು ಸಂಜೆ 5 ಗಂಟೆ ಸುಮಾರಿಗೆ ಸುಳ್ಯದ ಹಳೆಗೇಟು ಬಳಿಯ ವಿದ್ಯಾನಗರದಲ್ಲಿ ರಸ್ತೆ ಬದಿ ಸ್ಕೂಟಿ ನಿಲ್ಲಿಸಿ ಅಂಗಡಿಯತ್ತ ಹೋಗಿದ್ದರು. ಆಗ ಪೈಚಾರು ಕಡೆಯಿಂದ ಸುಳ್ಯ ಕಡೆಗೆ ಬರುತ್ತಿದ್ದ ಪಿಕಪ್ ವಾಹನ ಸ್ಕೂಟಿಗೆ ಗುದ್ದಿದೆ. ಬಳಿಕ ನಿಲ್ಲಿಸದೆ ಮುಂದಕ್ಕೆ ಚಲಿಸಿದೆ. ಪಿಕಪ್ ವಾಹನದಲ್ಲಿ ಶ್ರೀರಾಮ ಎಲೆಕ್ಟ್ರಿಕಲ್ಸ್ ಗುತ್ತಿಗಾರು ಎಂದು ಬರೆದಿದ್ದುದನ್ನು ಸ್ಥಳೀಯರು ನೋಡಿದ್ದರಿಂದ ಪೊಲೀಸರಿಗೆ ದೂರು ನೀಡಲಾಗಿತ್ತು. ಪಿಕಪ್ ಗುದ್ದಿದ ಪರಿಣಾಮವಾಗಿ ಸ್ಕೂಟಿ ಪಕ್ಕದ ಚರಂಡಿಗೆ ಉರುಳಿ ಬಿದ್ದಿತ್ತು. ಅಪಘಾತ ನಡೆದು ಗೊತ್ತಾದ ಬಳಿಕವೂ ಪಿಕಪ್ ನಿಲ್ಲಿಸದೇ ಪರಾರಿಯಾದುದರಿಂದ ಸ್ಥಳೀಯರು ಆ ವಾಹನ ಹಿಂತಿರುಗಿ ಬರುವುದನ್ನು ಸ್ಕೂಟಿ ತೆಗೆಯದೇ ಕಾಯುತ್ತಿದ್ದರು. ಸ್ವಲ್ಪಹೊತ್ತಿನ ಬಳಿಕ ಎರಡು ವಿದ್ಯುತ್ ಕಂಬ ಹೇರಿಕೊಂಡು ಆ ಪಿಕಪ್ ವಾಹನ ಬಂದಿತು. ಆದರೆ ವಿದ್ಯಾನಗರದಲ್ಲಿ ನಿಲ್ಲದೇ ಪೈಚಾರಿನತ್ತ ಹೋಗಿತ್ತು. ವಿಷಯ ತಿಳಿದ ಪೋಲೀಸರು ಬೆನ್ನತ್ತಿ ಸೋಣಂಗೇರಿಯಲ್ಲಿ ಅಡ್ಡಗಟ್ಟಿ ಪಿಕಪ್ ನ್ನು ವಶಪಡಿಸಿಕೊಂಡು ಸುಳ್ಯ ಠಾಣೆಗೆ ಕರೆತಂದರು. ಸ್ಕೂಟಿಗೆ ಪಿಕಪ್ ಗುದ್ದಿ ಅಪಘಾತ ಸಂಭವಿಸಿದ್ದು ಗೊತ್ತಾದರೂ ಸ್ಥಳೀಯರು ಹಿಡಿದು ಹೊಡೆಯಬಹುದೆಂಬ ಹೆದರಿಕೆಯಿಂದ ನಿಲ್ಲಿಸದೇ ಹೋದುದಾಗಿ ಪಿಕಪ್ ಚಾಲಕ ರಕ್ಷಿತ್ ಪೊಲೀಸರಿಗೆ ತಿಳಿಸಿದ್ದಾರೆ.