ನ್ಯೂಸ್ ನಾಟೌಟ್ : ಇತ್ತೀಚಿನ ದಿನಗಳಲ್ಲಿ ಹಿಜಾಬ್ ಗಲಾಟೆ ರಾಜ್ಯದಲ್ಲಿ ಭಾರಿ ತಾರಕಕ್ಕೇರಿರುವುದು ಎಲ್ಲರಿಗೂ ಗೊತ್ತಿದೆ. ಕರ್ನಾಟಕದ ಈ ಗಲಾಟೆ ರಾಷ್ಟ್ರ ಮಟ್ಟದಲ್ಲಿ ಭಾರಿ ವಿವಾದಕ್ಕೆ ಕಾರಣವಾಗಿತ್ತು. ಇದೀಗ ತೆಲಂಗಾಣದಲ್ಲಿ ಶಾಲಾ ವಿದ್ಯಾರ್ಥಿಗಳು ಕೇಸರಿ ಬಟ್ಟೆ ಹಾಕಿ ಬಂದಿದ್ದಕ್ಕೆ ಪ್ರಾಂಶುಪಾಲ ಆಕ್ಷೇಪ ವ್ಯಕ್ತಪಡಿಸಿದ್ದಾನೆ. ಈ ವಿಚಾರ ಭಾರಿ ಗಲಾಟೆಗೆ ಕಾರಣವಾಗಿದೆ. ಹಿಂದೂ ಕಾರ್ಯಕರ್ತರು ಶಾಲೆಯ ಮೇಲೆ ದಾಳಿ ಮಾಡಿದ್ದಾರೆ. ಶಾಲೆ ಮೇಲೆ ಕಲ್ಲು ತೂರಾಟ ಕೂಡ ನಡೆದಿದೆ.
ಕನ್ನೆಪಳ್ಳಿ ಎಂಬ ಗ್ರಾಮದಲ್ಲಿರುವ ಬ್ಲೆಸ್ಡ್ ಮದರ್ ತೆರೆಸಾ ಹೈ ಸ್ಕೂಲ್ನಲ್ಲಿ ಕೆಲ ದಿನಗಳಿಂದ ವಿದ್ಯಾರ್ಥಿಗಳು ಕೇಸರಿ ಬಟ್ಟೆ ಧರಿಸಿ ತರಗತಿಗಳಿಗೆ ಆಗಮಿಸಿದ್ದಾರೆ. ಇದೇ ವೇಳೆ, ಶಾಲೆಯ ಪ್ರಾಂಶುಪಾಲ, ಕೇರಳದ ಮೂಲದ ಜೈಮೊನ್ ಜೋಸೆಫ್ ಅವರು ವಿದ್ಯಾರ್ಥಿಗಳ ನಡೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನಿಮ್ಮ ತಂದೆ-ತಾಯಿಯನ್ನು ಶಾಲೆಗೆ ಕರೆದುಕೊಂಡು ಬನ್ನಿ ಎಂದು ಗದರಿದ್ದಾರೆ. ಹನುಮಾನ್ ದೀಕ್ಷೆ ಇರುವ ಕಾರಣ 21 ದಿನ ಕೇಸರಿ ಬಟ್ಟೆ ಧರಿಸುವುದು ಸಂಪ್ರದಾಯ ಎಂದರೂ ಕೇಳದೆ ಪ್ರಾಂಶುಪಾಲ ಗದರಿದ್ದಾರೆ.
ಕೇಸರಿ ಉಡುಪು ಧರಿಸಿ ಬರಬೇಡಿ ಎಂಬುದಾಗಿ ಶಾಲೆಯ ಆಡಳಿತ ಮಂಡಳಿ ಆಗ್ರಹಿಸಿದ ಹಿನ್ನೆಲೆಯಲ್ಲಿ ಶಾಲೆಯ ಇಬ್ಬರು ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಾಗಿದೆ. ವಿದ್ಯಾರ್ಥಿಗಳ ಪೋಷಕರು ನೀಡಿದ ದೂರಿನ ಮೇರೆಗೆ ಇಬ್ಬರು ಸಿಬ್ಬಂದಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆ, ಎರಡು ಸಮುದಾಯಗಳ ಮಧ್ಯೆ ವೈಷಮ್ಯ ಬಿತ್ತಿರುವುದು ಸೇರಿ ಹಲವು ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. ಪ್ರಾಂಶುಪಾಲರನ್ನು ಕೆಲಸದಿಂದ ವಜಾಗೊಳಿಸಬೇಕು ಎಂದು ಹಿಂದು ಸಂಘಟನೆಗಳ ಕಾರ್ಯಕರ್ತರು ಆಗ್ರಹಿಸಿದ್ದಾರೆ.