ನ್ಯೂಸ್ ನಾಟೌಟ್: ಪುತ್ತೂರಿನ ಕಾಲೇಜು ವಿದ್ಯಾರ್ಥಿನಿಯನ್ನು ಗರ್ಭವತಿಯನ್ನಾಗಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಹಪಾಠಿ ವಿದ್ಯಾರ್ಥಿಯ ಶ್ರೀಕೃಷ್ಣ ಜೆ ರಾವ್ (21 ವರ್ಷ) ಎಂಬಾತನನ್ನು ಶುಕ್ರವಾರ ಮೈಸೂರಿನಲ್ಲಿ ಪೊಲೀಸರು ವಶಕ್ಕೆ ಪಡೆದ ಬೆನ್ನಲ್ಲೇ ಪ್ರಕರಣ ಸಂಬಂಧಿಸಿದಂತೆ ಆರೋಪಿಯ ತಂದೆ ಬಿಜೆಪಿ ಮುಖಂಡ ಜಗನ್ನಿವಾಸ್ ರಾವ್ ಅವರನ್ನೂ ಪೊಲೀಸರು ಬಂಧಿಸಿ ಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಆರೋಪಿ ಕೃಷ್ಣನನ್ನು ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಪೊಲೀಸ್ ಠಾಣೆಯ ಅಧಿಕಾರಿಗಳು ಮೈಸೂರಿನ ಟಿ. ನರಸಿಪುರ ಪ್ರದೇಶದಲ್ಲಿ ವಶಕ್ಕೆ ಪಡೆದು ಪುತ್ತೂರಿಗೆ ಕರೆತಂದು ವೈದ್ಯಕೀಯ ಪರೀಕ್ಷೆ ನಡೆಸಿದ್ದಾರೆ. ಮಗನ ಬಂಧನದ ಬೆನ್ನಲ್ಲೇ, ಆರೋಪಿಯನ್ನು ತಪ್ಪಿಸಲು ಸಹಾಯ ಮಾಡಿದ ತಂದೆ ಜಗನ್ನಿವಾಸ್ ರಾವ್ ಅವರನ್ನು ಕೂಡ ಪೊಲೀಸರು ವಶಕ್ಕೆ ಪಡೆದಿದ್ದರು. ಸದ್ಯ ಕೃಷ್ಣ ಜೆ. ರಾವ್ ಬಂಧನವಾಗಿದ್ದು, ಮುಂದಿನ ತನಿಖೆ ತೀವ್ರಗೊಂಡಿದೆ.
ಕೃಷ್ಣ ಜೆ. ರಾವ್ ವಿರುದ್ಧ ಹೈಸ್ಕೂಲ್ ದಿನಗಳಲ್ಲೇ ಪ್ರಾರಂಭವಾದ ಪ್ರೇಮ ಸಂಬಂಧದ ಬಳಿಕ ಸಂತ್ರಸ್ತೆ ಮೇಲೆ ದೈಹಿಕ ಶೋಷಣೆಯ ಆರೋಪ ಕೇಳಿಬಂದಿದೆ. ಇಂಜಿನಿಯರಿಂಗ್ ಓದುತ್ತಿದ್ದ ಕೃಷ್ಣ, 2024ರ ಅಕ್ಟೋಬರ್ 11ರಂದು ತನ್ನ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಮದುವೆಯಾಗುತ್ತೇನೆ ಎಂದು ನಂಬಿಸಿ ಸಂತ್ರಸ್ತೆಯೊಂದಿಗೆ ದೈಹಿಕ ಸಂಬಂಧ ಹೊಂದಿದ ಎಂಬ ಆರೋಪ ಇದೆ. ಬಳಿಕ 2025ರ ಜನವರಿಯಲ್ಲಿ ಕೃಷ್ಣನಿಂದ ದೈಹಿಕ ಸಂಪರ್ಕ ನಡೆದಿದ್ದು, ಆ ಬಳಿಕ ಯುವತಿ ಗರ್ಭವತಿಯಾದ ಮಾಹಿತಿ ಹೊರಬಂದಿದೆ. ಆದರೆ, ಮದುವೆಯಾಗಲು ಕೃಷ್ಣ ನಿರಾಕರಿಸಿದ್ದಾನೆ ಎನ್ನಲಾಗಿದೆ.