ನ್ಯೂಸ್ ನಾಟೌಟ್: ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿರುವ ಇನ್ನೂ ನಾಲ್ವರು ತಲೆಮರೆಸಿಕೊಂಡು ಅವರ ಬಂಧನ ನಡೆದಿಲ್ಲ. ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನುಸುತ್ತಿರುವ ಈ ನಾಲ್ವರ ಬಂಧನಕ್ಕೆ ಇದೀಗ ಅಧಿಕಾರಿಗಳು ಟೊಂಕಕಟ್ಟಿ ನಿಂತಿದ್ದಾರೆ. ಈ ಪ್ರಕಾರವಾಗಿ ಆರೋಪಿಗಳ ಸುಳಿವನ್ನು ನೀಡಿದರೆ ಅಂತಹವರಿಗೆ ರಾಷ್ಟ್ರೀಯ ತನಿಖಾ ದಳ (ಎನ್ಐಎ) ಭಾರಿ ನಗದು ಮೊತ್ತವನ್ನು ಘೋಷಿಸಿದೆ.
ಕೊಲೆ ಪ್ರಕರಣದ ಆರೋಪಿಗಳಾದ ಬೆಳ್ಳಾರೆ ಗ್ರಾಮದ ಮುಹಮ್ಮದ್ ಮುಸ್ತಫ ಎಸ್. ಹಾಗೂ ಮಡಿಕೇರಿಯ ಗದ್ದಿಗೆ ನಿವಾಸಿ ತುಫೈಲ್ ಎಂ.ಎಚ್. ಬಗ್ಗೆ ಮಾಹಿತಿ ನೀಡುವವರಿಗೆ ತಲಾ 5 ಲಕ್ಷ ರೂ. ನಗದು ಘೋಷಣೆ ಮಾಡಿದೆ. ಅದೇ ರೀತಿ, ಸುಳ್ಯದ ಕಲ್ಲುಮುಟ್ಲು ಮನೆ ನಿವಾಸಿ ಉಮರ್ ಫಾರೂಕ್ ಎಂ.ಆರ್. ಮತ್ತು ಬೆಳ್ಳಾರೆ ನಿವಾಸಿ ಅಬೂಬಕರ್ ಸಿದ್ದೀಕ್ ಎಂಬವರ ಬಗ್ಗೆ ಮಾಹಿತಿ ನೀಡುವವರಿಗೆ ತಲಾ 2 ಲಕ್ಷ ರೂ. ನಗದು ಬಹುಮಾನ ನಿಗದಿಪಡಿಸಲಾಗಿದೆ. ಈ ನಾಲ್ವರು ಆರೋಪಿಗಳು ಪಿಎಫ್ ಐ ಸಂಘಟನೆಯ ಸದಸ್ಯರು ಎಂದು ಎನ್ಐಎ ತಿಳಿಸಿದ್ದು, ಇವರ ಬಗ್ಗೆ ಮಾಹಿತಿ ಇದ್ದಲ್ಲಿ ಬೆಂಗಳೂರಿನ ಶ್ರೀ ಎಂ.ವಿಶ್ವೇಶ್ವರಯ್ಯ ಕೇಂದ್ರೀಯ ಭವನದಲ್ಲಿರುವ ಎನ್ ಐಎ ಕಚೇರಿ ಅಥವಾ ದೂರವಾಣಿ ಸಂಖ್ಯೆ 080-29510900, ಮೊ.ಸಂ. 8904241100 ಅಥವಾ ಇ ಮೇಲ್: info.blr.nia@gov.inಗೆ ಮಾಹಿತಿ ನೀಡಬಹುದು. ಮಾಹಿತಿದಾರರ ವಿವರಗಳನ್ನು ಗೌಪ್ಯವಾಗಿಡಲಾಗುವುದು ಎಂದು ಎನ್ಐಎ ಪ್ರಕಟಣೆಯಲ್ಲಿ ತಿಳಿಸಿದೆ.