ನ್ಯೂಸ್ ನಾಟೌಟ್: ಪ್ರಣವ ಫೌಂಡೇಶನ್ ಬೆಂಗಳೂರು ಮುಂದಾಳತ್ವದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸುಳ್ಯ ಸಹಕಾರದಲ್ಲಿ ಶಿಕ್ಷಕರ ದಿನಾಚರಣೆಯ ಅಂಗವಾಗಿ ಸೆ.30ರಂದು ಗುರುವಂದನಾ ಕಾರ್ಯಕ್ರಮ ಸುಳ್ಯದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ 60 ಶಿಕ್ಷಕರನ್ನು ಸನ್ಮಾನಿಸಲಾಗುವುದು ಎಂದು ಪ್ರಣವ ಫೌಂಡೇಶನ್ನ ಕಾರ್ಯಕ್ರಮ ಸಂಯೋಜಕ ಸುಳ್ಯದ ಮಹೇಶ್ ರೈ ಮೇನಾಲ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಮಾಜಮುಖಿ ಕಾರ್ಯಕ್ರಮದಲ್ಲಿ ಮುಂಚೂಣಿಯಲ್ಲಿರುವ ಸಂಸ್ಥೆ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದೆ.
ಪ್ರಸಕ್ತ ವರ್ಷ ಸುಳ್ಯ ತಾಲೂಕಿನ ಅನುದಾನಿತ, ಅನುದಾನರಹಿತ, ಸರಕಾರಿ ಶಾಲೆ ಸೇರಿ ಒಟ್ಟು 20 ಶಿಕ್ಷಕರು, ಅತ್ಯುತ್ತಮ ಸೇವೆ ಸಲ್ಲಿಸುತ್ತಿರುವ 20 ಮಂದಿ ಅಂಗನವಾಡಿ ಕಾರ್ಯಕರ್ತೆಯರು, 20 ಮಂದಿ ವಿಕಲಾಂಗಚೇತನ ಶಿಕ್ಷಕರನ್ನು ಸನ್ಮಾನಿಸಲಾಗುವುದು. ಕಾರ್ಯಕ್ರಮದಲ್ಲಿ ಸುಳ್ಯದ ಶಾಸಕಿ ಭಾಗೀರಥಿ ಮುರುಳ್ಯ ಸಹಿತ ಹಲವು ಮಂದಿ ಗಣ್ಯರು ಭಾಗವಹಿಸಲಿದ್ದಾರೆ ಎಂದು ಮಹೇಶ್ ರೈ ಮೇನಾಲ ತಿಳಿಸಿದರು.
ಸುಸಜ್ಜಿತ ಆಸ್ಪತ್ರೆ ನಿರ್ಮಾಣ: ಪ್ರಣವ ಸಂಸ್ಥೆ ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಇದೀಗ ಆಸ್ಪತ್ರೆ ನಿರ್ಮಿಸುವ ಯೋಜನೆ ಹಾಕಿಕೊಂಡಿದೆ. ಇದಕ್ಕಾಗಿ ನಿಂತಿಕಲ್ಲಿನಲ್ಲಿ ಸ್ಥಳ ಗುರುತಿಸಲಾಗಿದೆ. 25 ಬೆಡ್ನ ಸುಸಜ್ಜಿತ ಆಸ್ಪತ್ರೆ ನಿರ್ಮಿಸಲಾಗುವುದು. ಸುಳ್ಯ ಶಾಸಕರ ನೇತೃತ್ವದಲ್ಲಿ ಕಾರ್ಯ ಆರಂಭಿಸಲು ತೀರ್ಮಾನಿಸಲಾಗಿದೆ ಎಂದು ಮಹೇಶ್ ರೈ ಮೇನಾಲ ತಿಳಿಸಿದರು.
ಫೌಂಡೇಶನ್ನ ಸ್ಥಾಪಕ ಕಾರ್ಯದರ್ಶಿ ನಾಗರಾಜ್ ಹೆಬ್ಬಾಳ್ ಮಾತನಾಡಿ, ಕೊರೊನಾ ಸಂದರ್ಭ ಹುಟ್ಟಿಕೊಂಡ ನಮ್ಮ ಫೌಂಡೇಶನ್ ನಿರಂತರವಾಗಿ ಸಮಾಜಸೇವೆಯಲ್ಲಿ ತೊಡಗಿಕೊಂಡಿದೆ. ಅಲ್ಲಿಂದ ನಿರಂತರ ಸಮಾಜಮುಖಿಯಾಗಿ ತೊಡಗಿಸಿಕೊಂಡಿವೆ. ಶೈಕ್ಷಣಿಕ ಮತ್ತು ಆರೋಗ್ಯಕ್ಕೆ ಮೊದಲ ಆದ್ಯತೆ ನೀಡುತ್ತಿದೆ. ಸಂಸ್ಥೆಯ ವತಿಯಿಂದ ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ಡಯಾಲಿಸಿ ಮೆಷಿನ್ ಕೊಡುಗೆಯಾಗಿ ನೀಡಲಾಗಿದ್ದು, ಹಲವಾರು ಮಂದಿ ಇದರ ಪ್ರಯೋಜನ ಲಭಿಸುತ್ತಿದೆ. ಶಾಲೆಗಳಿಗೆ ಲ್ಯಾಪ್ಟ್ಯಾಪ್ ಸಹಿತ, ಡಿಜಿಟಲ್ ಶಿಕ್ಷಣಕ್ಕೆ ಬೇಕಾದ ಸೌಲಭ್ಯ ಒದಗಿಸಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಪ್ರಣವ ಫೌಂಡೇಶನ್ನ ಟ್ರಸ್ಟಿ ಮಂಜುನಾಥ ಭಟ್ ಉಪಸ್ಥಿತರಿದ್ದರು.