ನ್ಯೂಸ್ ನಾಟೌಟ್: ಕ್ರಿ.ಶ 1837 ಮತ್ತು 1976 ಸುಳ್ಯದ ಚರಿತ್ರೆಯಲ್ಲಿ ಮರೆಯಲಾಗದ ವರ್ಷಗಳು. ಯಾಕೆಂದರೆ ಈ ಎರಡು ವರ್ಷಗಳು ಸುಳ್ಯದ ಆಸ್ಮಿತೆಯನ್ನೇ ರೂಪಿಸಿವೆ ಮತ್ತು ಚರಿತ್ರೆಯಲ್ಲಿ ಸುಳ್ಯದ ಹೆಸರನ್ನು ದಾಖಲಿಸಿವೆ.
1837 ರಲ್ಲಿ ಈಸ್ಟ್ ಇಂಡಿಯಾ ಕಂಪನಿಯ ವಸಾಹತುಶಾಹಿ ಆಡಳಿತದ ವಿರುದ್ಧ ಸುಳ್ಯದಿಂದ ಆರಂಭಿಸಲಾದ ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಿಟಿಶರನ್ನು ಹೊರದಬ್ಬಿ ಸ್ವತಂತ್ರ ಸರಕಾರವೊಂದನ್ನು ರಚಿಸಿ 13 ದಿನಗಳ ಕಾಲ ಆಡಳಿತ ನಡೆಸಿದವರು ಸುಳ್ಯದ ನಾಯಕರು. ಕೆ.ವಿ.ಜಿ ಯವರ ಬಗ್ಗೆ ಬರೆಯುವಾಗ ಆ ಘಟನೆಗಳು ಮುಖ್ಯವಾಗುತ್ತವೆ. ಯಾಕೆಂದರೆ, 14ನೇ ದಿನದ ನಂತರದಲ್ಲಿ ನಡೆದ ವಿದ್ಯಮಾನಗಳು ಸುಳ್ಯ ಪ್ರದೇಶವನ್ನು ಶಾಶ್ವತವಾಗಿ ಧಮನಿಸಿ, ಶೋಷಣೆಗೊಳಪಡಿಸುತ್ತಾ ಮತ್ತೆ ತಲೆ ಎತ್ತದಂತೆ ಒಟ್ಟು ಪ್ರದೇಶವನ್ನೇ ಹಿಂದುಳಿಯುವಂತೆ ಮಾಡಲಾಯಿತು.
1947 ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ದೊರೆತರೂ, ಈ ಭಾಗದ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಪರಿಸ್ಥಿತಿ ಬದಲಾಗಲಿಲ್ಲ. ಅನೇಕ ಸರಕಾರಗಳು ಬಂದು ಹೋದವು, ಆದರೆ ಶಿಕ್ಷಣ, ಆಸ್ಪತ್ರೆ, ರಸ್ತೆ, ಸಾರಿಗೆ ಸಂಪರ್ಕ, ವಿದ್ಯುತ್ ಮೊದಲಾದ ನಾಗರಿಕರ ಮೂಲಭೂತ ಸೌಲಭ್ಯಗಳು ಸುಧಾರಿಸಲಿಲ್ಲ. ಗುಡ್ಡಗಾಡಿನಿಂದ ಕೂಡಿದ, ದೀರ್ಘ ಮಳೆಗಾಲವಿರುವ ಮಲೆನಾಡಿನ ಈ ಪ್ರದೇಶದ ಹಳ್ಳಿಗಳು ವರ್ಷದ ಬಹುಕಾಲ ಸಂಪರ್ಕ ರಹಿತ ಗ್ರಾಮಗಳಾಗಿಯೇ ಇದ್ದುವು. ಬಡವರಿಂದಲೇ ತುಂಬಿದ್ದ ಜನವಸತಿ ಪ್ರದೇಶಗಳ ಮಂದಿ ಕಾಯಿಲೆ ಬಂದಾಗ, ಹೆರಿಗೆ, ಆಕಸ್ಮಿಕವಾಗಿ ಎರಗುವ ಅಪಘಾತಗಳ ಸಂದರ್ಭಗಳಲ್ಲಿ ಪುತ್ತೂರು, ಮಂಗಳೂರಿಗೇ ಹೋಗಬೇಕಾಗಿತ್ತು. ಪ್ರಾಥಮಿಕದ ನಂತರದ ಶಿಕ್ಷಣ ಪಡೆಯುವ ಅವಕಾಶಗಳಿಲ್ಲದೆ, ಉನ್ನತ ಶಿಕ್ಷಣಗಳಿಗೆ ಸೌಲಭ್ಯಗಳಿಲ್ಲದೇ ಈ ಪ್ರದೇಶ ಶೈಕ್ಷಣಿಕವಾಗಿ ತೀರಾ ಹಿಂದುಳಿದಿತ್ತು.
ಸಂಚಾರ, ಸಾಗಣಿಕೆಗಳಿಗೆ ರಸ್ತೆಗಳೂ ಇರಲಿಲ್ಲ, ವಾಹನಗಳೂ ಇರಲಿಲ್ಲ. ಕುಗ್ರಾಮಗಳಿಂದಲೇ ತುಂಬಿದ್ದ ಪ್ರದೇಶವಾಗಿದ್ದ ಸುಳ್ಯದ ಚಿತ್ರಣ ಬದಲಾದದ್ದೆ 1976 ರ ನಂತರ. ಅದು ಕುರುಂಜಿ ವೆಂಕಟರಮಣ ಗೌಡರು ಪ್ರವರ್ತಿಸಿದ ಶಿಕ್ಷಣ ಕ್ರಾಂತಿಯ ನಂತರ. ಈ ಬಗ್ಗೆ ಬಹಳ ಮಂದಿ ಬರೆದು, ಮುದ್ರಿಸಿ ದಾಖಲಿಸಿರುವುದು ನಮ್ಮ ಕಣ್ಣ ಮುಂದೆಯೇ ಇದೆ. ಆದರೆ ಇವುಗಳ ಹೊರತಾಗಿ ಒಂದೆರಡು ಮಹತ್ವದ ಬೆಳವಣಿಗೆಗಳು ಆಗಿರುವುದೂ ಶ್ರೀ ಕುರುಂಜಿಯವರ ದೂರದರ್ಶಿತ್ವದಲ್ಲಿ, ಅವುಗಳನ್ನು ಪ್ರಸ್ತಾಪಿಸುವುದಷ್ಟೇ ಸದ್ರಿ ಲೇಖನದ ಉದ್ದೇಶ. ಇದು ಕೂಡ ನೆನಪಿನಲ್ಲಿರುವ ವಿಷಯಗಳಾಗಿದ್ದು ಯಾವ ರೀತಿಯಲ್ಲೂ ಪರಿಪೂರ್ಣವೆಂದು ನಾನು ಭಾವಿಸಿರುವುದಿಲ್ಲ.
‘Rome was not built in a day’ ಎಂಬ ಮಾತಿದೆ. ಅತ್ಯದ್ಭುತವಾದ ವಾಸ್ತು ನಿರ್ಮಾಣವಾಗಲಿ, ಜಗತ್ಪ್ರಸಿದ್ಧ ಚಿತ್ರ, ಶಿಲ್ಪಕಲೆಗಳಾಗಲಿ ರೋಮ್ ನಗರವನ್ನು ರೂಪಿಸಿವೆಯಾದರೂ, ಅದಕ್ಕೆ ಹಲವಾರು ಶತಮಾನಗಳೇ ಬೇಕಾಯಿತು. ಹಾಗೆಯೇ ಸುಳ್ಯ ಪ್ರದೇಶಾಭಿವೃದ್ದಿಗೆ, ಅದು ಇಂದಿನ ಈ ಮಟ್ಟಕ್ಕೆ ತಲುಪಲು ಹಲವಾರು ವರ್ಷಗಳೇ ಬೇಕಾದವು. 1976 ರ ಜೂನ್ ತಿಂಗಳಲ್ಲಿ ನೆಹರೂ ಸ್ಮಾರಕ ಮಹಾವಿದ್ಯಾಲಯವನ್ನು ಕೆ.ವಿ.ಜಿಯವರು ಸ್ಥಾಪಿಸಿದರಾದರೂ ಅದಕ್ಕಿಂತ ಒಂದೆರಡು ವರ್ಷಗಳ ಮೊದಲೇ ಪ್ರತಿಷ್ಠಿತ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ (AOLE) ಎಂಬ ಮಾತೃ ಸಂಸ್ಥೆಯನ್ನು ಹುಟ್ಟುಹಾಕಿದ್ದರು. ಸುಳ್ಯದ ಪ್ರಗತಿಗೆ ಇದೇ ಆರಂಭವಲ್ಲ, ಇವುಗಳಿಗೆ ಪೂರಕವಾಗಿ ಸುಳ್ಯವನ್ನೇ ಸಿದ್ಧಪಡಿಸುವ ಕೆಲಸದಲ್ಲಿ ಅವರು ನಿರತರಾಗಿದ್ದರೆಂಬುದು ಇಂದು ತಿರುಗಿ ನೋಡಿದರೆ ಗಮನಕ್ಕೆ ಬರುತ್ತದೆ. ಆ ಕಾಲಕ್ಕೆ ಸುಳ್ಯದ ಸಾರ್ವಜನಿಕ ವಲಯದಲ್ಲಿ ಸೇವಾ ಮನೋಭಾವದಿಂದ ತೊಡಗಿಸಿಕೊಂಡವರಲ್ಲಿ ಕುರುಂಜಿ ವೆಂಕಟ್ರಮಣ ಗೌಡರು ಪ್ರಮುಖರಾಗಿದ್ದಾರೆ. ಇವರೊಂದಿಗೆ ಅಡ್ಕಾರು ರಾಮಣ್ಣ ಗೌಡ , ಬೆಟ್ಟ ಈಶ್ವರ ಭಟ್ಟ, ಸುಬ್ಬಯ್ಯ ನಾಯ್ಕ, ಎಂ.ಗಂಗಯ್ಯ ಗೌಡ, ಪಡ್ಡಂಬೈಲು ವೆಂಕಟ್ರಮಣ ಗೌಡ, ಮುಂಡೋಡಿ ಬೆಳ್ಯಪ್ಪ ಗೌಡ, ದೇಂಗೋಡಿ ಸುಬ್ಬಣ್ಣ ಗೌಡ, ಹೀಗೆ ತಾಲೂಕಿನಾದ್ಯಂತ ಅನೇಕ ಮುಖಂಡರಿದ್ದರು. ಅದೇನಿದ್ದರೂ ಕೆ.ವಿ.ಜಿಯವರು ತಮ್ಮ ಕಾರ್ಯಕ್ಷಮತೆಯಿಂದ ಮುಂಚೂಣಿ ನಾಯಕರಂತಿದ್ದರು.
ಇವರ ಹೋರಾಟದ ಪರಿಣಾಮವಾಗಿ 1965 ರಲ್ಲಿ ಪುತ್ತೂರು ತಾಲೂಕಿನಿಂದ ಸುಳ್ಯವನ್ನು ಪ್ರತ್ಯೇಕಿಸಿ ಹೊಸ ತಾಲೂಕನ್ನಾಗಿ ಮಾಡಲಾಯಿತು. ಈ ಮೂಲಕ ಒಂದು ತಾಲೂಕು ನಿರ್ವಹಣೆಗೆ ಪೂರಕವಾದ ಎಲ್ಲಾ ಇಲಾಖೆಗಳೂ ಸುಳ್ಯವನ್ನು ಕೇಂದ್ರೀಕರಿಸಿಕೊಂಡು ಸ್ಥಾಪನೆಯಾದವು. ಸುಳ್ಯದಲ್ಲಿ ಮುನ್ಸಿಫ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಸ್ಥಾಪನೆಯಾಯಿತು. ತಾಲೂಕು ಅಂದಮೇಲೆ ತಾಲೂಕು ಕಛೇರಿ, ತಹಶೀಲ್ದಾರರು, ಸಬ್ ರಿಜಿಸ್ಟ್ರಾರ್, ಭೂ ಮಾಪನ ಇಲಾಖೆ, ಕೃಷಿ, ತೋಟಗಾರಿಗೆ, ಪಶು ಸಂಗೋಪನಾ, ಅರಣ್ಯ ಇಲಾಖೆ (ಎ.ಸಿ.ಎಫ್), ಪಿ.ಡಬ್ಯೂ.ಡಿ, ವಿದ್ಯುತ್ ಇಲಾಖೆ, ಟೆಲಿಫೋನ್, ಹೀಗೆ ಹತ್ತು ಹಲವು ಇಲಾಖೆಗಳ ಕಛೇರಿಗಳನ್ನು ಕೆ.ವಿ.ಜಿ ಯವರು ಸುಳ್ಯಕ್ಕೆ ತರಿಸಿದರು. ಅದುವರೆಗೆ ಇಲ್ಲಿಯ ಜನರು ಇಂತಹ ಪ್ರತಿಯೊಂದು ಸರಕಾರಿ ಕೆಲಸಗಳಿಗೆ ಪುತ್ತೂರಿಗೆ ಹೋಗಬೇಕಾಗಿತ್ತು. ಜನರ ಸಮಯ, ಹಣ ವ್ಯರ್ಥವಾಗುವುದು ತಪ್ಪಿತು. ಈ ಮೂಲಕ ನಿಧಾನವಾಗಿ ಸಾರ್ವಜನಿಕ ಸೌಲಭ್ಯಗಳು ದೊರೆಯುವ ಅವಕಾಶವಾಯಿತು.
ಬ್ರಿಟಿಶ್ ಆಡಳಿತಾವಧಿಯಲ್ಲಿ ಸುಳ್ಯ, ಪುತ್ತೂರು ಮತ್ತು ಬೆಳ್ತಂಗಡಿ ಸೇರಿ ಉಪ್ಪಿನಂಗಡಿ ತಾಲೂಕಾಗಿತ್ತು. ಬಳಿಕ ಉಪ್ಪಿನಂಗಡಿ ತಾಲೂಕನ್ನು ವಿಭಜಿಸಿ ಪುತ್ತೂರು ಮತ್ತು ಬೆಳ್ತಂಗಡಿ ತಾಲೂಕುಗಳ ರಚನೆಯಾಗಿತ್ತು. ಅವಿಭಜಿತ ಪುತ್ತೂರು ತಾಲೂಕಿಗೆ(ವಿಧಾನ ಸಭಾಕ್ಷೇತ್ರ) ಎರಡು ಜನ ಶಾಸಕರಿದ್ದರು. ಈ ಪೈಕಿ ಒಬ್ಬರು ಮೀಸಲು ಕ್ಷೇತ್ರದ ಶಾಸಕರಾಗಿದ್ದರು. ಅದೇನಿದ್ದರೂ ಸುಳ್ಯಕ್ಕೊಬ್ಬ ಪ್ರತ್ಯೇಕ ಶಾಸಕರು ದೊರೆಯುವಂತಾಯಿತು. ಕೆ.ವಿ.ಜಿ ಯವರು ಕಾಂಗ್ರೇಸ್ ಪಕ್ಷದ ನಾಯಕರಾಗಿದ್ದ ಕಾರಣ ಸುಳ್ಯ ತಾಲೂಕು ರಚನೆ ಮತ್ತು ಅಭಿವೃದ್ಧಿಯ ಹರಿಕಾರರಾದರು. ಇದರ ಮುಂದುವರಿದ ಭಾಗವೇ ಲಿಬರಲ್ ಎಜ್ಯುಕೇಶನ್ ಅಕಾಡೆಮಿಯ ಸ್ಥಾಪನೆ.
ಅಕಾಡೆಮಿಯ ಪ್ರಪ್ರಥಮ ಶಿಕ್ಷಣ ಸಂಸ್ಥೆಯೇ ಎನ್ಎಂಸಿ. ಆರಂಭಿಸುವಾಗ ಬಿ.ಎ ಮತ್ತು ಬಿ.ಕಾಂ ಎಂಬ ಎರಡು ಪದವಿ ಕೋರ್ಸುಗಳಿದ್ದವು. ಸುಳ್ಯ, ಬೆಳ್ಳಾರೆ ಮತ್ತು ಸುಬ್ರಹ್ಮಣ್ಯಗಳಲ್ಲಿ ಮಾತ್ರ ಪಿಯುಸಿ ಕಲಿಯುವ ಅವಕಾಶವಿತ್ತು. ಪದವಿ ಶಿಕ್ಷಣಕ್ಕೆ ಪುತ್ತೂರು ಅಥವಾ ಮಂಗಳೂರಿಗೆ ಹೋಗಬೇಕಾಗಿತ್ತು. ಅದು ಆಗದ ವಿಷಯವಾಗಿತ್ತು. ಸದ್ರಿ ಲೇಖಕನಿಗೆ ಪದವಿ ಕೋರ್ಸು ಮಾಡಬೇಕೆಂಬ ಹಂಬಲವಿತ್ತಾದರೂ ಅಲ್ಲೆಲ್ಲಾ ಹೋಗಿ ಕಲಿಯುವ ಆರ್ಥಿಕ ಸಾಮರ್ಥ್ಯವಿರಲಿಲ್ಲ. ಸುಳ್ಯದಲ್ಲಿ ಕಾಲೇಜು ತೆರೆದ ಕಾರಣ ಮುಂದಿನ ಸಾಧನೆ ಸಾಧ್ಯವಾಯಿತು. ಹೀಗೆ ಆರಂಭವಾದ ಕೆ.ವಿ.ಜಿ. ಶಿಕ್ಷಣ ಕ್ರಾಂತಿಯ ಫಲವಾಗಿ ಇಂದು ಮೆಡಿಕಲ್ ಕಾಲೇಜು, ಆಯುರ್ವೇದ ಮೆಡಿಕಲ್ ಕಾಲೇಜು, ದಂತ ವೈದ್ಯಕೀಯ, ನರ್ಸಿಂಗ್, ಇಂಜಿನಿಯರಿಂಗ್, ಪಾಲಿಟೆಕ್ನಿಕ್, ಐ.ಟಿ.ಐ, ಕಾನೂನು ಕಾಲೇಜು, ಕಲೆ, ವಾಣಿಜ್ಯ, ವಿಜ್ಞಾನ, ಪದವಿ ಪೂರ್ವ ಕಾಲೇಜು, ಪ್ರೌಢ , ಪ್ರಾಥಮಿಕ ಶಾಲೆ ಹೀಗೆ ಕೆ.ವಿ.ಜಿ ಹೆಸರಿನ ಶಿಕ್ಷಣ ಸಂಸ್ಥೆಗಳೇ ಸುಳ್ಯದ ಗುರುತು. ಈ ಶಿಕ್ಷಣ ಸಂಸ್ಥೆಗಳೇ ಸುಳ್ಯದ ಆಸ್ಮಿತೆ. ಕೆ.ವಿ.ಜಿ. ಸುಳ್ಯದ ಯುಗ ಪ್ರವರ್ತಕ. ಅವರೊಬ್ಬ ವ್ಯಕ್ತಿಯಾಗಿ, ಶಕ್ತಿಯಾಗಿ, ಸುಳ್ಯಕ್ಕೆ ಸುಳ್ಯವೇ ಹೆಮ್ಮೆ ಪಡುವ ಸ್ವಾಭಿಮಾನದ ಸಂಕೇತವಾಗಿದ್ದಾರೆ. ಅವರ ಬಗ್ಗೆ ಅನೇಕ ಕತೆಗಳಿವೆ, ದಂತ ಕತೆಗಳಿವೆ, ಬರಹಗಳಿವೆ, ಕೃತಿಗಳಿವೆ. ಇವರಿಗೆ ಅಸಾಧ್ಯ ಎನ್ನುವ ಸಂಗತಿಗಳೇ ಇರಲಿಲ್ಲ. ಆದರೆ ಅವರ ಬದುಕು ಸುಖದ ಸುಪ್ಪತ್ತಿಗೆಯಾಗಿರಲಿಲ್ಲ ಎನಿಸುತ್ತದೆ. ಸದಾ ಒಂದಿಲ್ಲೊಂದು ಸವಾಲುಗಳು, ಎದುರಾದ ಸವಾಲುಗಳಿಗೆ ಮೈಯೊಡ್ಡಿ ಸ್ವೀಕರಿಸುವ ದಿಟ್ಟ ಮನೋಭಾವ, ಛಲ, ಸಂಯಮದ ನಡೆ, ಎಲ್ಲವೂ ಅವರನ್ನು ಯಶಸ್ಸಿನತ್ತ ಒಯ್ದಿದೆ. ಒಂದು ಸಂದರ್ಭದಲ್ಲಿ ಹೀಗೆ ಹೇಳಿದ್ದರು, “ಸುಳ್ಯದಲ್ಲಿ ತಡವಾಗಿ ಮಲಗುವವನೂ ನಾನೇ, ಮೊತ್ತಮೊದಲು ಏಳುವವನೂ ನಾನೆ”. ಈಗ ಊಹಿಸಿ ಅವರ ಬದುಕಿನ ಎಷ್ಟೊಂದು ಸಮಯವನ್ನು ಶಿಕ್ಷಣಕ್ಕಾಗಿ, ಊರಿಗಾಗಿ ವಿನಿಯೋಗಿಸಿರಬಹುದು.
ಕೆ.ವಿ.ಜಿ ಯವರ ದೂರದೃಷ್ಟಿಯಿಂದಾಗಿ ಇಂದು ಸುಳ್ಯ ಮತ್ತು ಸುತ್ತಲಿನ ಪ್ರದೇಶದ ಚಿತ್ರಣವೇ ಬದಲಾಗಿದೆ. ಪದವೀಧರರು ಇಲ್ಲದ ಮನೆಗಳೇ ಇರಲಾರವು. ವೃತ್ತಿ ಶಿಕ್ಷಣ ಪಡೆದವರು, ಇಂಜಿನಿಯರಿಂಗ್, ಎಂ.ಬಿ.ಎ ಓದಿದವರು ದೂರ ದೂರದ ನಗರಗಳಲ್ಲಿ ತಮ್ಮನ್ನು ವಿಸ್ತರಿಸಿಕೊಂಡಿದ್ದಾರೆ. ಅದರಲ್ಲೂ ಹೆಚ್ಚು ಉನ್ನತ ಶಿಕ್ಷಣ ಪಡೆದ ಹೆಣ್ಣು ಮಕ್ಕಳ ಪ್ರಮಾಣ ಹೆಚ್ಚಿದೆ. ದಿನಾ ತಮ್ಮ ತಮ್ಮ ಮನೆಗಳಿಂದಲೇ ಬಂದು ಹೋಗುವ ಅನುಕೂಲತೆ ಇದೆ.
ಮೂಲೆಮಜಲು ಶಿವರಾಯ ಮಾಸ್ತರರು ಕೆ.ವಿ.ಜಿ ಯವರ ಬಗ್ಗೆ ಹೀಗೆ ಬರೆದಿದ್ದಾರೆ. “ನೀ ಓದದೇ ಓದಿಸಿದೆ, ಬರೆಯದೇ ಬರೆಸಿದೆ….” ಕಾವ್ಯ ಮುಂದುವರೆಯುತ್ತದೆ. ತಾತ್ಪರ್ಯದಲ್ಲಿ, ಕೆ.ವಿ.ಜಿ ಯವರು ಪ್ರಾಥಮಿಕ ಶಿಕ್ಷಣವನ್ನಷ್ಟೇ ಪಡೆದವರು, ಆದರೂ ಲಕ್ಷಾಂತರ ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಿದರು. ತುಂಬಾ ಅರ್ಥಗರ್ಭಿತ ಕಾವ್ಯದ ಸಾಲುಗಳು. ಅವರು ಮುಟ್ಟಿದ್ದೆಲ್ಲಾ ಚಿನ್ನವಾಗುತ್ತದೆ. ನಗರದಲ್ಲಿ ಹೊಸದಾಗಿ ತೆರೆಯಲ್ಪಡುವ ಯಾವುದೇ ಅಂಗಡಿ ಮುಂಗಟ್ಟುಗಳನ್ನು ಇವರಿಂದಲೇ ಉದ್ಘಾಟಿಸಲಾಗುತ್ತಿತ್ತು. 1976 ರಲ್ಲಿ ಸುಳ್ಯ ನಗರವೊಂದು ಸಾಧಾರಣ ಗ್ರಾಮ ಪಂಚಾಯತ್ ಮಟ್ಟದಲ್ಲಿತ್ತು. ಆದರೆ ಇಂದು ಮಹಾನಗರವೊಂದರ ಉಪನಗರವಾಗಿ ಬೆಳೆದು ನಿಂತಿದೆ (ಸೆಟಲೈಟ್ ಟೌನ್). ಕೆ.ವಿ.ಜಿ. ಯವರು ಕೇವಲ ತಮ್ಮ ಶಿಕ್ಷಣ ಸಂಸ್ಥೆಗಳನ್ನಷ್ಟೇ ಬೆಳೆಸಿಲ್ಲ. ಬದಲಿಗೆ ಸುಳ್ಯ ನಗರವೇ ಬೆಳೆಯುವಂತೆ ಮಾಡಿದ್ದಾರೆ. ಇಂಗ್ಲೀಷ್ ಲೈಬ್ರೆರಿ ಸ್ಥಾಪಿಸಲು ಪ್ರೋತ್ಸಾಹ ನೀಡಿ ಗ್ರಾಮೀಣ ಪ್ರದೇಶದ ಶಾಲಾ ಶಿಕ್ಷಣಕ್ಕೆ ಉತ್ತೇಜನ ನೀಡಿದ್ದಾರೆ. ವೈದ್ಯಕೀಯ ಆಸ್ಪತ್ರೆಗಳನ್ನು ಸ್ಥಾಪಿಸಿ ಬಡವರಿಗೂ, ಸಬಲರಿಗೂ ಅನುಕೂಲ ಕಲ್ಪಿಸಿ ಕೊಟ್ಟಿದ್ದಾರೆ. ದೆಹಲಿ, ಬಿಹಾರ, ಮುಂಬೈಯಂತಹ ದೂರ ದೂರದ ರಾಜ್ಯಗಳಿಂದ ವೈದ್ಯಕೀಯ ಶಿಕ್ಷಣ ಪಡೆಯಲು ಇಲ್ಲಿಗೆ ಬರುತ್ತಾರೆ. ಇಲ್ಲಿ ವೃತ್ತಿ ಶಿಕ್ಷಣ ಗಳಿಸಿದವರು ಹೊರದೇಶಗಳಿಗೆ ಹೋಗಿ ಉದ್ಯೋಗ ನಡೆಸುತ್ತಿದ್ದು, ಸುಳ್ಯವನ್ನು ಜಾಗತಿಕ ವಲಯದಲ್ಲಿ ಗುರುತಿಸುವಂತಾಗಿದೆ.
ಕೆ.ವಿ.ಜಿ. ಯವರು ಯುಗ ಪ್ರವರ್ತಕರು, ಇವರ ಸಿದ್ದಿ ಸಾಧನೆಗಳ ಆಳ, ಅಂತಸ್ತುಗಳನ್ನು ಅಳೆಯಬೇಕಿದ್ದರೆ ನಾನು ಈ ಬರಹದ ಆರಂಭದಲ್ಲಿ ಪ್ರಾಸ್ತಾಪಿಸಿದ್ದ ವಿಚಾರವನ್ನು ಗಮನಿಸಬೇಕು. ಅಂದರೆ 1976 ಮತ್ತು ಅದಕ್ಕೂ ಹಿಂದಿನ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಗಳು ಹೇಗಿದ್ದುವೆಂದು ತಿಳಿದುಕೊಳ್ಳಿರಿ. 1837 ರ ಬ್ರಿಟಿಷ್ ವಿರೋಧಿ ಸ್ವಾತಂತ್ರ್ಯ ಹೋರಾಟವು ಸುಳ್ಯವನ್ನು ಮೊತ್ತ ಮೊದಲ ಬಾರಿಗೆ ಅಂತಾರಾಷ್ಟ್ರೀಯ ವಲಯಕ್ಕೆ ಪರಿಚಯಿಸಿತು. ಸುಳ್ಯ, ಕೆದಂಬಾಡಿ ರಾಮಯ್ಯ ಗೌಡ, ಕೂಜುಕೋಡು, ಕುಡೆಕಲ್ಲು ಅಮರ ಸುಳ್ಯದ ಗೌಡರ ಬಗ್ಗೆ ಬ್ರಿಟಿಷ್ ಪಾರ್ಲಿಮೆಂಟಿನಲ್ಲಿ ಚರ್ಚಿಸಲಾಗಿತ್ತು. ಅಮರ ಸುಳ್ಯದ ಹೋರಾಟವನ್ನು ಗೌಡರ ದಂಗೆ ಎಂದೇ ಬ್ರಿಟಿಷರು ಪರಿಗಣಿಸಿದ್ದರು. ಮಾತ್ರವಲ್ಲ, ಸುಳ್ಯವನ್ನು ಹದ್ದು ಬಸ್ತಿನಲ್ಲಿಡುವುದು ಅವರ ಆದ್ಯ ಕರ್ತವ್ಯವೆಂದು ಬ್ರಿಟಿಶ್ ಅಧಿಕಾರಿಗಳಿಗೆ ಸೂಚಿಸಲಾಗಿತ್ತು. ಆದರೆ 1834 ರಲ್ಲಿ ಕೊಡಗಿನ ಅರಸೊತ್ತಿಗೆಯನ್ನು ಸ್ವಾಧೀನಪಡಿಸಿಕೊಳ್ಳುವ ವರೆಗಿನ ಸುಳ್ಯದ ಸ್ಥಿಗತಿಗಳ ಬಗ್ಗೆ ಕೆಮ್ಮಾರ ಬಾಲಕೃಷ್ಣ ಗೌಡರು ತಮ್ಮ ಲೇಖನವೊಂದರಲ್ಲಿ ಹೀಗೆ ಉಲ್ಲೇಖಿಸಿದ್ದಾರೆ. ಕ್ರಿ.ಶ 1834 ರ ಮೊದಲು ಗೌಡ ಜನಾಂಗವು ಉಚ್ಛಾಯ ಸ್ಥಿತಿಯಲ್ಲಿತ್ತು. ಎಲ್ಲರೂ ಕೃಷಿಕರೂ, ಪಶುಪಾಲನಾ ವೃತ್ತಿಯವರಾಗಿ ಬೇಸಾಯ ಭೂಮಿಯನ್ನು ಹೊಂದಿದ ವರ್ಗದಾರರೂ, ಪಟ್ಟಾದಾರರೂ ಆಗಿದ್ದರು. ಕನ್ನಡ ಓದು ಬರಹ ತಿಳಿದಿದ್ದ ಧನಿಕ ಗೌಡರು ಊರ ಪಟೇಲನೊ, ಪಾರುಪತ್ಯಗಾರನೋ ಆಗಿ ಮುಂದಾಳುವಾಗಿರುತ್ತಿದ್ದ.
ಗೌಡ ಜಾತಿಯ ಧಾರ್ಮಿಕ ಕಟ್ಟುಪಾಡುಗಳು ಸರಿಯಾಗಿ ನಡೆಯುತ್ತಿದ್ದುವು. ಕಾನೂನು ಕಟ್ಟಳೆಗಳೂ ವ್ಯಾಜ್ಯ ಸಾಜ್ಯಗಳೂ, ಜಾತಿ ಸಮುದಾಯದ ನಡವಳಿಕೆಗಳನ್ನು ಮುನ್ನಡೆಸುವ ಊರ ಅಧಿಕಾರಿ ಗೌಡನಾಗಿದ್ದ. ಗ್ರಾಮದ ಅಧಿಕಾರಿ ಗ್ರಾಮ ಗೌಡ, ಮಾಗಣೆ ಅಧಿಕಾರಿ ಮಾಗಣೆ ಗೌಡ, ಸೀಮೆ ಅಧಿಕಾರಿ ಸೀಮೆ ಗೌಡ, ಸರ್ವೋಚ್ಛ ಅಧಿಕಾರಿ ಕಟ್ಟೆಮನೆ ಗೌಡರ ತೀರ್ಮಾನಕ್ಕೆ ಎಲ್ಲರೂ ಬದ್ಧರಾಗಿದ್ದರು. ಇಂತಹ ವ್ಯವಸ್ಥೆಯೊಂದು ಸುಳ್ಯವನ್ನಾಳಿದ್ದ ಎಲ್ಲಾ ರಾಜರಾಳ್ವಿಕೆಯಲ್ಲಿ ಜಾರಿಯಲ್ಲಿತ್ತು. ಆದರೆ 1834ರಲ್ಲಿ ಬ್ರಿಟಿಶರು ಕೊಡಗನ್ನು ಆಕ್ರಮಿಸಿದ್ದನ್ನು ಸುಳ್ಯ ಮತ್ತು ಕೊಡಗಿನ ಗೌಡರು ಮತ್ತಿತರರು ಸಹಿಸಿಕೊಳ್ಳಲಿಲ್ಲ. 1837 ರಲ್ಲಿ ಬ್ರಿಟಿಶರೊಂದಿಗೆ ಸೆಣಸಾಡಿ ಸೋಲು ಕಂಡರು. ಪರಿಣಾಮವಾಗಿ 4 ಮಂದಿಗೆ ಮರಣದಂಡನೆ ವಿಧಿಸಿ ಗಲ್ಲಿಗೇರಿಸಿದರು. 1115 ಮಂದಿ ಬಂಧನಕ್ಕೊಳಗಾದರು, ಜಾಮೀನು ಪಡೆದು ಬಿಡುಗಡೆಗೊಂಡವರು 11 ಮಂದಿ, 35 ಮಂದಿಯನ್ನು ಜೈಲಿನೊಳಿಗೆ ಸಾಯಿಸಿದರು. 54 ಕೇಸುಗಳಲ್ಲಿ 410 ಮಂದಿ, ಕ್ರಿಮಿನಲ್ ನ್ಯಾಯಾಲಯದಲ್ಲಿ ವಿಚಾರಣೆಗೊಳಗಾದರು. 133 ಮಂದಿ, ದರೋಡಿ ಕೇಸಿಗೋಗಾದವರು 155 ಮಂದಿ, ಜೀವಾವಧಿ ಶಿಕ್ಷೆಗೊಳಗಾದವರು ಹೊರತಾಗಿ ಉಳಿದವರನ್ನು ಸಿಂಗಾಪುರ, ಬರ್ಮಾ ದೇಶಗಳಿಗೆ ಗಡಿಪಾರು ಮಾಡಲಾಯಿತು. ಊರೊಳಗೆ ಬ್ರಿಟಿಶರ ದೌರ್ಜನ್ಯ ವಿಪರೀತವಾಯಿತು. ಹೆಂಗಸರು ಮಕ್ಕಳನ್ನು ಪೀಡಿಸಿದರು. ಗಂಡಸರು ಖಾಕಿ ಉಡುಪು ಕಂಡರೆ ಕಾಡಿಗೆ ಹೋಗಿ ಅವಿತುಕೊಳ್ಳುತ್ತಿದ್ದರು. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದೆ ಅಪರಾಧವಾಗಿತ್ತು. ಸರಕಾರದ ಭಯೋತ್ಪಾದನೆಯಿಂದಾಗಿ ಊರೊಳಗೆ ಗಂಡಸರೇ ಇರಲಿಲ್ಲ.
ಕ್ರಮೇಣ ಬ್ರಿಟಿಷರು ಎಲ್ಲರನ್ನೂ ಮೂಲೆಗುಂಪು ಮಾಡಿದರು. ಯಾವುದೇ ಅಭಿವೃದ್ಧಿ ಕಾರ್ಯ ಮಾಡಲಿಲ್ಲ. ಸ್ವಾತಂತ್ರ್ಯ ಹೋರಾಟ ತಪ್ಪು ಕೆಲಸ ಎಂದು ಬಿಂಬಿಸಲಾಯಿತು. ಕೊಡವ, ಬ್ರಾಹ್ಮಣ, ಬಂಟ, ಕುಡಿಯ, ಬಿಲ್ಲವರಾದಿಯಾಗಿ ಎಲ್ಲರೂ ಬ್ರಿಟಿಷ್ ವಿರುದ್ಧದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದರು. ಆದರೆ ಬಳಿಕ ಕೆಲವರು ಬ್ರಿಟಿಷರ ಪರವಾಗಿ ನಿಂತರು, ಹೋರಾಟಗಾರರನ್ನು ಪತ್ತೆ ಹಚ್ಚಿ ಬ್ರಿಟಿಷರಿಗೆ ಒಪ್ಪಿಸುತ್ತಿದ್ದರು. ಬ್ರಿಟಿಶರ ಪರವಾಗಿದ್ದವರಿಗೆ ಇನಾಂಗಳು, ಹುದ್ದೆಗಳು, ಬಡ್ತಿ ದೊರೆಯುತ್ತಿತ್ತು, ಪ್ರಶಸ್ತಿ, ದೊರೆಯುತ್ತಿದ್ದುವು. ಬ್ರಿಟಿಶರ ಪರವಾಗಿದ್ದವರಿಗೆ ಬಂಧೂಕು ಪರವಾನಗಿ ಉಚಿತವಾಗಿ ದೊರೆಯುತ್ತಿತ್ತು. ಹೋರಾಟಗಾರರಿಗೆ ಸರಕಾರದ ವಿರೋಧಿಗಳು, ದೇಶದ್ರೋಹಿಗಳೆಂದು ಹಣೆಪಟ್ಟಿ ಕಟ್ಟಲಾಗಿತ್ತು. ಈ ಪರಿಸ್ಥಿತಿ 1947ರಲ್ಲಿ ಸ್ವಾತಂತ್ರ್ಯ ಲಭಿಸುವವರೆಗೂ ಮುಂದುವರೆಯಿತು. ಸುಳ್ಯವು ಸ್ವಾತಂತ್ರ್ಯ ಹೋರಾಟದ ಪ್ರಧಾನ ಭೂಮಿಕೆಯಾಗಿದ್ದುದರಿಂದ ಸುಳ್ಯವನ್ನು 1837ರಿಂದ 1947 ರವರೆಗೂ ಕತ್ತಲೆಯಲ್ಲಿರಿಸಿ, ಯಾವುದೇ ಅಭಿವೃದ್ಧಿ ಯೋಜನೆಗಳನ್ನು ತರಲಿಲ್ಲ. ಹಾಗಾಗಿ ತಡವಾಗಿ ಅಲ್ಲೊಂದು ಇಲ್ಲೊಂದು ಪ್ರಾಥಮಿಕ ಶಾಲೆಗಳನ್ನು ಊರಿನ ಹಿರಿಯರೇ ತೆರೆದಿದ್ದರು. ಅಂತಹ ಶಾಲೆಗಳಲ್ಲಿ ಈಗೀಗ ಶತಮಾನೋತ್ಸವ ನಡೆಯುತ್ತಿದೆ.
ಒಟ್ಟಿನಲ್ಲಿ ಹೇಳುವುದಾದರೆ ಸುಳ್ಯದ ಶಾಪ ವಿಮೋಚನೆ ಆಗಿದ್ದೇ ಕೆ.ವಿ.ಜಿಯವರ ಶೈಕ್ಷಣಿಕ ಕ್ರಾಂತಿಯ ಮೂಲಕ. ಅಂದರೆ 1976 ರ ನಂತರದಲ್ಲಿ ಯುದ್ಧ ನಡೆಸದೆ ಶಸ್ತ್ರಾಸ್ತ್ರಗಳನ್ನು ಬಳಸದೆ ಅಮರ ಸುಳ್ಯದಲ್ಲೊಂದು ಸಾಮ್ರಾಜ್ಯ ಕಟ್ಟಿದರು. ತಮ್ಮದೇ ಹಣ, ಶ್ರಮ ವಿನಿಯೋಗಿಸಿ ಜನತೆಗಾಗಿ ಅಭಿವೃದ್ಧಿ ಕಾರ್ಯ ಮಾಡಿ ಎಲ್ಲರ ಮನೆಯನ್ನೂ ಬೆಳಗಿದರು. ಜಾತಿ, ಮತ, ಧರ್ಮ, ಭಾಷೆ, ಪ್ರದೇಶಗಳ ಬೇಧ ತೋರಿಸಲಿಲ್ಲ. ಹಣ ಗಳಿಕೆ ಸಂಪಾದನೆಯೇ ವ್ಯಕ್ತಿಯೊಬ್ಬನ ಜೀವನದ ಗುರಿ ಆಗಿದ್ದರೆ, ಕರುಂಜಿಯವರು ದೊಡ್ಡ ದೊಡ್ಡ ಕಂಪೆನಿ, ಕಾರ್ಖಾನೆಗಳನ್ನು ಸ್ಥಾಪಿಸಿ ಶ್ರೀಮಂತರಾಗಬಹುದಿತ್ತು. ಆದರೆ ಅವರು ಹಾಗೆ ಮಾಡಲಿಲ್ಲ. ಶತ ಶತಮಾನಗಳಿಂದ ಗಾಢಾಂಧಕಾರದಲ್ಲಿದ್ದ ಗುಡಿಸಲುಗಳ ಒಳಗೆ ದೀಪ ಉರಿಸಿ ಬೆಳಕು ಚೆಲ್ಲಿದರು.