ನ್ಯೂಸ್ ನಾಟೌಟ್ : ಸಾಮಾಜಿಕ ಕಾರ್ಯಕರ್ತ, ಸಂಘಟಕ, ಮಾನವ ಸಂಪನ್ಮೂಲ ಅಭಿವೃದ್ಧಿ ವಿಭಾಗದ ಯುವ ಸಾಧಕ ಡಾ. ಉಮ್ಮರ್ ಬೀಜದಕಟ್ಟೆ ಅವರನ್ನು ಮುಂದಿನ ಮೂರು ವರ್ಷಗಳ ಕಾಲ ಬೋರ್ಡ್ ಆಫ್ ಸ್ಟಡೀಸ್ (ಮಾನವಿಕತೆ ಮತ್ತು ಸಮಾಜ ವಿಜ್ಞಾನ ಅಭಿವೃದ್ಧಿ) ಸದಸ್ಯರಾಗಿ ಯೆನಪೋಯ ವಿಶ್ವವಿದ್ಯಾಲಯದ ಕುಲಪತಿಗಳು ನೇಮಕ ಮಾಡಿರುತ್ತಾರೆ.
ಡಾ. ಉಮ್ಮರ್ ಬೀಜದಕಟ್ಟೆ ಮೂಲತಃ ಸುಳ್ಯ ತಾಲೂಕು ಸಂಪಾಜೆ ಗ್ರಾಮದ ಗೂನಡ್ಕದ ಬೀಜದಕಟ್ಟೆಯವರಾಗಿದ್ದಾರೆ. ಕಳೆದ 23 ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಬೆಂಗಳೂರಿನ ಪ್ರತಿಷ್ಠಿತ ಔಷಧಿ ಕಂಪನಿಯಾದ ಫಾರ್ಮೆಡ್ ಗ್ರೂಪ್ ನ ಹಿರಿಯ ಕಾರ್ಯನಿರ್ವಾಹಕ ಉಪಾಧ್ಯಕ್ಷರಾಗಿದ್ದು (ಮಾನವ ಸಂಪನ್ಮೂಲ, ತರಬೇತಿ ಹಾಗೂ ಆಡಳಿತ ವಿಭಾಗ), ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ (ನೋಂ) ಅಧ್ಯಕ್ಷರು, ಮಾಣಿ ಬುಡೋಳಿಯ ವಿಸ್ಡಂ ವಿದ್ಯಾ ಸಂಸ್ಥೆಯ ಆಡಳಿತ ವಿಭಾಗದ ಅಧ್ಯಕ್ಷರು ಮತ್ತು ಈಶ್ವರಮಂಗಲದ ಮಧುರ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ಇದರ ಆಡಳಿತ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇತ್ತೀಚೆಗೆ ಸಂಪಾಜೆ ಗ್ರಾಮದ ಗೂನಡ್ಕದ ಸಜ್ಜನ ಸಭಾಭವನದಲ್ಲಿ ನಡೆದ ಸುಳ್ಯ ತಾಲೂಕು 26ನೇ ಕನ್ನಡ ಸಾಹಿತ್ಯ ಸಮ್ಮೇಳನದ ಆತಿಥ್ಯ ವಹಿಸಿ ಸ್ವಾಗತ ಸಮಿತಿಯ ಅಧ್ಯಕ್ಷರಾಗಿ ಯಶಸ್ವಿ ಸಂಘಟಕರಾಗಿ ಗುರುತಿಸಿಕೊಂಡಿದ್ದಾರೆ. ಇವರು ಹಲವಾರು ಪ್ರತಿಷ್ಠಿತ ಪ್ರಶಸ್ತಿಗಳನ್ನು ಮತ್ತು ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ.