ನ್ಯೂಸ್ ನಾಟೌಟ್ :”ಜಗತ್ತನ್ನು ತಾನು ಸುತ್ತುವ ಬದಲು, ಜಗತ್ತನ್ನೇ ತನ್ನೆಡೆಗೆ ತಿರುಗುವಂತೆ ಮಾಡಿದ” ಮಹಾನಾಯಕ ಡಾ. ಕುರುಂಜಿ ವೆಂಕಟರಮಣ ಗೌಡರು. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಪಟ್ಟಣವನ್ನು ವಿದ್ಯಾಕಾಶಿಯನ್ನಾಗಿಸಿದ ಶಿಕ್ಷಣ ತಜ್ಞ, ಸಮಾಜಸುಧಾರಕನಾಗಿ ನಿಸ್ವಾರ್ಥವಾಗಿ ಹೊಸ ಕ್ರಾಂತಿ ಮಾಡಿದ ಮಹಾನ್ ವ್ಯಕ್ತಿ.
ಪ್ರಾಥಮಿಕ ಶಿಕ್ಷಣ, ತಾಂತ್ರಿಕ, ಆಯುರ್ವೇದ, ಡೆಂಟಲ್ ಹಾಗೂ ಮೆಡಿಕಲ್ ಕಾಲೇಜುಗಳನ್ನು ಸ್ಥಾಪಿಸಿದರು. “ಜ್ಞಾನಂ ಸರ್ವತ್ರ ಸಾಧನಂ” ಎಂಬ ತತ್ವದಡಿಯಲ್ಲಿ ವಿದ್ಯಾಸಂಸ್ಥೆಗಳನ್ನು ಬೆಳೆಸಿಕೊಂಡು ಬಂದವರು ಕೆವಿಜಿ ಯವರು. ದಿನಕ್ಕೆ 18 ಗಂಟೆಗಳ ಕಾಲ ಕಾರ್ಯನಿರತರಾಗಿದ್ದ ಕೆವಿಜಿಯವರು ಗಾಂಧೀಜಿ ಸಿದ್ದಾಂತ ಪ್ರತಿಪಾದಕರಾಗಿದ್ದರು.
ಶಿಕ್ಷಣದ ಮೂಲಕ ಸುಳ್ಯದ ಚಿತ್ರಣವನ್ನೇ ಬದಲಾಯಿಸಿದವರು. ಸುಳ್ಯವನ್ನು ವಿಶ್ವದರ್ಜೆಯ ಕಲಿಕಾ ಕೇಂದ್ರವನ್ನಾಗಿಸಿ ರೂಪಿಸಿದವರು. ಕೆವಿಜಿ ಯವರು ಹಲವು ಆಯಾಮಗಳ ವ್ಯಕ್ತಿ ಮಹಾನ್ ಬೋಧಕ, ತತ್ವಜ್ಞಾನಿ ಮತ್ತು ಸಮರ್ಥ ಆಡಳಿತಗಾರ ಎಲ್ಲಕ್ಕಿಂತ ಹೆಚ್ಚಾಗಿ ಒಬ್ಬ ಮಹಾನ್ ಪರೋಪಕಾರಿ. ಇದರಿಂದ ಅವರು ಲೆಜೆಂಡ್ ಅನಿಸಿಕೊಂಡರು. ನಮ್ಮೆಲ್ಲರ ಸ್ಪೂರ್ತಿಯ ಮೂಲ ಅವರು. ಅವರ ಆದರ್ಶಗಳು ಮತ್ತು ಕಾರ್ಯ ವಿಧಾನಗಳು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದಂತವು. ಭೌದ್ದಿಕತೆ, ಆದ್ಯಾತ್ಮಿಕತೆಯನ್ನು ಪಸರಿಸುವ ಮೂಲಕ ನಮ್ಮ ದೇಶವನ್ನು ಆಧುನಿಕ ಮತ್ತು ಸದೃಡಗೊಳಿಸುವ ಕನಸನ್ನು ಹೊಂದಿದವರು ಕೆವಿಜಿ.
ಇವರು ಸ್ಥಾಪಿಸಿರುವ ಕೆವಿಜಿ ಸಮೂಹ ಸಂಸ್ಥೆಗಳ ಮಾತೃ ಸಂಸ್ಥೆಯಾಗಿರುವ ನೆಹರು ಮೆಮೋರಿಯಲ್ ಕಾಲೇಜು ಸುಳ್ಯ, ದಕ್ಷಿಣ ಕನ್ನಡ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಸುಳ್ಯ ಪ್ರಾಯೋಜಕತ್ವದಲ್ಲಿ 1976 ರಲ್ಲಿ ಇದರ ಸ್ಥಾಪಕ ಅಧ್ಯಕ್ಷ ಕುರುಂಜಿ ವೆಂಕಟರಮಣ ಗೌಡರ ಸಮರ್ಥ ಮತ್ತು ಕ್ರಿಯಾತ್ಮಕ ನಾಯಕತ್ವದಲ್ಲಿ ಶಿಕ್ಷಣವನ್ನು ಒದಗಿಸುವ ಉದ್ದೇಶದಿಂದ ಪ್ರಾರಂಭವಾಯಿತು.
ಕಲೆ, ವಾಣಿಜ್ಯ, ವಿಜ್ಞಾನ, ಕಂಪ್ಯೂಟರ್ ಆಪ್ಲಿಕೇಶನ್, ಸಮಾಜ ಕಾರ್ಯ, ವ್ಯವಹಾರ ನಿರ್ವಹಣೆ ಕೋರ್ಸ್ ಗಳನ್ನು ನೀಡುತ್ತದೆ. ಕಾಲೇಜು ಅತ್ಯುತ್ತಮ ಗ್ರಂಥಾಲಯವನ್ನು ಹೊಂದಿದ್ದು, ಎಲ್ಲಾ ಪಠ್ಯಕ್ರಮ ಮತ್ತು ಉಲ್ಲೇಖಿತ ವಿಷಯಗಳ ಉತ್ತಮ ಪುಸ್ತಕಗಳ ಸಂಗ್ರಹವಿದೆ. ಕಂಪ್ಯೂಟರ್, ಸಸ್ಯಶಾಸ್ತ್ರ, ಪ್ರಾಣಿಶಾಸ್ತ್ರ, ಬೌತಶಾಸ್ತ್ರ ಮತ್ತು ರಾಸಾಯನ ಶಾಸ್ತ್ರದ ಪ್ರಯೋಗಾಲಯಗಳು ಸುಸಜ್ಜಿತವಾಗಿದೆ. ಮಂಗಳೂರು ವಿಶ್ವವಿದ್ಯಾನಿಲಯ ಸಂಯೋಜಿತ ಸಂಸ್ಥೆಯಾಗಿದೆ ಹಾಗೂ ವಿಶ್ವವಿದ್ಯಾನಿಲಯವು ನಿಗದಿಪಡಿಸಿದ ಪಠ್ಯಕ್ರಮವನ್ನು ಅನುಸರಿಸಲಾಗುತ್ತಿದೆ. ಭೋದನೆಯ ನವ ನವೀನ ವಿಧಾನಗಳನ್ನು ಬಳಸಿಕೊಂಡು ಉನ್ನತ ಶೈಕ್ಷಣಿಕ ಗುಣಮಟ್ಟವನ್ನು ಕಾಪಾಡಿಕೊಳ್ಳಲು ವಿಶೇಷ ಗಮನ ನೀಡಲಾಗಿದೆ. ಕಾಲೇಜು ವಿದ್ಯಾರ್ಥಿಗಳ ಅಭ್ಯುದಯಕ್ಕಾಗಿ ಹಲವಾರು ಕಾರ್ಯಕ್ರಮಗಳನ್ನು ಪರಿಚಯಿಸಿದೆ. ಕಾಲೇಜಿನ ಆಂತರಿಕ ಗುಣಮಟ್ಟ ಖಾತರಿ ಕೋಶ ಶೈಕ್ಷಣಿಕ ಗುಣಮಟ್ಟವನ್ನು ಕಾಪಾಡಿಕೊಳ್ಳುತ್ತಿದೆ.
ಇಂತಹ ಉತ್ತಮ ವಿದ್ಯಾಸಂಸ್ಥೆ ಸುಳ್ಯದಲ್ಲಿ ಇರುವುದು ನಮ್ಮೆಲ್ಲರ ಹೆಮ್ಮೆ. ಈ ಸಂಸ್ಥೆಯ ವಿದ್ಯಾರ್ಥಿಗಳು ನಾವು ಎಂದು ಹೇಳುವುದು ನಮಗೆ ಅತ್ಯಂತ ಖುಷಿಯ ಸಂಗತಿ. ಈ ಸಂಸ್ಥೆ ನಮ್ಮೆಲ್ಲರ ಪ್ರಗತಿಗೆ ಭದ್ರ ಅಡಿಪಾಯ ಹಾಕಿದೆ ಎಂಬುದರಲ್ಲಿ ಅತಿಶಯೋಕ್ತಿ ಇಲ್ಲ.