ನ್ಯೂಸ್ ನಾಟೌಟ್: ಕಾಂಗ್ರೆಸ್ ಕಾರ್ಯಕರ್ತನ ಮೇಲೆ ಪುತ್ತೂರಿನಲ್ಲಿ ಮಂಗಳವಾರ ಹಿಂದೂ ಸಂಘಟನೆಯ ಕಾರ್ಯಕರ್ತನೊಬ್ಬ ಹಲ್ಲೆ ನಡೆಸಿದ್ದಾನೆ ಎಂದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಿಂದ ವರದಿಯಾಗಿದೆ.
ಪುತ್ತೂರು ತಾಲೂಕಿನ ಪುರುಷಕಟ್ಟೆಯಲ್ಲಿ ಘಟನೆ ನಡೆದಿದ್ದು ರಾಜಕೀಯ ವೈಷಮ್ಯದಿಂದ ಹಲ್ಲೆ ನಡೆದಿದೆ ಎಂದು ಹೇಳಲಾಗುತ್ತಿದೆ. ಹಲ್ಲೆಗೊಳಗಾದ ವ್ಯಕ್ತಿ ಕಳೆದ ಕೆಲವು ತಿಂಗಳಿನ ಹಿಂದೆ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿದ್ದ ಎನ್ನಲಾಗಿದೆ. ಚುನಾವಣೆ ವೇಳೆ ಶಾಸಕ ಅಶೋಕ್ ರೈ ಪರ ಬಿರುಸಿನ ಪ್ರಚಾರ ಮಾಡಿದ್ದ ಎಂದು ಹೇಳಲಾಗಿದೆ. ಕುತ್ತಿಗೆ, ಹೊಟ್ಟೆ, ತುಟಿಗೆ ಕೈಯಿಂದ ಜಜ್ಜಿ ಗಂಭೀರ ಹಲ್ಲೆ ನಡೆಸಲಾಗಿದೆ. ಹಲ್ಲೆಗೊಳಗಾದ ವ್ಯಕ್ತಿಗೆ ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ ಎಂದು ತಿಳಿದು ಬಂದಿದೆ. ನನಗೂ ಅವನಿಗೂ ಯಾವುದೇ ಪೂರ್ವ ದ್ವೇಷ ಇರಲಿಲ್ಲ. ಆದರೂ ಆತ ನನಗೆ ಯಾಕೆ ಹೊಡೆದ ಎನ್ನುವುದು ಗೊತ್ತಿಲ್ಲ. ಅವಾಚ್ಯ ಶಬ್ಧಗಳಿಂದ ನಿಂದಿಸಿ ಕೊಲೆ ಬೆದರಿಕೆ ಹಾಕಿದ್ದಾನೆಂದು ಹಲ್ಲೆಗೊಳಗಾದ ವ್ಯಕ್ತಿ ಆಸ್ಪತ್ರೆಯಿಂದ ಚಿತ್ರಿಸಿರುವ ವಿಡಿಯೋದಲ್ಲಿ ಹೇಳಿದ್ದಾರೆ.