ನ್ಯೂಸ್ ನಾಟೌಟ್: ಇಬ್ಬರ ಸಾವಿಗೆ ಕಾರಣವಾದ ರೆಂಜಿಲಾಡಿ ಗ್ರಾಮದ ಸುತ್ತಮುತ್ತ ಆನೆಗಳು ಮತ್ತೆ ಪ್ರತ್ಯಕ್ಷವಾಗಿ ಸ್ಥಳೀಯರಲ್ಲಿ ಭಾರಿ ಆತಂಕ ಸೃಷ್ಟಿಯಾಗಿದೆ.
ಸೋಮವಾರ ಸಂಜೆ 6.45ರ ಸುಮಾರಿಗೆ ನಾಲ್ಕು ದೊಡ್ಡ ಆನೆಗಳು ಹಾಗೂ ಮೂರು ಮರಿ ಆನೆಗಳು ಇದ್ದವು ಎಂದು ಸ್ಥಳೀಯರು ತಿಳಿಸಿದ್ದಾರೆ. ರೆಂಜಿಲಾಡಿ ಗ್ರಾಮದ ಪೇರಡ್ಕದ ನೈಲ ಎಂಬಲ್ಲಿ ವಾರಗಳ ಹಿಂದೆ ರಂಜಿತಾ ಹಾಗೂ ರಮೇಶ್ ಅನ್ನುವವರನ್ನು ಕಾಡಾನೆ ತುಳಿದು ಕೊಂದು ಹಾಕಿತ್ತು. ಅದಾದ ಬಳಿಕ ಗ್ರಾಮಸ್ಥರು ಆನೆಗಳನ್ನು ಕೂಡಲೇ ಹಿಡಿಯಬೇಕೆಂದು ಪ್ರತಿಭಟನೆ ನಡೆಸಿದ್ದರು. ಕೊಡಗಿನ ದುಬಾರೆಯಿಂದ ಕಾಡಾನೆ ಹಿಡಿಯುವ ಎಕ್ಸ್ ಪರ್ಟ್ ಆಗಿರುವ ದಸರಾ ಆನೆ ಅಭಿಮನ್ಯು ಸಹಿತ ಒಟ್ಟು ಐದು ಆನೆಗಳು ಕೋಬಿಂಗ್ ಕಾರ್ಯಾಚರಣೆಗೆ ನಡೆಸಿದ್ದವು. ಕೊನೆಗೆ ಒಂಟಿ ಆನೆಯನ್ನು ಹಿಡಿದು ಆನೆ ಶಿಬಿರಕ್ಕೆ ಕಳುಹಿಸಲಾಗಿತ್ತು. ಇದೇ ಆನೆ ನರ ಹಂತಕ ಆನೆ ಎಂದೂ ಹೇಳಲಾಗಿತ್ತು. ಆದರೆ ರೆಂಜಿಲಾಡಿ ಗ್ರಾಮದ ನೈಲದ ಸುತ್ತಮುತ್ತ ಸೋಮವಾರ ಸಂಜೆ ಹಠಾತ್ ಏಳು ಆನೆಗಳು ಪ್ರತ್ಯಕ್ಷಗೊಂಡಿದ್ದರಿಂದ ಜನ ಮತ್ತೆ ಗಾಬರಿಯಾಗಿದ್ದಾರೆ. ಈ ಬಗ್ಗೆ ಊರಿನವರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು ಆನೆಗಳ ಪತ್ತೆ ಕಾರ್ಯ ನಡೆಯುತ್ತಿದೆ ಎಂದು ತಿಳಿದು ಬಂದಿದೆ.