ನ್ಯೂಸ್ ನಾಟೌಟ್: ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುವ ಟ್ಯಾಂಕರ್ನಿಂದ ಹರಿಯುವ ನೀರಿಗೆ ರಸಾಯನಿಕ ಪದಾರ್ಥ ಸೇರಿ ನೂರಾರು ಜಲಚರಗಳು ಸಾವನ್ನಪ್ಪಿವೆ. ಇಂತಹ ಮನಕಲಕುವ ಘಟನೆ ನಡೆದಿದ್ದು ಕಡಬ ತಾಲೂಕಿನ ಇಚ್ಲಂಪಾಡಿ ಗ್ರಾಮದ ಕೊರಮೇರು ಎಂಬಲ್ಲಿ.
ಏನಿದು ಘಟನೆ?
ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಇಚ್ಲಂಪಾಡಿ ಗ್ರಾಮದ ಕೊರಮೇರು ಭಾಗದಲ್ಲಿ ಯಾರೋ ಟ್ಯಾಂಕರ್ನಿಂದ ಹರಿಯುವ ತೋಡಿನ ನೀರಿಗೆ ರಸಾಯನಿಕ ಪದಾರ್ಥ ಹರಿಯಬಿಟ್ಟಿದ್ದು ಇದರಿಂದ ನೀರು ಕಪ್ಪು ಬಣ್ಣಕ್ಕೆ ತಿರುಗಿದೆ.ಪರಿಣಾಮ ನೀರಿನ ಮೇಲೆ ಎಣ್ಣೆಯ ಅಂಶ ಸಹ ಕಾಣಿಸಿಕೊಂಡಿದ್ದು, ನೂರಾರು ಜಲಚರಗಳು ಸತ್ತು ತೇಲುತ್ತಿವೆ.
ಈ ತೋಡು ಗುಂಡ್ಯ ಹೊಳೆಗೆ ಸೇರುತ್ತಿದ್ದು ತೋಡಿನ ಉದ್ದಕ್ಕೂ ಈ ಕಪ್ಪು ಮಿಶ್ರಿತ ನೀರು ಹರಿದು ಹೋಗಿದ್ದು, ನೂರಾರು ಮೀನು, ಕಪ್ಪೆ ಸೇರಿದಂತೆ ಇತರೇ ಜಲಚರಗಳು ಸತ್ತು ನೀರಿನಲ್ಲಿ ತೇಲುತ್ತಿವೆ. ಕೆಲವು ಸ್ಥಳೀಯರು ಪಾತ್ರೆ ತೊಳೆಯಲು, ಬಟ್ಟೆ ಒಗೆಯಲು ಈ ನೀರಿಗೆ ಅವಲಂಬಿತರಾಗಿದ್ದಾರೆ.ಇದರಿಂದ ಅಲ್ಲಿನ ಸ್ಥಳೀಯರು ತೀವ್ರ ಸಂಕಷ್ಟಕ್ಕೆ ಗುರಿಯಾಗಿದ್ದಾರೆ.
ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುವ ಟ್ಯಾಂಕರ್ನಿಂದ ತೋಡಿಗೆ ರಸಾಯನಿಕ ಹರಿಯಬಿಡಲಾಗಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದು ಈ ಬಗ್ಗೆ ಸ್ಥಳೀಯ ಗ್ರಾಮ ಪಂಚಾಯತ್ಗೆ ಮಾಹಿತಿ ನೀಡಿದ್ದಾರೆ.