ನ್ಯೂಸ್ ನಾಟೌಟ್: ನಿವೃತ್ತಿಯಾಗಿ 10 ವರ್ಷ ಕಳೆದ ಬಳಿಕ ಗ್ರಾಮ ಲೆಕ್ಕಾಧಿಕಾರಿ ಲಂಚ ಸ್ವೀಕರಿಸಿದ್ದಕ್ಕೆ ಜೈಲು ಪಾಲಾದ ಘಟನೆ ಬೆಳಗಾವಿಯಲ್ಲಿ ನಡೆದಿದೆ. ನಾಗೇಶ ಶಿವಂಗೇಕರ್ ಜೈಲು ಪಾಲಾದ ನಿವೃತ್ತ ಗ್ರಾಮ ಲೆಕ್ಕಾಧಿಕಾರಿ ಎಂದು ಗುರುತಿಸಲಾಗಿದೆ.
ನಾಗೇಶ ಶಿವಂಗೇಕರ್ 30 ವರ್ಷಗಳ ಹಳೇಯ ಪ್ರಕರಣದಲ್ಲಿ ಜೈಲು ಪಾಲಾಗಿದ್ದಾರೆ. ಬೆಳಗಾವಿ ತಾಲೂಕಿನ ಕಡೋಲಿ ಗ್ರಾಮದ ಲಕ್ಷ್ಮಣ ಕಟಾಂಬಳೆ ಅನ್ನೋರ ಬಳಿ 500 ರೂಪಾಯಿ ಲಂಚ ಸ್ವೀಕರಿಸಿದ್ದರು ಎಂಬ ಪ್ರಕರಣ ಇದಾಗಿದೆ.
ಪಹಣಿ ಪತ್ರದಲ್ಲಿ ವಾಟ್ನಿ ಮಾಡಿ ಉತಾರ ಕೊಡಲು 500 ರೂಪಾಯಿ ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಿ ಕಟಾಂಬಳೆ ಲೋಕಾಯುಕ್ತಕ್ಕೆ ದೂರು ನೀಡಿದ್ದರು. 500 ರೂಪಾಯಿ ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದರು. ಆರೋಪಿಯನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದರು.
2006ರಲ್ಲಿ ಗ್ರಾಮ ಲೆಕ್ಕಾಧಿಕಾರಿಗೆ ಒಂದು ವರ್ಷ ಜೈಲು, 1 ಸಾವಿರ ದಂಡ ವಿಧಿಸಲಾಗಿತ್ತು. ಬಳಿಕ ಗ್ರಾಮ ಲೆಕ್ಕಾಧಿಕಾರಿ ನಾಗೇಶ ಧಾರವಾಡ ಹೈಕೋರ್ಟ್ ಮೋರೆ ಹೋಗಿದ್ದರು. ಹೈಕೋರ್ಟ್ನಲ್ಲಿ ನಾಗೇಶ ಶಿವಂಗೇಕರ್ ಗೆ ರಿಲಿಫ್ ಸಿಕ್ಕಿತ್ತು.
ಹೈಕೋರ್ಟ್ ಆದೇಶ ಪ್ರಶ್ನಿಸಿ ಲೋಕಾಯುಕ್ತ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಸುಪ್ರೀಂ ಕೋರ್ಟ್ ಲೋಕಾಯುಕ್ತ ಪರ ಈಗ ತೀರ್ಪು ಪ್ರಕಟ ಮಾಡಿದೆ. ಕೆಲಸದಿಂದ ನಿವೃತ್ತಿಯಾಗಿ 10 ವರ್ಷದ ಬಳಿಕ ಆರೋಪಿ ಜೈಲು ಪಾಲಾಗಿದ್ದಾರೆ. ಸದ್ಯ ಬೆಳಗಾವಿ ಹಿಂಡಲಗಾ ಜೈಲಿಗೆ ನಾಗೇಶ ಶಿವಂಗೇಕರ್ ನನ್ನು ಕಳುಹಿಸಲಾಗಿದೆ. ಇನ್ನೊಂದು ವಿಚಾರ ಅಂದರೆ ದೂರುದಾರ ಮೃತಪಟ್ಟಿದ್ದು, ಐದು ವರ್ಷ ಕಳೆದಿದೆ.