ನ್ಯೂಸ್ ನಾಟೌಟ್ : ಬರೋಬ್ಬರಿ 500 ವರ್ಷಗಳ ನಂತರ ಶ್ರೀರಾಮನ ಜನ್ಮಭೂಮಿ ಅಯೋಧ್ಯೆಯಲ್ಲಿ ಇದೇ ಮೊದಲ ಬಾರಿಗೆ ಸಂಭ್ರಮ ಹಾಗೂ ಸಡಗರದಿಂದ ಹೋಳಿ ಆಚರಣೆ ಮಾಡಲಾಗಿದೆ. ಶ್ರೀರಾಮನಿಗೆ ಭಕ್ತರು ಅಬಿರ್-ಗುಲಾಲ್ ಹಚ್ಚಿ ಸಂಭ್ರಮಿಸಿದ್ದಾರೆ.
ಹೌದು.. ಸುಮಾರು ಐನೂರು ವರ್ಷಗಳ ನಂತರ, ಅಯೋಧ್ಯೆಯಲ್ಲಿ ರಘುವೀರ ಶ್ರೀರಾಮಲಲ್ಲಾ ಹೋಳಿ ಆಡಿದರು. ಈ ಸಂದರ್ಭದಲ್ಲಿ ಅಸಂಖ್ಯಾತ ಭಕ್ತರು ಮರ್ಯಾದಾ ಪುರುಷೋತ್ತಮನನ್ನು ನೋಡಿ ಸಂತೋಷದಿಂದ ಕುಣಿದರು.ಅಯೋಧ್ಯೆಯಲ್ಲಿ ಬಾಲರಾಮನ ಮೂರ್ತಿ ಪ್ರತಿಷ್ಠಾಪನೆ ಮಾಡಿದ ನಂತರ ಇದೇ ಮೊದಲ ಬಾರಿಗೆ ಅತ್ಯಂತ ಅದ್ಧೂರಿಯಿಂದ ಹೋಳಿ ಆಚರಣೆ ಮಾಡಲಾಯಿತು. ದೇಶದ ಮೂಲೆ ಮೂಲೆಗಳಿಂದ ಬಂದ ಅಸಂಖ್ಯಾತ ಭಕ್ತರು ಮುಂಜಾನೆಯಿಂದಲೇ ದೇವಾಲಯಕ್ಕೆ ಆಗಮಿಸಿ ರಾಮ ಮಂದಿರದಲ್ಲಿರುವ ರಾಮಲಲ್ಲಾ ವಿಗ್ರಹಕ್ಕೆ ಬಣ್ಣ ಮತ್ತು ಗುಲಾಲ್ ಹಚ್ಚಿದರು.
ಇಡೀ ರಾಮಜನ್ಮಭೂಮಿ ಕಾಂಪ್ಲೆಕ್ಸ್ ಹೋಳಿ ಹಬ್ಬದ ಬಣ್ಣಗಳಿಂದ ಹಬ್ಬದ ಖುಷಿಯಲ್ಲಿ ಮುಳುಗಿತ್ತು. ಸಾವಿರಾರು ಭಕ್ತರು ಮೊದಲು ರಾಮ್ ಕಿ ಪೌರಿಯಲ್ಲಿ ಹೋಳಿ ಆಚರಿಸಿ ನಂತರ ಸ್ನಾನ ಮಾಡಿದರು.ಮತ್ತೊಂದೆಡೆ, ರಾಮಮಂದಿರದ ಅಂಗಳದಲ್ಲಿ, ಅರ್ಚಕರು ವಿಗ್ರಹದ ಮೇಲೆ ಹೂವುಗಳನ್ನು ಸುರಿಸಿದರು. ಇದರ ಜೊತೆಗೆ ಭಗವಾನ್ ರಾಮನೊಂದಿಗೆ ಹೋಳಿ ಆಡಿದರು.ಇದಾದ ಬಳಿಕ ಅಯೋಧ್ಯಾಪತಿ ಶ್ರೀರಾಮ ದೇವರಿಗೆ 56 ಬಗೆಯ ಖಾದ್ಯಗಳನ್ನು ಅರ್ಪಿಸಲಾಯಿತು.ಪುರೋಹಿತರು ಭಕ್ತರೊಂದಿಗೆ ಹೋಳಿ ಹಾಡುಗಳನ್ನು ಹಾಡಿದರು ಮತ್ತು ರಾಮಲಲ್ಲಾನನ್ನು ಮೆಚ್ಚಿಸಲು ವಿಗ್ರಹದ ಮುಂದೆ ನೃತ್ಯ ಮಾಡಿ ಕುಣಿದು ಕುಪ್ಪಳಿಸಿದರು.