ನ್ಯೂಸ್ ನಾಟೌಟ್: ವ್ಯಕ್ತಿಯೊಬ್ಬ ನಕ್ಸಲರು ಬಂದಿದ್ದಾರೆಂದು ಸುಳ್ಳು ಮಾಹಿತಿಯನ್ನು ಕೊಟ್ಟ ಹಿನ್ನೆಲೆಯಲ್ಲಿ ಪೊಲೀಸರನ್ನೇ ಪೊಲೀಸರು ಹುಡುಕಿದ ವಿಚಿತ್ರ ಘಟನೆ ಬೆಳ್ತಂಗಡಿಯಿಂದ ವರದಿಯಾಗಿದೆ.
ಬೆಳ್ತಂಗಡಿ ತಾಲೂಕಿನ ಕಾಡಂಚಿನ ಗ್ರಾಮ ಚಾರ್ಮಾಡಿ ಅರಣ್ಯ ವ್ಯಾಪ್ತಿಯ ಕುತ್ಲೂರು ಗ್ರಾಮ. ಇಲ್ಲಿ ತಡರಾತ್ರಿ ಒಂಟಿ ಮನೆಯೊಂದಕ್ಕೆ ಓರ್ವ ಮಹಿಳೆ ಒಳಗೊಂಡಂತೆ ಐವರ ತಂಡವಿದ್ದ ಅಪರಿಚಿತರು ಬಾಗಿಲು ತಟ್ಟಿದ್ದಾರೆ. ಎಲ್ಲರು ಕೂಡ ಖಾಕಿ ಬಟ್ಟೆಯನ್ನು ಧರಿಸಿದ್ದರು, ಮಾತ್ರವಲ್ಲ ಅವರ ಕೈಯಲ್ಲಿ ಮಾರಕಾಸ್ತ್ರಗಳಿದ್ದವು ಎಂದು ಪುಂಜಾಜೆ ಮನೆ ಮಾಲೀಕ ಜೋಸಿ ಆಂಟನಿ ಎಂಬಾತ ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಬೆಳ್ತಂಗಡಿ ಪೊಲೀಸರು ತೀವ್ರ ತನಿಖೆ ನಡೆಸಿದ್ದಾರೆ. ಇದೀಗ ಬಂದಿರುವ ಮಾಹಿತಿ ಪ್ರಕಾರ
ನಾವು ವೇಣೂರಿನಿಂದ ಬಂದಿರುವ ಪೊಲೀಸರು ಎಂದು ಹೇಳುವ ಮೂಲಕ ತಂಡ ಬಾಗಿಲು ತೆರೆಯಿರಿ ಎಂದು ಹೇಳಿದೆ. ಆದರೆ ಮನೆಯವರು ಬಾಗಿಲು ತೆರೆಯಲಿಲ್ಲ. ಇದರಿಂದ ಸಿಟ್ಟುಗೊಂಡು ಹಾರೆಯಲ್ಲಿ ಮನೆಯ ಬಾಗಿಲನ್ನು ಮುರಿಯುವ ಪ್ರಯತ್ನ ನಡೆಸಲಾಯಿತು ಎಂದು ತಿಳಿದು ಬಂದಿದೆ. ಈ ವಿಚಾರ ತಿಳಿಯುತ್ತಿದ್ದಂತೆ ಇದೀಗ ಸ್ಥಳಕ್ಕೆ ವೇಣೂರು ಪೊಲೀಸರು ಹಾಗೂ ಬೆಳ್ತಂಗಡಿ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಬಂದವರು ನಕ್ಸಲರು ಇರಬಹುದು ಅನ್ನುವ ಶಂಕೆ ಹಿನ್ನೆಲೆಯಲ್ಲಿ ತನಿಖೆ ನಡೆಸಲಾಗುತ್ತಿದೆ. ಇದೀಗ ಬಂದಿರುವ ಮಾಹಿತಿಯ ಪ್ರಕಾರ ಕುತ್ಲೂರಿಗೆ ಬಂದವರು ನಕ್ಸಲರಲ್ಲ ಪೊಲೀಸರೇ ಎಂದು ತಿಳಿದು ಬಂದಿದೆ. ಇದರೊಂದಿಗೆ ವ್ಯಕ್ತಿ ತಪ್ಪು ಮಾಹಿತಿಯನ್ನು ನೀಡಿದ್ದಾನೆ ಅನ್ನುವುದು ತಿಳಿದು ಸ್ವಲ್ಪ ಮಟ್ಟಿಗೆ ಆತಂಕ ಕಡಿಮೆಯಾಗಿದೆ. ಈ ಬಗ್ಗೆ ಎಸ್ ಪಿ ರಿಷ್ಯಂತ್ ಮಾತನಾಡಿದ್ದು, ‘ಜೋಸಿ ಆಂಟನಿ ಎಂಬಾತ ನಕ್ಸಲರು ಅಂತ ನಾಟಕವಾಡಿದ ಹಿನ್ನೆಲೆಯಲ್ಲಿ ಸುಳ್ಳು ಮಾಹಿತಿ ಪ್ರಚಾರವಾಗಿದೆ. 48 ಲಕ್ಷ ರೂ. ವಂಚನೆ ಬಗ್ಗೆ ಮೂಡುಬಿದಿರೆ ಪೊಲೀಸ್ ಠಾಣೆಗೆ ಶರತ್, ಸುಹಾನಾ ಎಂಬವರು ಜೊಸ್ಸಿ ಆಂಟನಿ ವಿರುದ್ಧ ದೂರು ನೀಡಿದ್ದರು. ಈ ಬಗ್ಗೆ ವಿಚಾರಣೆಗೆ ಬೆಳಗ್ಗೆ ಹೋದರೆ ಆರೋಪಿ ಸಿಗುವುದಿಲ್ಲ ಎಂದು ಆತನ ಮನೆಗೆ ಇಬ್ಬರು ಹೆಡ್ ಕಾನ್ಸ್ಟೆಬಲ್, ಓರ್ವ ಮಹಿಳಾ ಸಿಬ್ಬಂದಿಯೊಂದಿಗೆ ಮೂಡಬಿದಿರೆ ಪೊಲೀಸ್ ಮತ್ತು ದೂರುದಾರರು ತೆರಳಿದ್ದರು. ಈ ವೇಳೆ ಆತ ಮನೆ ಬಾಗಿಲನ್ನು ತೆರೆದಿರಲಿಲ್ಲ. ನಕ್ಸಲರು ಬಂದಿದ್ದಾರೆಂದು ಸುಳ್ಳು ಮಾಹಿತಿಯನ್ನು ಬೆಳ್ತಂಗಡಿ ಪೊಲೀಸರಿಗೆ ನೀಡಿದ್ದಾನೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.