ನ್ಯೂಸ್ ನಾಟೌಟ್: ದಲಿತ ಕುಟುಂಬಗಳು ಓಡಾಡುತ್ತಿದ್ದ ರಸ್ತೆಯನ್ನೇ ಸ್ಥಳೀಯ ವ್ಯಕ್ತಿಯೊಬ್ಬ JCB ತಂದು ರಸ್ತೆಗೆ ಮಣ್ಣು ಹಾಕಿ ಮುಚ್ಚಿದ ಘಟನೆ ಪೊಲೀಸ್ ಠಾಣೆ ಮೆಟ್ಟಿಲೇರಿದ ಘಟನೆ ನಡೆದಿದೆ.
ಸುಳ್ಯ ತಾಲೂಕಿನ ನಾಲ್ಕೂರು ಗ್ರಾಮದ ಚತ್ರಪಾಡಿ ಎಂಬಲ್ಲಿ ದಲಿತ ಕುಟುಂಬಗಳು ಓಡಾಡಿಕೊಂಡಿದ್ದ ಸಾರ್ವಜನಿಕ ರಸ್ತೆಯನ್ನು ಸ್ಥಳೀಯ ವ್ಯಕ್ತಿಯೋರ್ವ ಯಾವುದೇ ಸರ್ಕಾರಿ ಅಧಿಕಾರಿಗಳಿಗೆ ಮಾಹಿತಿ ನೀಡದೆ ಜೆಸಿಬಿ ಮುಖಾಂತರ ರಸ್ತೆ ಮುಚ್ಚಿದ ಪರಿಣಾಮ ಕಾಲನಿಯ ಜನತೆಗೆ ಸಂಚಾರಕ್ಕೆ ತೊಂದರೆಯಾಗಿತ್ತು. ಸಮಸ್ಯೆ ಬಗ್ಗೆ ಕಾಲನಿ ನಿವಾಸಿಗಳು ಅಂಬೇಡ್ಕರ್ ರಕ್ಷಣಾ ವೇದಿಕೆಗೆ ದೂರು ನೀಡಿದ್ದರು.
ಈ ಮನವಿಗೆ ಸ್ಪಂದಿಸಿದ ವೇದಿಕೆಯ ಜಿಲ್ಲಾಧ್ಯಕ್ಷ ಸುಂದರ ಪಾಠಜೆ, ಜಿಲ್ಲಾ ಕಾರ್ಯದರ್ಶಿ ಪರಮೇಶ್ವರ ಕೆಮ್ಮಿಂಜೆ, ಸದಸ್ಯರಾದ ಜಗದೀಶ ಹಾಗೂ ಮುಗೇರ ಸಂಘದ ಸುಳ್ಯ ತಾಲೂಕು ಅಧ್ಯಕ್ಷ ಕರುಣಾಕರ ಪಲ್ಲತ್ತಡ್ಕ ಮುಗೇರ ಯುವ ವೇದಿಕೆ ಗೌರವಾಧ್ಯಕ್ಷ ಪ್ರಕಾಶ್ ಪಿ.ಎಸ್ ಶುಕ್ರವಾರ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ರಸ್ತೆ ಮುಚ್ಚಿರುವ ವಿಷಯವನ್ನು ಸುಬ್ರಹ್ಮಣ್ಯ ಪೊಲೀಸ್ ಠಾಣೆಯ ಎಸ್ಐ ಮತ್ತು ಕಾನ್ಸ್ಟೇಬಲ್ ಗಮನಕ್ಕೆ ತಂದಿದ್ದಾರೆ.
ಸ್ಥಳಕ್ಕೆ ಬಂದ ಪೊಲೀಸರಲ್ಲಿ ಕಾಲನಿ ಸಮಸ್ಯೆಯ ಬಗ್ಗೆ ಜಿಲ್ಲಾಧ್ಯಕ್ಷ ಪಿ.ಸುಂದರ ಪಾಟಾಜೆ ವಿವರಿಸಿ ದಲಿತರು ಓಡಾಡುವ ರಸ್ತೆಯನ್ನು ಬಂದ್ ಮಾಡಿರುತ್ತಾರೆ. ಆದ ಕಾರಣ ಸರ್ವೇ ಕಾರ್ಯ ಆಗುವವರೆಗೆ ರಸ್ತೆ ಕೆಲಸ ಮಾಡಬಾರದು ಎಂದು ಹೇಳಿದಾಗ ಅದಕ್ಕೆ ಒಪ್ಪಿದ ಪೊಲೀಸ್ ಅಧಿಕಾರಿಯವರು ಮತ್ತು ಖಾಸಗಿ ವ್ಯಕ್ತಿಯಲ್ಲಿ ಆದಷ್ಟು ಬೇಗ ಸರ್ವೇ ಮಾಡಿ ಈ ಪ್ರಕರಣವನ್ನು ಇತ್ಯರ್ಥ ಮಾಡಿಕೊಡಬೇಕು. ಅಲ್ಲದೇ ದಲಿತ ಕಾಲನಿ ರಸ್ತೆ ಸರ್ವೇ ಕಾರ್ಯ ಮುಗಿಯುವವರೆಗೆ ಸಂಚಾರಕ್ಕೆ ಮುಕ್ತ ಅವಕಾಶ ಮಾಡಿಕೊಡಬೇಕು ಎಂದು ತಿಳಿಸಿದ್ದಾರೆ.