ಗೋಳಿತೊಟ್ಟು: ಕಿಲಾಡಿ ಮಹಿಳೆಯೊಬ್ಬಳ ರಾಜಕೀಯ ಬಕೆಟ್ ಗಿರಿಯಿಂದಾಗಿ ಪ್ರಾಮಾಣಿಕ ದಲಿತ ಪಿಡಿಒ (ಪಂಚಾಯತ್ ಅಭಿವೃದ್ಧಿ ಅಧಿಕಾರಿ) ವರ್ಗಾವಣೆಗೆ ಯತ್ನ ನಡೆಯುತ್ತಿದೆ ಅನ್ನುವ ಆರೋಪ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಗೋಳಿತೊಟ್ಟು ಗ್ರಾಮದಿಂದ ವರದಿಯಾಗಿದೆ. ಊರಿನ ಅಭಿವೃದ್ಧಿಯನ್ನೇ ಗುರಿಯಾಗಿಸಿಕೊಂಡು ಪ್ರಾಮಾಣಿಕ ಕೆಲಸ ಮಾಡುತ್ತಿರುವ ಪಿಡಿಒ ಸಿ.ವೆಂಕಟೇಶ್ ಹಿಂದುಳಿದ ದಲಿತ ಜನಾಂಗಕ್ಕೆ ಸೇರಿದವರು. ಕಳೆದ ಕೆಲವು ವರ್ಷಗಳಿಂದ ತನ್ನ ಕರ್ತವ್ಯವನ್ನು ಅತ್ಯಂತ ನಿಷ್ಠೆಯಿಂದ ಮಾಡಿಕೊಂಡು ಬಂದಿದ್ದ ವೆಂಕಟೇಶ್ಗೆ ಈಗ ದಿಢೀರ್ ವರ್ಗಾವಣೆ ಭಯದಲ್ಲೇ ಬದುಕುವಂತಾಗಿದೆ.
ರಾಜ್ಯ ಪ್ರಶಸ್ತಿ ವಿಜೇತ ಪಿಡಿಒ ಗೆ ವರ್ಗಾವಣೆ ಶಿಕ್ಷೆಯೇಕೆ?
ವರ್ಷದ ಆರಂಭದಲ್ಲಿ ಮಹಾತ್ಮಗಾಂಧಿ ಉದ್ಯೋಗ ಖಾತರಿ ಯೋಜನೆಯಡಿ ನೀಡಲ್ಪಡುವ ಮಾನವ ದಿನ ಯೋಜನೆ ಇದರ ಅತ್ಯುತ್ತಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಾಜ್ಯ ಪ್ರಶಸ್ತಿಯನ್ನು ವೆಂಕಟೇಶ್ ಪಡೆದಿದ್ದಾರೆ. ಹುಬ್ಬಳ್ಳಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವ ಈಶ್ವರಪ್ಪ ಪ್ರಶಸ್ತಿ ನೀಡಿದ್ದರು. ಇನ್ನು ವೆಂಕಟೇಶ್ ಲಾಕ್ಡೌನ್ ಸಮಯದಲ್ಲಿ ಉದ್ಯೋಗ ಕಳೆದುಕೊಂಡು ಮನೆ ಸೇರಿದ್ದ ಅನೇಕ ಯುವಕರನ್ನು ಸಂಪರ್ಕಿಸಿ ಸ್ಫೂರ್ತಿ ತುಂಬಿದ್ದರು. ಕೃಷಿ ಸ್ವಾವಲಂಬಿ ಬದುಕಿನ ಬಗ್ಗೆ ಮನೆಮನೆಗೆ ತೆರಳಿ ಜಾಗೃತಿ ಮೂಡಿಸಿದ್ದರು. ಗೋಳಿತೊಟ್ಟು ಗ್ರಾಮದಲ್ಲಿ ಪ್ರಭಾರ ಹುದ್ಧೆಯಲ್ಲಿರುವ ವೆಂಕಟೇಶ್ ಜಿಲ್ಲಾ ಮಟ್ಟದಲ್ಲಿ ಗೋಳಿತೊಟ್ಟು ಗ್ರಾಮಕ್ಕೆ ಪ್ರಶಸ್ತಿ ತರುವಲ್ಲಿಯೂ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಅಲ್ಲದೆ ಕೇವಲ ಆರು ತಿಂಗಳಲ್ಲಿ ಸರಕಾರದ ವಾರ್ಷಿಕ ಗುರಿ ಸಾಧನೆಯ ಗ್ರಾಮದಲ್ಲಿ ಗುರಿ ಮುಟ್ಟಿಸಿದ ಅವಿರತ ಕೆಲಸಗಾರ ಎಂದು ಗುರುತಿಸಿಕೊಂಡಿದ್ದರು. ಇಂತಹ ದಕ್ಷ ಅಧಿಕಾರಿ ವರ್ಗಾವಣೆಗೆ ಗ್ರಾಮಸ್ಥರ ವ್ಯಾಪಕ ವಿರೋಧ ವ್ಯಕ್ತವಾಗಿದೆ.
ಒತ್ತಡದ ಸುಳಿಯಲ್ಲಿ ಉಸ್ತುವಾರಿ ಸಚಿವರು?
ಗೋಳಿತೊಟ್ಟು ಕಡಬ ವ್ಯಾಪ್ತಿಯೊಳಗಿದ್ದು ಅಲ್ಲಿಂದ ಓಟು ಪಡೆದಿರುವ ಉಸ್ತುವಾರಿ ಸಚಿವರು ಹಾಗೂ ಸುಳ್ಯ ಶಾಸಕರಾಗಿರುವ ಎಸ್. ಅಂಗಾರ ಅವರು ತನ್ನ ವ್ಯಾಪ್ತಿಯಲ್ಲಿನ ಕುಂದುಕೊರತೆ ಆಲಿಸುತ್ತಾರೆ. ಆದರೆ ಈ ಕ್ಷೇತ್ರದಲ್ಲಿನ ಮೂರ್ನಾಲ್ಕು ಮಂದಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವುದಕ್ಕಾಗಿ ಪಿಡಿಒ ವರ್ಗಾವಣೆ ನಡೆಸುವುದಕ್ಕೆ ಸಂಚು ರೂಪಿಸಿದ್ದಾರೆ. ಇಡೀ ವ್ಯವಸ್ಥೆಯನ್ನು ಹಾಳು ಮಾಡಿ ಗ್ರಾಮಕ್ಕೆ ಮಾರಕವಾಗುತ್ತಿದ್ದಾರೆ ಎಂದು ಊರಿನವರು ಮಾತನಾಡಿಕೊಳ್ಳುತ್ತಿದ್ದಾರೆ.
ಹಿಂದಿದ್ದಾಳೆ ಒಬ್ಬಳು ಕಿಲಾಡಿ ಲೇಡಿ..!
ಪಿಡಿಒ ವರ್ಗಾವಣೆ ಹಿಂದೆ ಒಬ್ಬಳು ಮಹಿಳಾ ರಾಜಕಾರಣಿ ಇದ್ದಾಳೆ ಎನ್ನುವ ವಿಚಾರವನ್ನು ಸ್ಥಳೀಯರು ಮಾತನಾಡಿಕೊಳ್ಳುತ್ತಿದ್ದಾರೆ. ತನ್ನ ವೈಯಕ್ತಿಕ ಕೆಲಸವನ್ನು ಮಾಡಿಸಿಕೊಳ್ಳಲು, ತಾನು ಹೇಳಿದಂತೆ ಕೇಳುವ, ತನಗೆ ಬೇಕಾದ ಪಿಡಿಒ ಅನ್ನು ಗೋಳಿತೊಟ್ಟು ಗ್ರಾಮಕ್ಕೆ ತರುವುದಕ್ಕಾಗಿ ಆಕೆ ಇನ್ನಿಲ್ಲದ ಹುನ್ನಾರ ನಡೆಸುತ್ತಿದ್ದಾಳೆ. ಇದಕ್ಕಾಗಿ ಸಚಿವರ ಬಳಿ ಒತ್ತಡ ತರುವ ಪ್ರಯತ್ನ ನಡೆಸುತ್ತಿದ್ದಾಳೆ ಎಂದು ಹೇಳಲಾಗುತ್ತಿದೆ.
ಸಚಿವರೇ ಒತ್ತಡಕ್ಕೆ ಮಣಿಯದಿರಿ
ಈ ಬಗ್ಗೆ ನ್ಯೂಸ್ ನಾಟೌಟ್ ಗೆ ಪ್ರತಿಕ್ರಿಯಿಸಿದ ದಲಿತ ಸಂಘರ್ಷ ಸಮಿತಿಯ ಅಶೋಕ್ ಸಿಬಿ ಅವರು ಪ್ರತಿಕ್ರಿಯಿಸಿದ್ದು ಹೀಗೆ, ‘ಇಡೀ ಗ್ರಾಮಕ್ಕೆ ಪಿಡಿಒ ವೆಂಕಟೇಶ್ ಬೇಕು. ಆದರೆ ಮೂರ್ನಾಲ್ಕು ಮಂದಿಗೆ ಮಾತ್ರ ಬೇಡ. ಗ್ರಾಮಸ್ಥರ ಅಭಿಪ್ರಾಯ ಕೇಳದೆ ಕೇವಲ ಮೂರ್ನಾಲ್ಕು ಜನರ ಸ್ವಾರ್ಥ ಸಾಧನೆಗಾಗಿ ವರ್ಗಾವಣೆಗೆ ಪ್ರಯತ್ನ ನಡೆಸಲಾಗುತ್ತಿದೆ. ಸಚಿವರೇ ನೀವು ಎಲ್ಲರ ಅಭಿಪ್ರಾಯ ಪಡೆದು ಪಿಡಿಒ ಬದಲಾಯಿಸಿ. ಆದರೆ ಏಕಾಏಕಿ ಪಿಡಿಒ ವರ್ಗಾವಣೆ ಮಾಡಬೇಡಿ, ಇದರಿಂದ ನಮ್ಮ ಊರಿನ ಅಭಿವೃದ್ಧಿ ಕೆಲಸಗಳಿಗೆ ತುಂಬಾ ಹೊಡೆತ ಬೀಳುತ್ತದೆ ಎಂದು ತಿಳಿಸಿದರು. ಎಸ್. ಅಂಗಾರ ಅವರ ಬಗ್ಗೆ ನನಗೆ ಗೌರವವಿದೆ. ಅವರಿಗೆ ಇದರ ಬಗ್ಗೆ ಏನೂ ವಿಷಯ ತಿಳಿದಿಲ್ಲ. ಅವರು ನಮ್ಮ ಊರಿನ ಅಭಿವೃದ್ಧಿಗೆ ಹಲವಾರು ಕೊಡುಗೆ ನೀಡಿದ್ದಾರೆ. ನಾವು ಇಡೀ ಊರಿನವರು ಅವರಿಗೆ ಋಣಿಯಾಗಿದ್ದೇವೆ. ಆದರೆ ಕೆಲವರು ಅವರ ಬಳಿ ಲಾಭಿ ಮಾಡುವುದಕ್ಕಾಗಿ ಪ್ರಯತ್ನಿಸುತ್ತಿದ್ದಾರೆ. ಅಂತಹವರನ್ನು ದೂರ ಇಡಿ. ಸರಕಾರಕ್ಕೆ, ಪಕ್ಷಕ್ಕೆ ಸಾರ್ವಜನಿಕವಾಗಿ ಮುಜುಗರ ಆಗುವುದನ್ನು ತಪ್ಪಿಸಿ ಎಂದು ಅಶೋಕ್ ಮನವಿ ಮಾಡಿದ್ದಾರೆ.
ವರ್ಗಾವಣೆಯಾದರೆ ಉಗ್ರ ಪ್ರತಿಭಟನೆ
ಅವರ ವರ್ಗಾವಣೆ ಆದೇಶವನ್ನು ಹಿಂದಕ್ಕೆ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ದಲಿತ ಸಂಘ ಮತ್ತು ಊರಿನ ಜನರು ಪಂಚಾಯತ್ ಮುಂದೆ ಉಗ್ರ ಪ್ರತಿಭಟನೆ ನಡೆಸುವುದಾಗಿ ಅಶೋಕ್ ಎಚ್ಚರಿಕೆ ನೀಡಿದ್ದಾರೆ. ಅಂಗಾರರು ಕೇವಲ ನಾಲ್ಕು ಜನರಿಗೆ ಸಚಿವರಲ್ಲ, ಅವರು ಇಡೀ ದಕ್ಷಿಣ ಕನ್ನಡ ಜಿಲ್ಲೆಗೆ ಸಚಿವರು, ಸ್ವತಃ ದಲಿತ ವರ್ಗಕ್ಕೆ ಸೇರಿರುವ ಸಚಿವರು ತಮ್ಮದೇ ಜನಾಂಗಕ್ಕೆ ಸೇರಿದ ಹಿಂದುಳಿದ ವರ್ಗದ ಅಧಿಕಾರಿಯನ್ನು ಯಾವುದೇ ತಪ್ಪಿಲ್ಲದ ವಿನಾಕಾರಣ ವರ್ಗಾವಣೆ ಮಾಡಬಾರದು. ಯಾರದೋ ಒತ್ತಡಕ್ಕೆ ಮಣಿದು ಒಬ್ಬ ದಲಿತ ಪಿಡಿಒ ವರ್ಗಾವಣೆ ಮಾಡಿದರೆ ನಿಮಗೆ ಕೆಟ್ಟ ಹೆಸರು ಬರುತ್ತದೆ ಎಂದು ಒತ್ತಾಯಿಸಿದ್ದಾರೆ.