ನ್ಯೂಸ್ ನಾಟೌಟ್ : ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಪ್ರತಿ ಮನೆಗೂ 200 ಯೂನಿಟ್ ಉಚಿತ ವಿದ್ಯುತ್ ನೀಡಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಘೋಷಣೆ ಮಾಡಿದ್ದಾರೆ.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಪ್ರಜಾಧ್ವನಿ ಸಮಾವೇಶದಲ್ಲಿ ಮಾತನಾಡಿದ ಡಿಕೆಶಿ ಉಚಿತ ವಿದ್ಯುತ್ ನೀಡುವ ಘೋಷಣೆ ಮಾಡಿ ಮುಖಂಡರಿಂದ ಬಿತ್ತಿ ಫಲಕ ಬಿಡುಗಡೆ ಮಾಡಿದರು. ಇನ್ಮೇಲೆ ನೀವ್ಯಾರೂ ಕರೆಂಟ್ಗೆ ದುಡ್ಡು ಕೊಡಬೇಕಾಗಿಲ್ಲ. 200 ಯೂನಿಟ್ ವರೆಗೂ ನೀವ್ಯಾರೂ ಬಿಲ್ ಕಟ್ಟುವ ಅವಶ್ಯಕತೆ ಇಲ್ಲ ಎಂದು ಡಿಕೆಶಿ ಘೋಷಿಸಿದರು.
ರೈತರ ಆದಾಯ ಡಬಲ್ ಮಾಡುತ್ತೇವೆ ಎಂದು ವಚನ ಕೊಟ್ರು, ಯಾರಿಗಾದರೂ ಆಯ್ತಾ? ನಿಮ್ಮ ಎಲ್ಲಾ ಸಾಲಗಳನ್ನು ಮನ್ನಾ ಮಾಡುತ್ತೇವೆ ಅಂತ ಹೇಳಿದ್ರು, ಯಾರದ್ದಾದರೂ ಸಾಲ ಮನ್ನಾ ಆಯ್ತಾ? ಆಪರೇಷನ್ ಕಮಲ ಮಾಡಿ ನಿಮ್ಮ ಜಿಲ್ಲೆಯ ಮೂವರನ್ನು ಕರೆದುಕೊಂಡು ಸರ್ಕಾರ ಮಾಡಿದರು. ಇವರು ನಿಮಗೇನಾದರೂ ಹೇಳಿದ್ರಾ? ಬಿಜೆಪಿಯ ಪಾಪಾದ ಪುರಾಣ ನಾವು ಬಿಡುಗಡೆ ಮಾಡಿದ್ದೇವೆ ಎಂದು ಕಿಡಿಕಾರಿದರು.