ನ್ಯೂಸ್ ನಾಟೌಟ್: ಕೆಲವರಿಗೆ ಜೀವನದಲ್ಲಿ ಬೇಕಾದಷ್ಟು ಸಂಪತ್ತು ಇರುತ್ತದೆ. ಆದರೆ ಸಮಾಜಕ್ಕೆ ಒಳಿತು ಮಾಡುವ ಮನಸ್ಸೇ ಇರುವುದಿಲ್ಲ. ಇನ್ನೂ ಕೆಲವರಿಗೆ ಆರ್ಥಿಕವಾಗಿ ಏನೂ ಇರುವುದಿಲ್ಲ. ಆದರೆ ಮಹತ್ತರವಾದುದನ್ನು ಸಾಧಿಸುವ ಕನಸು ಬೆಟ್ಟದಷ್ಟಿರುತ್ತದೆ. ಇಂತಹುದೇ ಒಂದು ಕನಸು ಹೊತ್ತುಕೊಂಡು ಮಧ್ಯಮ ವರ್ಗದ ಕುಟುಂಬದ ಯುವಕನೊಬ್ಬ ಇಡೀ ದೇಶವನ್ನು ಕಾಲ್ನಡಿಗೆಯಲ್ಲಿ ಸುತ್ತುವ ಭಾರಿ ಸಾಹಸಕ್ಕೆ ಕೈ ಹಾಕಿದ್ದಾನೆ.
ಯುವಕನ ಹೆಸರು ಕೃಷ್ಣ ನಾಯಕ್ (೨೯ ವರ್ಷ). ಮೈಸೂರಿನ ಜಯಪುರ ಹೋಬಳಿ ಉದ್ಗೂರು ಗ್ರಾಮದವರು. ವೃತ್ತಿ ನಿರತ ಯೋಗ ಶಿಕ್ಷಕರಾಗಿರುವ ಅವರು ಯೋಗ ಶಿಕ್ಷಣದ ಮಹತ್ವವನ್ನು ಸಾರುವುದರ ಜತೆಗೆ ಪರಿಸರದ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದಕ್ಕಾಗಿ ಮೈಸೂರಿನಿಂದ ಅಕ್ಟೋಬರ್ ೧೬ರಿಂದ ಪಾದಾಯಾತ್ರೆ ಆರಂಭಿಸಿದ್ದಾರೆ. ಇವರ ಈ ಪಾದೆಯಾತ್ರೆಯು ಎರಡು ವರ್ಷಕ್ಕೂ ಅಧಿಕ ಕಾಲ ದೇಶದ ವಿವಿಧ್ಯ ರಾಜ್ಯಗಳಲ್ಲಿ ನಿರಂತರವಾಗಿ ಸಾಗಲಿದೆ.
ಮೈಸೂರಿನಿಂದ ಹುಣಸೂರು, ಕುಶಾಲನಗರ, ಮಡಿಕೇರಿ ಮೂಲಕ ಸುಳ್ಯಕ್ಕೆ ಆಗಮಿಸಿ ಕೃಷ್ಣ ನಾಯಕ್ ಅವರನ್ನು ಸುಳ್ಯದ ಜನತೆ ಅದ್ದೂರಿಯಾಗಿ ಸ್ವಾಗತಿಸಿದ್ದಾರೆ. ದೇಶದ ಧ್ವಜವನ್ನು ತನ್ನ ಬ್ಯಾಗಿಗೆ ಸಿಕ್ಕಿಸಿಕೊಂಡು ನಡೆಯುತ್ತಿರುವ ಯುವಕ ಸಾಧನೆ ಕಂಡು ಎಲ್ಲರು ಸೆಲ್ಫಿ ಕ್ಲಿಕ್ಕಿಸಿಕೊಂಡರು. ಸುಳ್ಯದಲ್ಲಿ ಆತನಿಗೆ ಉಪಹಾರ ವ್ಯವಸ್ಥೆ ಮಾಡಲಾಯಿತು. ಜತೆಗೆ ಉಳಿದುಕೊಳ್ಳಲು ವ್ಯವಸ್ಥೆಯನ್ನು ಮಾಡಲಾಗಿತ್ತು. ಸುದ್ದಿ ಮಾಧ್ಯಮದ ಹಿರಿಯ ವರದಿಗಾರ ಹರೀಶ್ ಬಂಟ್ವಾಳ, ನ್ಯೂಸ್ ನಾಟೌಟ್ ಮಾಧ್ಯಮದ ಮುಖ್ಯ ಸಂಪಾದಕ ಹೇಮಂತ್ ಸಂಪಾಜೆ, ಯತೀಶ್ ಆರ್ವಾರ್, ಶ್ರೀರಾಮ್ ತರಕಾರಿ ಅಂಗಡಿ ಮಾಲೀಕರಾದ ರಾಮಕೃಷ್ಣ ಅಲಂಕಲ್ಯ, ರಜತ್ ಗೌಡ, ಕೌಶಲ್ ಗೌಡ, ದೇವಿ ಪ್ರಸಾದ್ ಕುದ್ಪಾಜೆ, ಸಂಶುದ್ದೀನ್ , ದೇವ ನರ್ಸರಿ, ಬಾಸ್ಕರ ಬದಿಕಾನ ಮತ್ತಿತರರು ಉಪಸ್ಥಿತರಿದ್ದು ಯುವಕನ ಮುಂದಿನ ಪ್ರಯಾಣಕ್ಕೆ ಶುಭ ಹಾರೈಸಿದರು.
ತ್ರಿಶ್ಯೂರ್, ತಲಚೇರಿ, ಕೋಝಿಕೋಡ್, ತಿರುವನಂತಪುರ, ಕನ್ಯಾಕುಮಾರಿ, ಮಧುರೈ, ತಂಜಾವೂರು, ಪುದುಚೇರಿ, ಚೆನ್ನೈ, ಹೈದರಾಬಾದ್, ವಿಶಾಖಪಟ್ಟಣ, ಭುವನೇಶ್ವರ, ಕೋಲ್ಕತ್ತಾ, ತ್ರಿಪುರ, ಅಗರ್ತಲ, ಕೊಹಿಮಾ, ಇಟಾನಗರ, ಗುವಾಹಟಿ, ಗಯಾ, ಪ್ರಯಾಗ್ರಾಜ್, ಲಕ್ನೋ, ಆಗ್ರಾ, ಹರಿದ್ವಾರ ಮೂಲಕ ಜಮ್ಮು –ಕಾಶ್ಮೀರಕ್ಕೆ ಪ್ರಯಾಣಿಸಿ ನಂತರ ಬೆಂಗಳೂರು ಮೂಲಕ ನಗರಕ್ಕೆ ವಾಪಸ್ಸಾಗಲಿದ್ದಾರೆ. ದಾರಿಯುದ್ದಕ್ಕೂ ಸಿಗುವ ಶಾಲೆಗಳಲ್ಲಿ ಮಕ್ಕಳಿಗೆ ಯೋಗ ಶಿಕ್ಷಣದ ಬಗೆಗಿನ ಪ್ರಾತ್ಯಕ್ಷಿತೆಯನ್ನು ಪರಿಚಯ ಮಾಡಲಿದ್ದಾರೆ. ಅಲ್ಲದೆ ಪರಿಸರ ಬಗೆಗಿನ ಮಹತ್ವದ ಮಾಹಿತಿಯನ್ನೂನೀಡಲಾಗುತ್ತದೆ ಎಂದು ಕೃಷ್ಣ ನಾಯಕ್ ತಿಳಿಸಿದ್ದಾರೆ.