ಕರಾವಳಿಸುಳ್ಯ

ಸುಳ್ಯ ಕ್ಷೇತ್ರದ ಅಭಿವೃದ್ಧಿಗೆ ಕಡಿಮೆ ಅನುದಾನ ಯಾಕೆ?ಬಿಜೆಪಿಗೆ ಕೆ.ಪಿ.ಸಿ.ಸಿ. ಪ್ರಧಾನ ಕಾರ್ಯದರ್ಶಿ ಪ್ರಶ್ನೆಗಳ ಸುರಿಮಳೆ

215

ನ್ಯೂಸ್ ನಾಟೌಟ್ : ಬಿಜೆಪಿಗರ ವಿರುದ್ಧ ಕೆ.ಪಿ.ಸಿ.ಸಿ. ಪ್ರಧಾನ ಕಾರ್ಯದರ್ಶಿ ಧನಂಜಯ ಅಡ್ಪಂಗಾಯ ಅವರು ಹಲವಾರು ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ. ಇಂದು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು ಕಳೆದ ೫ ವರ್ಷದಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರು ಮೂರುವರೆ ಸಾವಿರ ಕೋಟಿ ಅನುದಾನ ತಂದಿದ್ದಾರೆ ಎನ್ನಲಾಗುತ್ತಿದೆ. ಪುತ್ತೂರಿನ ಅಭಿವೃದ್ಧಿಗೆ ಎರಡೂವರೆ ಸಾವಿರ ಕೋಟಿ ಅನುದಾನ ತರಿಸಲಾಗಿದೆಯೆಂದು ಎಂದು ನಳಿನ್ ಕುಮಾರ್ ಕಟೀಲ್ ಹೇಳುತ್ತಾರೆ.ಸುಳ್ಯ ಕ್ಷೇತ್ರದ ಅಭಿವೃದ್ಧಿಗೆ ಕೇವಲ 15೦ ರಿಂದ 2೦೦ ಕೋಟಿ ಮಾತ್ರ ಬಂದಿದೆಯಂತೆ,ಹಾಗಾದರೆ ಇಲ್ಲಿಗೆ ಇದು ಸಾಕೇ? ಎಂದು ಕೆ.ಪಿ.ಸಿ.ಸಿ. ಪ್ರಧಾನ ಕಾರ್ಯದರ್ಶಿ ಧನಂಜಯ ಅಡ್ಪಂಗಾಯರು ಕೆಂಡಾಮಂಡಲಾಗಿದ್ದಾರೆ.

ಸುಳ್ಯ ಕ್ಷೇತ್ರದ ಅಭಿವೃದ್ಧಿಗಾಗಿ ಕಡಿಮೆ ಅನುದಾನ ಯಾಕೆ? ಇಲ್ಲಿಯ ರೈತರನ್ನು ಕಾಡುತ್ತಿರುವ ಅಡಿಕೆ ಎಲೆ ಹಳದಿ ರೋಗ, ಎಲೆ ಚುಕ್ಕೆ ರೋಗಕ್ಕೆ ಏನು ಪರಿಹಾರ ತಂದಿದ್ದಾರೆ ಎಂದು ಹೇಳಲಿ ಎಂದು ಪ್ರಶ್ನಿಸಿದ್ದಾರೆ. ಇತ್ತ ನಳಿನ್ ಕುಮಾರ್ ಕಟೀಲ್ ಅವರು ೩ ಬಾರಿ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾದವರು. ಅವರು ಸುಳ್ಯಕ್ಕೆ ಏನು ಕೊಡುಗೆ ನೀಡಿದ್ದಾರೆ. ಬಳ್ಪ ಆದರ್ಶ ಗ್ರಾಮ ಏನಾಗಿದೆ. ಯಾವುದಕ್ಕೆ ಆದರ್ಶವಾಗಿದೆ ಎಂದು ಕಿಡಿ ಕಾರಿದರು.

ಸುಳ್ಯದವರಾದ ಡಿ.ವಿ.ಸದಾನಂದ ಗೌಡ, ಶೋಭಾ ಕರಂದ್ಲಾಜೆ ಸುಳ್ಯಕ್ಕೆ ಏನು ಕೊಡುಗೆ ಕೊಟ್ಟಿದ್ದಾರೆ. ಡಿ.ವಿ.ಯವರು ಮುಖ್ಯಮಂತ್ರಿಯಾಗಿದ್ದರೂ ಕೂಡ ಅವರ ದೇವರಗುಂಡದಿಂದ ಮಂಡೆಕೋಲು ಗ್ರಾಮ ಪಂಚಾಯತ್‌ಗೆ ಹೋಗುವ ರಸ್ತೆ ವ್ಯವಸ್ಥೆಯೇ ಸರಿ ಇಲ್ಲ ಎಂದು ಅಡ್ಪಂಗಾಯರು ಟೀಕಾಪ್ರಹಾರ ಮಾಡಿದರು. ಶೋಭಾ ಕರಂದ್ಲಾಜೆಯವರು ಹಿಂದೆ ವಿದ್ಯುತ್ ಮಂತ್ರಿಯಾಗಿದ್ದರು. ಆಗ ಯಾಕೆ ಸುಳ್ಯಕ್ಕೆ ೧೧೦ ಕೆ.ವಿ. ತರಿಸಲು ಅವರು ಪ್ರಯತ್ನ ಮಾಡಲಿಲ್ಲ ಎಂದು ಗುಡುಗಿದರು.

ನಮ್ಮ ಅಭ್ಯರ್ಥಿ ಯನ್ನು ಸುಳ್ಯದ ಜನರು ಗೆಲ್ಲಿಸಿದರೆ ಸುಳ್ಯ ಅಭಿವೃದ್ಧಿಯನ್ನು ಕಾಣುತ್ತದೆ.ಅಷ್ಟೇ ಏಕೆ ನೆನೆಗುದಿಗೆ ಬಿದ್ದಿರುವ ಅಂಬೇಡ್ಕರ್ ಭವನ , ನಿರ್ವಹಣೆ ಇಲ್ಲದಿರುವ ಓಡಾಬಾಯಿ ತೂಗುಸೇತುವೆ ಸರಿಪಡಿಸುತ್ತೇವೆ.ಇನ್ನೂ ಅನೇಕ ಕನಸುಗಳು ನಮ್ಮ ಮುಂದಿದ್ದು, ಸುಳ್ಯಕ್ಕೆ ಶುದ್ಧ ಕುಡಿಯುವ ನೀರಿನ ಘಟಕ ಸೇರಿದಂತೆ ಸುಳ್ಯದ ೧೧೦ ಕೆ.ವಿ. ವಿದ್ಯುತ್ ಸಬ್‌ಸ್ಟೇಶನ್ ಕಾಮಗಾರಿ ಆರಂಭ ಮಾಡಲಾಗುವುದು ಎಂದರು.

ಸುಳ್ಯ ಅಭಿವೃದ್ಧಿ ವಿಷಯದಲ್ಲಿ ತೀರಾ ಹಿಂದೆ ಬಿದ್ದಿದೆ.ಹೀಗಾಗಿ ಸುಳ್ಯದ ರಸ್ತೆ, ಸೇತುವೆಗಳನ್ನು ಆದ್ಯತೆಯಲ್ಲಿ ಕೈಗೆತ್ತಿಕೊಳ್ಳಲಾಗುವುದು. ನಮ್ಮ ಅಭ್ಯರ್ಥಿ ಅಷ್ಟು ಸಮರ್ಥರಿದ್ದು, ನಾವು ಭರವಸೆ ನೀಡದೇ ಕೆಲಸದ ಮೂಲಕ ಉತ್ತರ ಕೊಡಲಿದ್ದೇವೆ ಎಂದರು. ಇನ್ನು ಸುಳ್ಯದಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಇದೆ. ಅನೇಕ ಕಡೆ ಮತದಾನದ ಬಹಿಷ್ಕಾರದ ಬ್ಯಾನರ್ ಗಳನ್ನು ಹಾಕಲಾಗಿದೆ. ಯಾರೆಲ್ಲ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೋ ಅವರ ಬಳಿ ತೆರಳಿ ಕುಂದುಕೊರತೆಗಳನ್ನು ಆಲಿಸಿ ಅವರ ಸಮಸ್ಯೆಗಳನ್ನು ಇತ್ಯರ್ಥ ಮಾಡುವ ಕೆಲಸ ಮಾಡುತ್ತೇವೆ ಎಂದರು.ನಾನು ಅಂಗಾರರ ಬಗ್ಗೆ ಏನು ಹೇಳಲಾರೆ. ಆದರೆ ಬೆಳ್ತಂಗಡಿ, ಪುತ್ತೂರಿಗೆ ಅನುದಾನ ಬರಲು ಈ ಮೂವರು ನಾಯಕರು ಅಲ್ಲಿಯವರಿಗೆ ಶಕ್ತಿ ತುಂಬಿದ್ದರೆ, ಅಂಗಾರರಿಗೆ ಯಾಕೆ ಶಕ್ತಿ ತುಂಬಿಲ್ಲವೆನ್ನುವುದೇ ದೊಡ್ಡ ಪ್ರಶ್ನೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

See also  ಲವ್ ಜಿಹಾದ್ ಆರೋಪ : ಹಿಂದೂ ಹುಡುಗಿ ಡಿಬಾರ್ ! ಮುಸ್ಲಿಂ ಹುಡುಗನ ಡಿಬಾರ್ ಮಾಡಿಲ್ಲ ಯಾಕೆ?ಪೋಸ್ಟ್ ವೈರಲ್

ಈ ವೇಳೆ ಕೆ.ಪಿ.ಸಿ.ಸಿ. ವಕ್ತಾರ ಟಿ.ಎಂ. ಶಹೀದ್ ತೆಕ್ಕಿಲ್ ಮಾತನಾಡಿ, ಸುಳ್ಯ ಅಭಿವೃದ್ಧಿಯಾಗಬೇಕೆಂಬುದನ್ನು ಜನರು ಹೇಳುತ್ತಿದ್ದಾರೆ. ಹೀಗಾಗಿ ಕಾಂಗ್ರೆಸ್ ಕಡೆಗೆ ಜನರ ಒಲವಿದ್ದು,ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಲಿದ್ದಾರೆ ಎಂದು ಹೇಳಿದರು. ಪ್ರಚಾರ ಸಮಿತಿ ಅಧ್ಯಕ್ಷ ಸದಾನಂದ ಮಾವಜಿ ಮಾತನಾಡಿ ಸುಳ್ಯ ಕ್ಷೇತ್ರದಲ್ಲಿ ಪ.ಜಾತಿ ಕಾಲೋನಿಗಳು ಇನ್ನು ಅಭಿವೃದ್ಧಿ ಕಂಡಿಲ್ಲ.ಸಮಸ್ಯೆಗಳ ಸುಳಿಯಲ್ಲಿವೆ.ಎಲ್ಲಿ ಹೋದರೂ ರಸ್ತೆ, ನೀರಿನ ಸಮಸ್ಯೆ ಎದ್ದು ಕಾಣುತ್ತಿದೆ. ಗ್ರಾಮ ವ್ಯಾಪ್ತಿಯಲ್ಲಿ ಇಲ್ಲಿನ ಎಂ.ಎಲ್.ಎ. ಮಾಡಲಾಗದ ಕೆಲಸವನ್ನು ಧನಂಜಯ ಅಡ್ಪಂಗಾಯ, ಟಿ.ಎಂ. ಶಹೀದ್ ಮಾಡಿ ತೋರಿಸಿದ್ದಾರೆ ಎಂದು ಹೇಳಿದರು.

ಈ ವೇಳೆ ಕೆ.ಪಿ.ಸಿ.ಸಿ. ವಕ್ತಾರ ಟಿ.ಎಂ. ಶಹೀದ್ ತೆಕ್ಕಿಲ್ ,ಪ್ರಚಾರ ಸಮಿತಿ ಅಧ್ಯಕ್ಷ ಸದಾನಂದ ಮಾವಜಿ,ಸುರೇಶ್ ಎಂ.ಎಚ್.,ಕಾಂಗ್ರೆಸ್ ಹಿಂದುಳಿದ ಘಟಕಗಳ ಅಧ್ಯಕ್ಷ ಮುತ್ತಪ್ಪ ಪೂಜಾರಿ ಉಪಸ್ಥಿತರಿದ್ದರು.

https://www.youtube.com/watch?v=Vvr_os0cDx0
  Ad Widget   Ad Widget   Ad Widget   Ad Widget   Ad Widget   Ad Widget   Ad Widget