ನ್ಯೂಸ್ ನಾಟೌಟ್ : ಕೆವಿಜಿ ಕಾನೂನು ಕಾಲೇಜಿನಲ್ಲಿ ಜಲ ಸಂರಕ್ಷಣೆ ತರಬೇತಿ ಕಾರ್ಯಕ್ರಮವನ್ನು ಏಪ್ರಿಲ್ 24 ರಂದು ಆಯೋಜಿಸಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಕಾಲೇಜಿನ ಪ್ರಾoಶುಪಾಲ ಡಾ. ಉದಯಕೃಷ್ಣ ಬಿ.ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಕೆವಿಜಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಮುಖ್ಯ ನಿರ್ವಹಣಾ ಅಧಿಕಾರಿ ಮತ್ತು ಪ್ರಿನ್ಸಿಪಾಲ್ ಅರ್ಕಿಟೆಕ್ಟ್ ಸಾಯಿರಾಂ ಜಲಸಂರಕ್ಷಣೆಯ ಅಗತ್ಯತೆ, ವಿಧಗಳು, ವಿಧಾನಗಳ ಬಗ್ಗೆ ಮಾಹಿತಿ ನೀಡಿದರು.
ತದನಂತರ ಕೆವಿಜಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಯಲ್ಲಿ ಅಳವಡಿಸಲಾಗಿರುವ ಜಲಸಂರಕ್ಷಣಾ ವಿಧಾನಗಳ ಪ್ರಾಯೋಗಿಕ ಪ್ರಾತ್ಯಕ್ಷಿಕೆ ನೀಡಲಾಯಿತು.ವೇದಿಕೆಯಲ್ಲಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಸಂಯೋಜಕಿ, ಉಪನ್ಯಾಸಕಿ ನಯನ ಪಿ ಯು, ರೆಡ್ ಕ್ರಾಸ್ ಘಟಕದ ಸಂಯೋಜಕಿ, ಉಪನ್ಯಾಸಕಿ ಅರ್ಚನಾ ಆರ್ ರೈ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಮಾನಸ ಎಮ್ ಸ್ವಾಗತಿಸಿ, ಅಭಿಷೇಕ್ ಟಿ ವಂದಿಸಿದರು. ವಿದ್ಯಾರ್ಥಿನಿ ಯಶಸ್ವಿನಿ ಕಾರ್ಯಕ್ರಮ ನಿರೂಪಿಸಿದರು.