ನ್ಯೂಸ್ ನಾಟೌಟ್: ಭಾರತದ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಸಹ ಮಾಲಿಕತ್ವದ ಬೆಂಗಳೂರಿನಲ್ಲಿರುವ ಒನ್ 8 ಕಮ್ಯೂನ್ ಬಾರ್ ಆ್ಯಂಡ್ ರೆಸ್ಟೋರೆಂಟ್ ನಲ್ಲಿ ಅಗ್ನಿ ಸುರಕ್ಷತೆ ಅಳವಡಿಸಿಲ್ಲ ಮತ್ತು ಅಗ್ನಿಶಾಮಕ ದಳದ ಪ್ರಮಾಣ ಪತ್ರ ಪಡೆಯದೆ ಕಾನೂನು ಉಲ್ಲಂಘನೆ ಮಾಡಿದ ಆರೋಪದ ಮೇಲೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನೋಟಿಸ್ ನೀಡಿದೆ.
ಬೆಂಗಳೂರಿನಲ್ಲಿರುವ ಒನ್ 8 ಕಮ್ಯೂನ್ ಬಾರ್ ಆ್ಯಂಡ್ ರೆಸ್ಟೋರೆಂಟ್ನಲ್ಲಿ ಅಗ್ನಿ ಸುರಕ್ಷತೆ ಅಳವಡಿಸಿಲ್ಲ ಮತ್ತು ಅಗ್ನಿಶಾಮಕ ದಳದ ಪ್ರಮಾಣ ಪತ್ರ ಪಡೆಯಲಿಲ್ಲ ಎಂಬ ವಿಚಾರ ಬಿಬಿಎಂಪಿ ಗಮನಕ್ಕೆ ಬರುತ್ತಿದ್ದಂತೆ ಕಳೆದ ಒಂದು ವಾರದ ಹಿಂದೆ ನೋಟಿಸ್ ಕೊಡಲಾಗಿದೆ. ನೋಟಿಸ್ ಗೆ ಅವರಿಂದ ಇದುವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಸೋಮವಾರದೊಳಗೆ ಯಾವುದೇ ಪ್ರತಿಕ್ರಿಯೆ ಬಾರದಿದ್ದರೆ ಮತ್ತೊಂದು ನೋಟಿಸ್ ಕೊಡಲಾಗವುದು. ಅದಕ್ಕೂ ಸ್ಪಂದಿಸದಿದ್ದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಬಿಬಿಎಂಪಿ ಮೂಲಗಳು ತಿಳಿಸಿವೆ.
ಈ ಕುರಿತು ಪ್ರತಿಕ್ರಿಯಿಸಿರುವ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಬಾರ್ ಆ್ಯಂಡ್ ರೆಸ್ಟೋರೆಂಟ್ ಗಳಲ್ಲಿ ಕಾನೂನು ನಿಯಮ ಉಲ್ಲಂಘಿಸಿರುವುದಕ್ಕೆ ನೋಟಿಸ್ ನೀಡುವ ವೇಳೆ ಇದು ಯಾರ ಮಾಲಿಕತ್ವದಲ್ಲಿದೆ ಎಂಬುದನ್ನು ನಾವು ನೋಡುವುದಿಲ್ಲ. ನಮ್ಮ ಖಾತೆಯಲ್ಲಿ ಅಥವಾ ಯಾರ ಹೆಸರಿನಲ್ಲಿ ಪರವಾನಗಿ ನೀಡಲಾಗಿದೆ ಎಂಬುದನ್ನು ನೋಡಿಕೊಂಡು ಆ ಪ್ರಕಾರ ನೋಟಿಸ್ ಕೊಡಲಾಗುತ್ತದೆ.
ಎಂ.ಜಿ. ರಸ್ತೆಯ ಮಹಾತ್ಮಗಾಂಧಿ ಪ್ರತಿಮೆ ಎದುರುಗಡೆ ಕಟ್ಟಡವೊಂದರ ಮೇಲೆ ರೆಸ್ಟೋರೆಂಟ್ ನಡೆಯುತ್ತಿದೆ. ಕಟ್ಟಡದಲ್ಲಿ ನಿಯಮ ಉಲ್ಲಂಘಿಸಿದ್ದಕ್ಕೆ ನೋಟಿಸ್ ಕೊಡಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಅಪೀಲ್ ಗಾಗಿ ನಮ್ಮ ಬಳಿ ಬಂದಿದ್ದಾರೆ. ಆ ಅಪೀಲ್ಗೆ ಸ್ಟೇ ಇದೆ ಎಂದು ತಿಳಿದು ಬಂದಿದೆ. ನಮ್ಮ ಬಳಿ ಅಪೀಲ್ ಇದ್ದರೆ, ಎಲ್ಲರಿಗೂ ಅನ್ವಯವಾಗುವಂತೆ ಅಪೀಲ್ ನಲ್ಲಿ ಆರ್ಡರ್ ಪಾಸ್ ಮಾಡುತ್ತೇವೆ. ಅಪೀಲ್ ವಿಚಾರಣೆ ನಡೆದ ಬಳಿಕ ನಾವು ಅಂತಿಮ ಆದೇಶ ನೀಡಲಾಗುವುದು. ಒಂದು ವೇಳೆ ಅಪೀಲ್ ರದ್ದುಪಡಿಸಿದರೆ ಸಂಬಂಧಿಸಿದ ಕಟ್ಟಡ ಒಡೆಯಲು ಕ್ರಮ ಕೈಗೊಳ್ಳಬೇಕು. ಅಪೀಲ್ ಸ್ವೀಕಾರವಾದರೆ ನಮ್ಮ ಸಿಬ್ಬಂದಿ ಅದರ ಪ್ರಕಾರ ನಡೆದುಕೊಳ್ಳಲಿದ್ದಾರೆ ಎಂದು ತಿಳಿಸಿದರು.
Click