ನ್ಯೂಸ್ ನಾಟೌಟ್: ಭಾರೀ ಭೂಕುಸಿತದಿಂದಾಗಿ ಪ್ರಮುಖ ರಸ್ತೆ ಸಂಪರ್ಕ ಕಡಿದುಕೊಂಡು ಪ್ರಯಾಣಿಸುತ್ತಿದ್ದ ಕನಿಷ್ಠ 300 ಪ್ರಯಾಣಿಕರು ಉತ್ತರಾಖಂಡದ ಪಿಥೋರಗಢ್ ಜಿಲ್ಲೆಯಲ್ಲಿ ಸಿಲುಕಿಕೊಂಡಿರುವುದಾಗಿ ವರದಿ ತಿಳಿಸಿದೆ.
ಪರ್ವತ ಗಾತ್ರದ ಬಂಡೆಯ ಕುಸಿತದಿಂದಾಗಿ ಲಖನ್ಪುರ ಬಳಿಯ ಲಿಪುಲೇಖ್-ತವಾಘಾಟ್ ರಸ್ತೆಯು100 ಮೀಟರ್ಗಳಷ್ಟು ಕುಸಿತಗೊಂಡ ನಂತರ ಪ್ರಯಾಣಿಕರು ಧಾರ್ಚುಲಾ ಹಾಗೂ ಗುಂಜಿ ಎಂಬಲ್ಲಿ ಸಿಲುಕಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಕಾರ್ಯಾಚರಣೆಯ ಬಳಿಕ ಎರಡು ದಿನಗಳ ನಂತರ ರಸ್ತೆ ಸಂಚಾರಕ್ಕೆ ಮುಕ್ತವಾಗುವ ನಿರೀಕ್ಷೆಯಿದೆ. ರಾಜ್ಯದ ಅಲ್ಮೋರಾ, ಬಾಗೇಶ್ವರ್, ಚಮೋಲಿ, ಚಂಪಾವತ್, ಡೆಹ್ರಾಡೂನ್, ಗರ್ವಾಲ್, ಹರಿದ್ವಾರ, ನೈನಿತಾಲ್, ಪಿಥೋರಗಢ, ರುದ್ರಪ್ರಯಾಗ, ತೆಹ್ರಿ ಗರ್ವಾಲ್, ಉಧಮ್ ಸಿಂಗ್ ನಗರ ಹಾಗೂ ಉತ್ತರಕಾಶಿ ಜಿಲ್ಲೆಗಳಲ್ಲಿ ಧೂಳಿನ ಬಿರುಗಾಳಿ ಹಾಗೂ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಎಲ್ಲಾ ಯಾತ್ರಾರ್ಥಿಗಳಿಗೆ ಸುರಕ್ಷಿತ ಸ್ಥಳಗಳಲ್ಲಿ ಇರುವಂತೆ ಪೊಲೀಸರು ಸೂಚಿಸಿದ್ದಾರೆ ಎನ್ನಲಾಗಿದೆ.