ಉಳ್ಳಾಲ: ಉಗ್ರರೊಂದಿಗೆ ಸಂಪರ್ಕ ಹೊಂದಿರುವ ಹಿನ್ನೆಲೆಯಲ್ಲಿ ಮಾಜಿ ಶಾಸಕ ಇದಿನಬ್ಬ ಪುತ್ರ ಬಿ.ಎಂ ಬಾಷಾ ಮನೆಗೆ ಎನ್ಐಎ ದಾಳಿ ನಡೆಸಿ ಆತನ ಪುತ್ರನನ್ನು ಬಂಧಿಸಿತ್ತು. ಈ ಹಿನ್ನೆಲೆಯಲ್ಲಿ ವಿಶ್ವ ಹಿಂದೂ ಪರಿಷತ್, ಭಜರಂಗ ದಳ ಉಳ್ಳಾಲದಲ್ಲಿ ಪ್ರತಿಭಟನೆ ನಡೆಸಿ ಲವ್ ಜಿಹಾದಿ ನಡೆಸಿ ಇಂತಹ ಕೃತ್ಯಕ್ಕೆ ಕೈ ಹಾಕುತ್ತಿರುವ ಶಾಸಕರ ಕುಟುಂಬವನ್ನು ಕೂಡಲೇ ಬಹಿಷ್ಕರಿಸಬೇಕು ಎಂದು ಉಳ್ಳಾಲದಾದ್ಯಂತ ಪ್ರತಿಭಟನೆ ನಡೆಸಿತು. ಈ ವೇಳೆ ಬ್ಯಾನ್ ಟೆರರಿಸಂ ಎಂಬ ಬ್ಯಾನರ್ ಹಿಡಿದು ಜನಜಾಗೃತಿ ಆಂದೋಲನ ನಡೆಸಲಾಯಿತು. ತಲಪಾಡಿ, ಕೋಟೆಕಾರು, ಬೀರಿ, ತೊಕ್ಕೊಟ್ಟು, ಮುಡಿಪು, ನೇತ್ರಾವತಿ ಸೇತುವೆ, ಕಲ್ಲಾಪು, ಕೊಣಾಜೆ ಸಹಿತ ವಿವಿದೆಡೆ ಹಿಂದೂ ಕಾರ್ಯಕರ್ತರು ಜನಜಾಗೃತಿ ಆಂದೋಲನ ಹಮ್ಮಿಕೊಂಡಿದ್ದು, ಬಳಿಕ ವಿಹಿಂಪ ಮುಖಂಡ ಶರಣ್ ಪಂಪ್ವೆಲ್ ನೇತೃತ್ವದಲ್ಲಿ ಎನ್ಐಎ ದಾಳಿ ನಡೆದ ಮಾಸ್ತಿಕಟ್ಟೆಯಲ್ಲಿರುವ ಬಿ.ಎಂ ಬಾಷಾ ಮನೆಗೆ ನುಗ್ಗಲು ಯತ್ನಿಸಿತ್ತು. ಈ ವೇಳೆ ಪೊಲೀಸರು ಪ್ರತಿಭಟನಾ ಕಾರರನ್ನು ತಡೆದರು.