ನ್ಯೂಸ್ ನಾಟೌಟ್: ಉಡುಪಿ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಬಗ್ಗೆ ಗಂಭೀರ ಚಿಂತೆ ವ್ಯಕ್ತಪಡಿಸಿರುವ ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ನೇತೃತ್ವದ ನಿಯೋಗ ಉಡುಪಿ ಶಾಸಕ ಯಶ್ ಪಾಲ್ ಎ. ಸುವರ್ಣ, ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ, ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ನೇತೃತ್ವದ 5 ಮಂದಿ ಶಾಸಕರ ನಿಯೋಗ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಅನ್ನು ಸೋಮವಾರ(ಜೂ.2) ಭೇಟಿ ಮಾಡಿ ಜಿಲ್ಲೆಯಲ್ಲಿ ನಡೆಯುತ್ತಿರುವ ವಿದ್ಯಾಮಾನಗಳ ಕುರಿತು ಮಾತುಕತೆ ನಡೆಸಿದ್ದಾರೆ.
ಇದೇ ವೇಳೆ ಶಾಸಕರು ಕಾನೂನು ಸುವ್ಯವಸ್ಥೆಗೆ ಸಂಬಂಧಿಸಿ ಜಿಲ್ಲಾಡಳಿತ ತೆಗೆದುಕೊಳ್ಳುತ್ತಿರುವ ಕ್ರಮದ ಬಗ್ಗೆ ತೀವ್ರ ಅಸಮಧಾನ ವ್ಯಕ್ತಪಡಿಸಿದರು. ಜಿಲ್ಲೆಯಲ್ಲಿ ಪೊಲೀಸರು ಏಕಪಕ್ಷೀಯವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಇಂತಹ ಕೆಲವು ಕ್ರಮಗಳನ್ನು ಖಂಡಿಸಿದ ಶಾಸಕರು, “ಜಿಲ್ಲೆಯಲ್ಲಿ ರಾತ್ರೋ ರಾತ್ರಿ ಹಿಂದೂ ಮುಖಂಡರ ಮನೆಗಳಿಗೆ ತೆರಳಿ ಅವರನ್ನು ಬಂಧಿಸುತ್ತಿರುವ ಪೊಲೀಸರ ಕ್ರಮವು ಸರಿಯಲ್ಲ. ಹಿಂದೂ ಮುಖಂಡರನ್ನು ಗುರಿಯಾಗಿಸಿ ನಡೆಸುತ್ತಿರುವ ಈ ರೀತಿಯ ದಾಳಿ ಮತ್ತು ಬಂಧನಗಳು ಏಕಪಕ್ಷೀಯವಾಗಿ ಪರಿಣಮಿಸುತ್ತಿದ್ದು, ಸಮಾಜದಲ್ಲಿ ಪ್ರಚೋದನೆ ಉಂಟುಮಾಡುವ ಸಾಧ್ಯತೆ ಇದೆ” ಎಂದು ಶಾಸಕರ ನಿಯೋಗ ಎಸ್ ಪಿ ಯ ಗಮನಕ್ಕೆ ತಂದರು.
ಹಿಂದೂಗಳನ್ನೆ ಗುರಿಯಾಗಿಸುವ “ಈ ಕ್ರಮವು ನ್ಯಾಯಾತೀತವಾಗಿದ್ದು, ಇಂತಹ ಕಾನೂನು ಬಾಹಿರ ಕ್ರಮಗಳನ್ನು ತಕ್ಷಣವೇ ನಿಲ್ಲಿಸಬೇಕು” ಎಂದು ಆಗ್ರಹಿಸಿದರು.
ಇದೆ ವೇಳೆ, ಜಿಲ್ಲೆಯಲ್ಲಿ ಮಟ್ಕಾ ದಂಧೆ, ಜುಗಾರಿ ಇನ್ನಿತರ ಗಂಭಿರ ಕಾನೂನು ಬಾಹಿರ ಚಟುವಟಿಕೆ ಮಿತಿಮೀರಿ ನಡೆಯುತಿದ್ದು ಅವರ ವಿರುದ್ಧವೂ ಅಗತ್ಯ ಕ್ರಮ ಜರಗಿಸುವಂತೆ ಶಾಸಕರ ನಿಯೋಗ ಆಗ್ರಹಿಸಿದೆ.
ಜಿಲ್ಲೆಯಲ್ಲಿ ಶಾಂತಿ, ಸಮಾಧಾನ ಮತ್ತು ಸಾಮಾಜಿಕ ಸಾಮರಸ್ಯ ಕಾಪಾಡುವುದು ಬಹುಮುಖ್ಯವಾದ ವಿಷಯವಾಗಿದ್ದು, ಒಂದು ನಿರ್ದಿಷ್ಟ ಸಮುದಾಯದ ವಿರುದ್ಧದ ಕ್ರಮಗಳು ಸಮಾಜದಲ್ಲಿ ಅಶಾಂತಿಗೆ ಕಾರಣವಾಗಬಹುದು ಎಂಬ ಎಚ್ಚರಿಕೆಯನ್ನು ಶಾಸಕರ ನಿಯೋಗ ಎಸ್ ಪಿ ಗೆ ನೀಡಿದೆ ಎಂದು ವರದಿ ತಿಳಿಸಿದೆ.