ಕರಾವಳಿ

ಉಡುಪಿ: ಲಕ್ಷಾಂತರ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದ ಆರೋಪಿ ಅರೆಸ್ಟ್

189

ನ್ಯೂಸ್ ನಾಟೌಟ್ : ಉದ್ಯಾವರ ಬೊಳ್ಜೆ ನಿವಾಸಿ ಅನಿತಾ ಡಿ. ಸಿಲ್ವಾ ಅವರ ಮನೆಯಲ್ಲಿ ಚಿನ್ನಾಭರಣ ದೋಚಿ ಪರಾರಿಯಾಗಿದ್ದ ಕಳ್ಳನನ್ನು ಕಾಪು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಆರೋಪಿಯಿಂದ ಚಿನ್ನಾಭರಣ, ನಗದು, ಸ್ಕೂಟಿ ಸಹಿತ 8,02,83 ರೂಪಾಯಿ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.ಕಟಪಾಡಿ ಏಣಗುಡ್ಡೆ ಗ್ರಾಮದ ಅಚ್ಚಡ ನಿವಾಸಿ ಜೋನ್ ಪ್ರಜ್ವಲ್ ಫೆರ್ನಾಂಡಿಸ್ (32) ಬಂಧಿತ ಆರೋಪಿ.

ಆ. 17ರಂದು ಉದ್ಯಾವರ ಬೊಳ್ಜೆಯ ಅನಿತಾ ಡಿ. ಸಿಲ್ವಾ ಅವರು ಬೆಳಗ್ಗೆ ಕೆಲಸಕ್ಕೆ ಹೋಗಿದ್ದು ಅವರ ಮಗ ಶಾಲೆಗೆ ತೆರಳಿದ್ದನು. ಮಗಳು ಮಧ್ಯಾಹ್ನ 1 ಗಂಟೆಗೆ ಮನೆಗೆ ಬಾಗಿಲು ಹಾಕಿ ಉಡುಪಿಗೆ ಕಂಪ್ಯೂಟರ್ ಕ್ಲಾಸ್‌ಗೆಂದು ಹೋಗಿದ್ದಳು.ಸಂಜೆ ೫ ಗಂಟೆಗೆ ಮನೆಗೆ ಮರಳಿದ ವೇಳೆ ಮನೆಗೆ ಕಳ್ಳರು ನುಗ್ಗಿರುವ ಘಟನೆ ಬೆಳಕಿಗೆ ಬಂದಿತ್ತು.ಮನೆಯ ಬೆಡ್ ರೂಮ್‌ನ ಕಪಾಟಿನ ಲಾಕರ್‌ನ್ನು ಮುರಿದ ಕಳ್ಳರು ಚಿನ್ನಾಭರಣ ಇಟ್ಟಿದ್ದ ಪೆಟ್ಟಿಗೆಯನ್ನು ಕದ್ದೊಯ್ದಿದ್ದರು. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಆರೋಪಿ ಜೋನ್ ಪ್ರಜ್ವಲ್ ಫೆರ್ನಾಂಡಿಸ್ ಅನಿತಾ ಡಿ. ಸಿಲ್ವ ಅವರ ಸಂಬಂಧಿಕನಾಗಿದ್ದು ಆಗಾಗ್ಗೆ ಮನೆಗೆ ಬಂದು ಹೋಗುತ್ತಿದ್ದ. ಕಳ್ಳತನ ಪ್ರಕರಣದ ತನಿಖೆ ಆರಂಭಿಸಿದ ಪೊಲೀಸರಿಗೆ ಆರೋಪಿ ಜೋನ್ ಮೇಲೆ ಹೆಚ್ಚಿನ ಸಂಶಯ ವ್ಯಕ್ತವಾಗಿತ್ತು. ಆತನನ್ನೇ ಕೆಂದ್ರೀಕರಿಸಿ ತನಿಖೆ ಮುಂದುವರಿಸಿದ ಕಾಪು ಕ್ರೈಂ ಎಸ್ಸೈ ಪುರುಷೋತ್ತಮ್ ಮತ್ತು ಸಿಬ್ಬಂದಿಗಳಾದ ಪ್ರವೀಣ್, ರಾಜೇಶ್ ಮತ್ತು ನಾರಾಯಣ್ ಅವರು ಅಚ್ಚಡ ಕ್ರಾಸ್ ಬಳಿ ಸ್ಕೂಟಿಯನ್ನು ಅಡ್ಡ ಹಾಕಿ ಆರೋಪಿಯನ್ನು ವಶಕ್ಕೆ ತೆಗೆದುಕೊಂಡಿದ್ದರು. ಈ ವೇಳೆ ಆತನಲ್ಲಿ ಹಣ, ಮತ್ತು ಬಂಗಾರ ಅಡವಿಟ್ಟ ಚೀಟಿಗಳು ದೊರಕಿದ್ದವು.

ವೃತ್ತ ನಿರೀಕ್ಷಕ ಕೆ.ಸಿ. ಪೂವಯ್ಯ ನೇತೃತ್ವದಲ್ಲಿ ವಿಚಾರಣೆಗೊಳಪಡಿಸಿದಾಗ ಅನಿತಾ ಅವರ ಮನೆಯಲ್ಲಿ ತಾನೇ ಕಳ್ಳತನ ನಡೆಸಿರುವುದಾಗಿ ಆರೋಪಿ ಬಾಯ್ಬಿಟ್ಟಿದ್ದ. ಆತ ನೀಡಿದ ಮಾಹಿತಿಯ ಮೇರೆಗೆ ವಿವಿಧ ಸಹಕಾರಿ ಸಂಘಗಳು, ಫೈನಾನ್ಸ್‌ಗಳು, ಚಿನ್ನಾಭರಣ ಅಂಗಡಿಗಳಿಗೆ ತೆರಳಿದ ಪೊಲೀಸರು ಚಿನ್ನಾಭರಣಗಳನ್ನು ಸ್ವಾಧೀನಕ್ಕೆ ತೆಗೆದುಕೊಂಡಿದ್ದಾರೆ. ಮದ್ಯ ವ್ಯಸನ, ಸಾಲ ಮತ್ತು ಜೂಜಾಟದ ಸುಳಿಗೆ ಸಿಲುಕಿದ್ದ ಆರೋಪಿ ಚಿನ್ನಾಭರಣಗಳನ್ನು ಮಾರಾಟ ಮಾಡಿದ ಮತ್ತು ಒತ್ತೆಯಿಟ್ಟ ಹಣವನ್ನು ಇಸ್ಪೀಟ್, ಜೂಜಾಟ ಮತ್ತು ಮದ್ಯ ವ್ಯಸನಕ್ಕೆ ಬಳಸಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ವಶಪಡಿಕೊಂಡ ಸೊತ್ತುಗಳ ವಿವರ :

೩೩.೭೨೦ ಗ್ರಾಂ. ತೂಕದ ಚಿನ್ನದ ಕರಿಮಣಿ ಸರ, ೩೦.೦೪೦ ಗ್ರಾಂ. ತೂಕದ ೩ ಚಿನ್ನದ ಬಳೆಗಳು, ೨೪.೨೪೦ ಗ್ರಾಂ. ತೂಕದ ೯ ಚಿನ್ನದ ಉಂಗುರಗಳು, ೨೮.೫೯೦ ಗ್ರಾಂ. ತೂಕದ ೫ ಚಿನ್ನದ ಸರ, ೪.೭೬೦ ಗ್ರಾಂ. ತೂಕದ ೨ ಬ್ರಾಸ್ ಲೈಟ್, ೭.೮೮೦ ಗ್ರಾಂ. ತೂಕದ ೩ ಕಿವಿಯೋಲೆ, ೦.೯೨೦ ಗ್ರಾಂ. ತೂಕದ ೧ ಚಿನ್ನದ ಕ್ರಾಸ್, ನಗದು ೩೬,೩೭೦ ರೂ., ಮೊಬೈಲ್ ಪೋನ್ ಮತ್ತು ಕಪ್ಪು ಬಣ್ಣದ ಡಿಯೋ ಸ್ಕೂಟರ್‌ನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

See also  ಪಾಸು ಮಾಡುವಂತೆ ಕೋರಿ ಟೀಚರ್‌ಗೇ ಲಂಚ ನೀಡಿದ ವಿದ್ಯಾರ್ಥಿ..! ಉತ್ತರ ಪತ್ರಿಕೆಯ ಹಿಂದಿತ್ತು ನೋಟುಗಳ ರಾಶಿ..!

ಉಡುಪಿ ಎಸ್ಪಿ ಅಕ್ಷಯ್ ಎಂ. ಹಾಕೆ, ಹೆಚ್ಚುವರಿ ಎಸ್ಪಿ ಎಸ್. ಟಿ. ಸಿದ್ದಲಿಂಗಪ್ಪ, ಡಿವೈಎಸ್ಪಿ ಅರವಿಂದ ಕಲಗುಜ್ಜಿ, ಕಾಪು ವೃತ್ತ ನಿರೀಕ್ಷಕ ಕೆ.ಸಿ. ಪೂವಯ್ಯ, ನೇತೃತ್ವದಲ್ಲಿ ಕಾಪು ಕ್ರೈಂ ಎಸ್ಸೈ ಪುರುಷೋತ್ತಮ್ ಸಹಕಾರದೊಂದಿಗೆ ಅಪರಾಧ ಪತ್ತೆ ತಂಡದ ಪ್ರವೀಣ ಕುಮಾರ್ ಕಾಪು ವೃತ್ತ, ರಾಜೇಶ್ ಪಡುಬಿದ್ರಿ ಠಾಣೆ, ನಾರಾಯಣ ಕಾಪು ಠಾಣೆ, ಶ್ರೀಧರ್, ಸುಧಾಕರ್ ಮತ್ತು ಚಾಲಕ ಪ್ರಸಾದ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget