ನ್ಯೂಸ್ ನಾಟೌಟ್ : ಯೂಟರ್ನ್ ಮಾಡುವಾಗ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಶಾಲಾ ಮಕ್ಕಳಿದ್ದ ವ್ಯಾನ್ ಪಲ್ಟಿಯಾದ ಘಟನೆ ಬೆಂಗಳೂರಿನ ಬನಶಂಕರಿಯ ದೇವೇಗೌಡ ಪೆಟ್ರೋಲ್ ಬಂಕ್ ಬಳಿ ಇಂದು(ಸೆ.8) ನಡೆದಿದೆ.
ಬೆಳಗ್ಗೆ ಕಾಮಾಕ್ಯ ಕಡೆಯಿಂದ ಪದ್ಮನಾಭ ನಗರದ ಖಾಸಗಿ ಶಾಲೆಗೆ ತೆರಳುತ್ತಿದ್ದ ವ್ಯಾನ್ ಚಾಲಕ ರಸ್ತೆ ಸಿಗ್ನಲ್ ಫ್ರೀ ಇದ್ದುದರಿಂದ ದಿಢೀರ್ ಯೂಟರ್ನ್ ಮಾಡಿದ್ದಾನೆ. ಈ ವೇಳೆ ವ್ಯಾನ್ ಚಕ್ರ ರಸ್ತೆ ವಿಭಜಕದ ಮೇಲೆ ಹತ್ತಿ, ಪಲ್ಟಿಯಾಗಿದೆ. ವ್ಯಾನ್ನಲ್ಲಿ ಹತ್ತಕ್ಕೂ ಹೆಚ್ಚು ಮಕ್ಕಳಿದ್ದರು ಎನ್ನಲಾಗಿದೆ.
ಚಾಲಕ ಹಾಗೂ ಓರ್ವ ಬಾಲಕಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಚಾಲಕ ನಿಧಾನವಾಗಿ ವಾಹನ ಚಲಾಯಿಸುತ್ತಿದ್ದುದರಿಂದ ಅವಘಡ ತಪ್ಪಿದೆ, ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸಾರ್ವಜನಿಕರು ಹಾಗೂ ಬನಶಂಕರಿ ಸಂಚಾರ ಪೊಲೀಸರು ಮಕ್ಕಳನ್ನು ರಕ್ಷಿಸಿ ಶಾಲೆಗೆ ಕಳುಹಿಸಿದ್ದಾರೆ. ಘಟನಾ ಸ್ಥಳದಿಂದ ವ್ಯಾನ್ ಸ್ಥಳಾಂತರಿಸಲಾಗಿದೆ. ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ವರದಿ ತಿಳಿಸಿದೆ.