ನ್ಯೂಸ್ ನಾಟೌಟ್ : ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿದ್ದ ಅತಿದೊಡ್ಡ ಧಾರ್ಮಿಕ ಉತ್ಸವ ಮಹಾಕುಂಭ ಮೇಳಕ್ಕೆ ವಿದ್ಯುಕ್ತ ತೆರೆ ಬಿದ್ದಿದೆ. 45 ದಿನಗಳ ಅವಧಿಯಲ್ಲಿ ಒಟ್ಟು 66 ಕೋಟಿ ಜನರು ತ್ರಿವೇಣಿ ಸಂಗಮದಲ್ಲಿ ಮಿಂದಿದ್ದು ಪುನೀತರಾಗಿದ್ದಾರೆ. ಕಾರ್ಯಕ್ರಮದ ಬೆನ್ನಲ್ಲೇ ಸ್ವಚ್ಛತಾ ಅಭಿಯಾನ ಶುರುವಾಗಿದೆ.
144 ವರ್ಷಗಳಿಗೊಮ್ಮೆ ನಡೆಯುವ ಮಹಾಕುಂಭ ಮೇಳ ಕಳೆದ ಜನವರಿ 13 ರಿಂದ ಶುರವಾಗಿ ನಿನ್ನೆ ಶಿವರಾತ್ರಿ ಪವಿತ್ರ ದಿನದಂದು ಅಂತ್ಯವಾಗಿದೆ. 45 ದಿನಗಳ ಕಾಲ ನಡೆದ ಈ ಮಹಾಕುಂಭ ಮೇಳದಲ್ಲಿ 66 ಕೋಟಿ ಜನರು ಭಾಗಿಯಾಗಿ, ತ್ರಿವೇಣಿ ಸಂಗಮದಲ್ಲಿ ಮಿಂದೆದ್ದಿದ್ದಾರೆ. ನಿನ್ನೆಗೆ ಮಹಾಕುಂಭ ಮೇಳ ಅಂತ್ಯವಾಗಿದ್ದರೂ ಇನ್ನು ಜನಸಾಗರ ಸಂಗಮಕ್ಕೆ ಹರಿದು ಬರುತ್ತಿದ್ದು, ಇನ್ನೂ ಕೆಲ ದಿನಗಳು ಈ ಬೆಳವಣಿಗೆ ನಡೆಯಲಿದೆ.
ಮಹಾ ಕುಂಭಮೇಳ ಅಂತ್ಯವಾದ ಬೆನ್ನಲ್ಲೇ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ. ಅರೈಲ್ ಘಾಟ್ ತಲುಪಿದ ಅವರು ತಾತ್ಕಲಿವಾಗಿ ನಿರ್ಮಾಣ ಮಾಡಿದ್ದ ಟೆಂಟ್ ಸಿಟಿಯ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿದರು.
ಸ್ವಚ್ಛತಾ ಕಾರ್ಯದ ಬಳಿಕ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಹಾ ಕುಂಭಮೇಳದಲ್ಲಿ ಕರ್ತವ್ಯ ನಿರ್ವಹಿಸಿದ ಅಧಿಕಾರಿಗಳು, ಉದ್ಯೋಗಿಗಳು ಮತ್ತು ಸ್ವಯಂ ಸೇವಾ ಸಂಸ್ಥೆಗಳನ್ನು ಸನ್ಮಾನಿಸಿದರು.