ನ್ಯೂಸ್ ನಾಟೌಟ್: ಚಲಿಸುತ್ತಿರುವ ರೈಲಿನಲ್ಲಿ ಪತ್ನಿಯ ಕೈಯಲ್ಲಿದ್ದ ಬ್ಯಾಗ್ ಕಿತ್ತುಕೊಳ್ಳಲು ಬಂದ ದರೋಡೆಕೋರನಿಂದ ತನ್ನ ಪತ್ನಿಯನ್ನು ರಕ್ಷಿಸುವ ಭರದಲ್ಲಿ ಪತಿಯೊರ್ವ ತನ್ನ ಒಂದು ಕೈಯನ್ನೇ ಕಳೆದುಕೊಂಡಿರುವ ಘಟನೆ ಮುಂಬೈಯಲ್ಲಿ ಬುಧವಾರ(ಜೂ.4) ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಪನ್ವೇಲ್ ನಲ್ಲಿ ವೈದ್ಯರಾಗಿರುವ ಯೋಗೇಶ್ ದೇಶ್ಮುಖ್ (50) ಮತ್ತು ಅವರ ಪತ್ನಿ ದೀಪಾಲಿ ದೇಶ್ಮುಖ್ (44) ಇಬ್ಬರೂ ತಮ್ಮ ಮಗಳೊಂದಿಗೆ ಸಂಬಂಧಿಕರ ಮನೆಗೆ ಹೋಗಲು ಬುಧವಾರ ಬೆಳಗಿನ ಜಾವ 3.35 ರ ಸುಮಾರಿಗೆ ಲೋಕಮಾನ್ಯ ತಿಲಕ್ ಟರ್ಮಿನಸ್ (ಕುರ್ಲಾ) ನಿಂದ ನಾಂದೇಡ್ ಎಕ್ಸ್ಪ್ರೆಸ್ ರೈಲನ್ನು ಹತ್ತಿದ್ದಾರೆ, ಈ ವೇಳೆ ಪತ್ನಿ ಮತ್ತು ಮಗಳು ಕೆಳಗಿನ ಸೀಟ್ ನಲ್ಲಿ ಮಲಗಿದ್ದರೆ ಪತಿ ಮೇಲಿನ ಸೀಟ್ ನಲ್ಲಿ ಮಲಗಿದ್ದರು. ರೈಲು ನಿಲ್ದಾಣದಿಂದ ರೈಲು ಹೊರಟು ಸುಮಾರು ಹದಿನೈದು ನಿಮಿಷಗಳು ಆಗುವಷ್ಟರಲ್ಲಿ ಓರ್ವ ಕಳ್ಳ ಇವರ ಬಳಿ ಬಂದು ದೀಪಾಲಿ ಅವರ ಕೈಯಲ್ಲಿದ್ದ ಬ್ಯಾಗ್ ಎಳೆಯಲು ಯತ್ನಿಸಿದ್ದಾನೆ ಆದರೆ ದೀಪಾಲಿ ಮಾತ್ರ ತನ್ನ ಕೈಯಲ್ಲಿದ್ದ ಬ್ಯಾಗ್ ಬಿಡಲಿಲ್ಲ ಈ ವೇಳೆ ಇಬ್ಬರ ನಡುವೆ ಎಳೆದಾಟ ನಡೆದು ಕಳ್ಳ ಮಹಿಳೆಯನ್ನು ಬ್ಯಾಗ್ ಸಮೇತ ಬೋಗಿಯ ಬಾಗಿಲು ತನಕ ಎಳೆದುಕೊಂಡು ಹೋಗಿದ್ದಾನೆ ಆದರೂ ಮಹಿಳೆ ಮಾತ್ರ ಬ್ಯಾಗ್ ಬಿಡಲಿಲ್ಲ.
ಈ ವೇಳೆ ಪತಿ, ಪತ್ನಿಯ ರಕ್ಷಣೆಗೆ ಮುಂದಾಗಿದ್ದಾರೆ ಅಷ್ಟರಲ್ಲೇ ಕಳ್ಳ ಮಹಿಳೆಯ ಕೈಯಲ್ಲಿದ್ದ ಬ್ಯಾಗ್ ಎಳೆದು ರೈಲಿನಿಂದ ಹೊರ ಜಿಗಿದಿದ್ದಾನೆ ಬ್ಯಾಗ್ ಎಳೆಯುವ ಭರದಲ್ಲಿ ಮಹಿಳೆ ಕೂಡ ರೈಲಿನಿಂದ ಹೊರ ಎಸೆಯಲ್ಪಟ್ಟಿದ್ದಾರೆ ಇದನ್ನು ನೋಡಿದ ಪತಿ, ಪತ್ನಿಯನ್ನು ರಕ್ಷಿಸಲು ಹೋಗಿ ರೈಲಿನಿಂದ ಹೊರ ಬಿದ್ದಿದ್ದಾರೆ. ಈ ವೇಳೆ ರೈಲಿನ ಚಕ್ರ ಪತಿಯ ಕೈ ಮೇಲೆ ಹರಿದು ತುಂಡರಿಸಲ್ಪಟ್ಟಿದೆ ಎಂದು ವರದಿ ತಿಳಿಸಿದೆ.
ಮುಂಜಾನೆ ಮೂರು ಗಂಟೆಯ ಬಳಿಕ ನಡೆದ ಘಟನೆಯಾಗಿದ್ದರಿಂದ ಕತ್ತಲು ಕವಿದಿದ್ದು ಜನ ಸಂಚಾರ ಕೂಡ ಇರಲಿಲ್ಲ, ರೈಲಿನಿಂದ ಹೊರಬಿದ್ದ ಪತಿ ಹಾಗೂ ಪತ್ನಿಗೆ ಗಂಭೀರ ಗಾಯಗಳಾಗಿದ್ದು ಆದರೂ ಕೆಲ ದೂರ ಕತ್ತಲಲ್ಲಿ ನಡೆದುಕೊಂಡು ಬಂದಿದ್ದಾರೆ ಈ ವೇಳೆ ಗೂಡ್ಸ್ ವಾಹನ ಚಾಲಕ ಇವರನ್ನು ಗಮನಿಸಿದ್ದಾನೆ ಕೂಡಲೇ ಆತನ ಸಹಾಯದಿಂದ ಯೋಗೇಶ್ ದೇಶ್ಮುಖ್ ಅವರನ್ನು ಆಸ್ಪತ್ರೆಗೆ ಸೇರಿಸಲಾಯಿತು.
ಪತಿ ಪತ್ನಿ ರೈಲಿನಿಂದ ಹೊರ ಬಿದ್ದ ವೇಳೆ ರೈಲಿನಲ್ಲಿ ಮಗಳು ಮಾತ್ರ ಇದ್ದು ಬಳಿಕ ರೈಲು ಅಧಿಕಾರಿಗಳನ್ನು ಸಂಪರ್ಕಿಸಿದರೂ ಸಾಧ್ಯವಾಗಲಿಲ್ಲ ಬಳಿಕ ಕೆಲ ಸಮಯದ ಬಳಿಕ ರೈಲು ಅಧಿಕಾರಿಗಳು ಸಂಪರ್ಕಕ್ಕೆ ಸಿಕ್ಕಿದ್ದು ಇದಾದ ಬಳಿಕ ಅಧಿಕಾರಿಗಳ ಸೂಚನೆ ಮೇರೆಗೆ ಮಗಳನ್ನು ಕಲ್ಯಾಣ್ ಸ್ಟೇಷನ್ ನಲ್ಲಿ ರಕ್ಷಣೆ ಮಾಡಲಾಗಿದೆ.
ಇನ್ನು ಘಟನೆ ಸಂಬಂಧಿಸಿ ರೈಲ್ವೆ ಅಧಿಕಾರಿಗಳು ಘಟನೆಯನ್ನು ದೃಢಪಡಿಸಿದ್ದು, ಆರೋಪಿಯ ಪತ್ತೆಗೆ ಸಿಸಿ ಕ್ಯಾಮೆರಾಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ ಆದಷ್ಟು ಬೇಗ ಆರೋಪಿಯನ್ನು ಪತ್ತೆಹಚ್ಚಲಾಗುತ್ತದೆ ಎಂದು ಹೇಳಿದ್ದಾರೆ.
ಕಾಲ್ತುಳಿತ ಪ್ರಕರಣ: ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ ವಜಾ..! ಗುಪ್ತಚರ ಇಲಾಖೆಯ ಮುಖ್ಯಸ್ಥರೂ ಎತ್ತಂಗಡಿ..!