- ವರದಿ:ದಯಾಮಣಿ ಹೇಮಂತ್
ನ್ಯೂಸ್ ನಾಟೌಟ್ :ಕಬಡ್ಡಿ ಅಭಿಮಾನಿಗಳೇ, ನಿಮಗಿದೋ ಗುಡ್ ನ್ಯೂಸ್! ಕಬಡ್ಡಿಯ ರಸದೌತಣ ನಿಮ್ಮ ಪಾಲಾಗಲಿದೆ.ಇದಕ್ಕಾಗಿ ಶೀಘ್ರದಲ್ಲಿಯೇ ವೇದಿಕೆ ಸಜ್ಜಾಗುತ್ತಿದ್ದು, ಸುಳ್ಯದ ಚೆನ್ನಕೇಶವನ ಮೈದಾನದಲ್ಲಿ ಮಾರ್ಚ್ 29ರಂದು ಅದ್ದೂರಿಯಾಗಿ ನೆರವೇರಲಿದೆ.
ಕ್ರಿಕೆಟ್ ನಂತರ ದೇಶದಲ್ಲಿಯೇ ಅತಿ ಹೆಚ್ಚು ಕ್ರೇಜ್ ಹುಟ್ಟು ಹಾಕಿರುವ ದೇಸಿ ಕ್ರೀಡೆಯೆಂದರೆ ಅದು ಕಬಡ್ಡಿ.ಇದೀಗ ಇಂತಹ ಕ್ರೀಡೆಯನ್ನು ಕಣ್ತುಂಬಿಕೊಳ್ಳುವ ಅವಕಾಶ ಬಂದೊದಗಿದೆ. ಕ್ರೀಡಾಭಿಮಾನಿಗಳಿಗಾಗಿ ಕಬಡ್ಡಿ ಪಂದ್ಯಗಳ ಸಂಭ್ರಮವನ್ನು ನೀಡಲು ದಿನಗಣನೆ ಆರಂಭಗೊಂಡಿದೆ. ಅತೀ ಹೆಚ್ಚು ಪ್ರೇಕ್ಷಕರನ್ನು ಹಾಗೂ ಆಸಕ್ತರನ್ನು ಹುಟ್ಟು ಹಾಕಿರುವ ಕಬಡ್ಡಿಯು ಪ್ರೊ ಮಾದರಿಯಲ್ಲಿ ಸುಳ್ಯದಲ್ಲಿ ದೇಶಿ ಕ್ರೀಡೆಯ ರೋಮಾಂಚನವನ್ನು ಪ್ರೇಕ್ಷಕರಿಗೆ ಉಣಬಡಿಸಲಿದೆ ಅನ್ನೋದೇ ಹೆಮ್ಮೆಯ ವಿಚಾರ.
ಕರ್ನಾಟಕ ರಾಜ್ಯ ಅಮೆಚೂರು ಕಬಡ್ಡಿ ಎಸೋಸಿಯೇಷನ್, ದಕ್ಷಿಣ ಕನ್ನಡ ಜಿಲ್ಲಾ ಅಮೆಚೂರು ಕಬಡ್ಡಿ ಅಸೋಸಿಯೇಷನ್, ಸುಳ್ಯ ತಾಲೂಕು ಕಬಡ್ಡಿ ಅಸೋಸಿಯೇಷನ್ ಇದರ ಸಹಭಾಗಿತ್ವದಲ್ಲಿ ಅಂತರ್ ರಾಜ್ಯ ಮಟ್ಟದ ಎಂಟು ತಂಡಗಳ ಮಾದರಿಯ ಹೊನಲು ಬೆಳಕಿನ ಪುರುಷರ ಪ್ರೊ ಮಾದರಿಯ ಕಬಡ್ಡಿ ಪಂದ್ಯಾಟ ನಡೆಯಲಿದೆ. ಮಾರ್ಚ್ 29 ರಂದು ಸುಳ್ಯದ ಶ್ರೀ ಚೆನ್ನಕೇಶವ ದೇವಸ್ಥಾನದ ಮೈದಾನದಲ್ಲಿ ನಡೆಯುವುದಕ್ಕಾಗಿ ಎಲ್ಲಾ ತಯಾರಿಗಳು ನಡಿತಿವೆ. ಈಗಾಗಲೇ ಇದರ ಪೋಸ್ಟರ್ ಬಿಡುಗಡೆ ಸಮಾರಂಭ ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದೆದುರಿನ ಮೈದಾನದಲ್ಲಿ ನಡೆಯಿತು.
ಸುಳ್ಯ ಕಬಡ್ಡಿ ತಂಡದ ಗೌರವಾಧ್ಯಕ್ಷ ಹಾಗೂ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಸುಳ್ಯ ಇದರ ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ. ಸಿ. ಪೋಸ್ಟರ್ ಬಿಡುಗಡೆಗೊಳಿಸಿದರು. ಗೌರವ ಸಲಹೆಗಾರರಾದ ಡಾ. ಲೀಲಾದರ್ ಡಿ.ವಿ.(ಪ್ರಾಂಶುಪಾಲರು,ಕೆವಿಜಿ ಆಯುರ್ವೇದ ಕಾಲೇಜ್ ಹಾಗೂ ಆಸ್ಪತ್ರೆ), ದೊಡ್ಡಣ್ಣ ಬರೆಮೇಲು, ನಾಗರಾಜ್ ಭಟ್ಕಳ ಹಾಗೂ ಕಾರ್ಯಕ್ರಮದ ಸಂಘಟಕರು ಹಾಜರಿದ್ದರು.