ನ್ಯೂಸ್ ನಾಟೌಟ್: ಜಮ್ಮು-ಕಾಶ್ಮೀರದ ಪಹಲ್ ಗಾಂವ್ ನಲ್ಲಿ ಉಗ್ರರು ನಡೆಸಿದ ಗುಂಡಿನ ದಾಳಿಯನ್ನು ಸ್ವಯಂ ಪ್ರೇರಿತರಾಗಿ ಸುಳ್ಯದ ವರ್ತಕರು ಖಂಡಿಸಿದ್ದಾರೆ. ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸುವ ಮೂಲಕ ವರ್ತಕರು ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ.
ಬುಧವಾರ ನಡೆದ ಪ್ರತಿಭಟನಾ ಸಭೆಯಲ್ಲಿ ಶಾಸಕಿ ಭಾಗೀರಥಿ ಮುರುಳ್ಯ ಸೇರಿದಂತೆ ಹಲವಾರು ನಾಯಕರು ಕೂಡ ಭಾಗವಹಿಸಿದ್ದರು. ಈ ವೇಳೆ ಮಾತನಾಡಿದ ಭಾಗೀರಥಿ ಮುರುಳ್ಯ ಅವರು, ‘ ಉಗ್ರರು ನಡೆಸಿದ ಕೃತ್ಯದಿಂದ ಮನಸ್ಸಿಗೆ ಬಹಳಷ್ಟು ನೋವಾಗಿದೆ. ಇಂತಹ ಘಟನೆಗಳು ಮುಂದೆ ಎಂದಿಗೂ ನಡೆಯಬಾರದು, ನಾವೆಲ್ಲರೂ ಒಗ್ಗಟ್ಟಾಗಿ ನಿಂತುಕೊಳ್ಳಬೇಕು. ಪ್ರಧಾನಿ ನರೇಂದ್ರ ಮೋದಿಯವರಿಗೆ ನಾವೆಲ್ಲರು ಉಗ್ರರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದಕ್ಕೆ ಶಕ್ತಿಯನ್ನು ತುಂಬೋಣ. ಭಯೋತ್ಪಾದಕರ ದಾಳಿಯಲ್ಲಿ ಮೃತಪಟ್ಟ ಕುಟುಂಬದ ಜೊತೆ ನಾವೆಲ್ಲರು ಇದ್ದು ಧೈರ್ಯ ತುಂಬಬೇಕಿದೆ ಎಂದು ತಿಳಿಸಿದರು.
ವರ್ತಕ ಜಿ.ಜಿ. ನಾಯಕ್ ಮಾತನಾಡಿ “ನಿನ್ನೆಯ ಘಟನೆಯಿಂದ ಎಲ್ಲರಿಗೂ ನೋವಾಗಿದೆ. ಭಯೋತ್ಪಾದಕರ ಅಟ್ಟಹಾಸಕ್ಕೆ ಕೇಂದ್ರ ಸರ್ಕಾರ ತಕ್ಕ ಉತ್ತರ ನೀಡಲಿದೆ ಎನ್ನುವ ವಿಶ್ವಾಸವಿದೆ ಎಂದು ತಿಳಿಸಿದರು. ಉದ್ಯಮಿ ರಾಜೇಶ್ ಶೆಟ್ಟಿ ಮೇನಾಲ ಮಾತನಾಡಿ “
ಧರ್ಮ ಒಡೆಯುವ ಕೆಲಸ ನಿರಂತರವಾಗಿ ಕೆಲವರು ಮಾಡುತ್ತಾ ಬಂದಿದ್ದಾರೆ. ಇಂತಹ ಕೆಲಸಕ್ಕೆ ನಾವು ಅವಕಾಶವನ್ನು ನೀಡಬಾರದು. ದೇಶದಲ್ಲಿ ಅಶಾಂತಿ ಯನ್ನು ತರುವವರಿಗೆ ನಮ್ಮ ದೈವ ದೇವರು ಉತ್ತರ ಕೊಡುತ್ತಾರೆ” ಎಂದರು. ನಗರ ಪಂಚಾಯತ್ ಮಾಜಿ ಅದ್ಯಕ್ಷ ಹಾಲಿ ಸದಸ್ಯ ವಿನಯ ಕುಮಾರ್ ಕಂದಡ್ಕ ಮಾತನಾಡಿ ಹಿಂದೂ ಸಮಾಜ ಈಗಲೂ ಎಚ್ಚೆತ್ತುಕೊಳ್ಳದಿದ್ದರೆ ಮುಂದೆ ಭಾರೀ ಅನಾಹುತ ಸಂಭವಿಸಬಹುದು. ಈ ವಿಚಾರದಲ್ಲಿ ಅನಂತ್ ಕುಮಾರ್ ಹೆಗ್ಡೆಯವರು ಹೇಳಿದ ಮಾತು ನಿಜವಾಗಿಯೂ ಸತ್ಯ ಎಂದು ತಿಳಿಸಿದರು. ಬಿಜೆಪಿ ಮಂಡಲ ಸಮಿತಿ ಕೋಶಾಧಿಕಾರಿ ಸುಭೋದ್ ಶೆಟ್ಟಿ ಮೇನಾಲ ಮಾತನಾಡಿ ‘ಪ್ರವಾಸಿಗರ ಭಯೋತ್ಪಾದಕ ಕೃತ್ಯವನ್ನು ಖಂಡಿಸುತ್ತೇವೆ ಎಂದು ತಮ್ಮ ಅಸಮಾಧಾನವನ್ನು ಹೊರ ಹಾಕಿದರು.
ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ಎ ನೀರಬಿದಿರೆ, ಡಾ.ಮನೋಜ್ ಅಡ್ಡಂತಡ್ಕ, ಹರೀಶ್ ಕಂಜಿಪಿಲಿ, ಸುಧಾಕರ ಕುರುಂಜಿಭಾಗ್, ದಯಾನಂದ ಕೇರ್ಪಳ, ಕರುಣಾಕರ ಹಾಸ್ಪಾರೆ, ದಾಮೋದರ ಮಂಚಿ, ಮಧು ಕೊಡಿಯಾಲಬೈಲು, ಜಗದೀಶ್ ಸರಳಿಕುಂಜ,ಮಧುಸೂದನ್ ಜಯನಗರ, ಹೇಮಂತ್ ಕಂದಡ್ಕ, ದಿನೇಶ್ ಶಾಂತಿಮಜಲು, ದೇವರಾಜ್ ಕುದ್ಪಾಜೆ, ವೆಂಕಟ್ರಮಣ ಮುಳ್ಯ, ಶಿವರಾಮ ಕೇರ್ಪಳ, ಅಶೋಕ್ ಪ್ರಭು, ಪೂಜಿತಾ ಕೆ.ಯು, ಸುಶೀಲ ಕಲ್ಲುಮುಟ್ಲು, ಚಂದ್ರಶೇಖರ ಅಡ್ಪಂಗಾಯ, ಹೇಮಂತ್ ಮಠ, ಪ್ರಬೋದ್ ಶೆಟ್ಟಿ ಮೇನಾಲ, ಸುಧಾಕರ ಕಾಮತ್ ಅಡ್ಕಾರು, ಕೇಶವ ನಾಯಕ್, ದೇವರಾಜ ಕುದ್ಪಾಜೆ ನಾರಾಯಣ ಶಾಂತಿನಗರ, ವಸಂತ ಕಿರಿಭಾಗ, ಗಿರೀಶ್ ಡಿ.ಎಸ್., ಚಿದಾನಂದ ಕುದ್ಪಾಜೆ, ಸುಳ್ಯ ನಗರದ ವರ್ತಕರು, ರಿಕ್ಷಾ ಚಾಲಕರು ಪ್ರತಿಭಟನಾ ಸಭೆಯಲ್ಲಿ ಪಾಲ್ಗೊಂಡಿದ್ದರು.