ನ್ಯೂಸ್ ನಾಟೌಟ್ :ಸುಳ್ಯದ ನೆಹರು ಮೆಮೋರಿಯಲ್ ಪ.ಪೂ ಕಾಲೇಜಿನಲ್ಲಿ ಪ್ರಸ್ತುತ ಶೈಕ್ಷಣಿಕ ವರ್ಷಕ್ಕೆ ದಾಖಲಾದ ವಿದ್ಯಾರ್ಥಿಗಳಿಗೆ ಸ್ವಾಗತ ಮತ್ತು ಓರಿಯಂಟೇಶನ್ ಕಾರ್ಯಕ್ರಮ ಜೂನ್ 2ರಂದು ಕಾಲೇಜಿನಲ್ಲಿ ನಡೆಯಿತು.
ಸಮಾರoಭದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಚಾರ್ಯರಾದ ಮಿಥಾಲಿ ಪಿ ರೈ ಮಾತನಾಡಿ, ಶಿಕ್ಷಣ ಅಮೂಲ್ಯ ಸಂಪತ್ತು ಇದನ್ನು ಮನಗಂಡು ಸ್ಥಾಪಕಾಧ್ಯಕ್ಷರಾದ ಕೆ.ವಿ.ಜಿಯವರು ಶಿಕ್ಷಣಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸಿದರು. ವಿದ್ಯಾರ್ಥಿಗಳು ಅನುಸರಿಸಬೇಕಾದ ನೀತಿ -ನಿಯಮಗಳ ಕುರಿತು ತಿಳಿಸಿದರು .
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಸಂಸ್ಥೆಯ ಆಡಳಿತಾಧಿಕಾರಿ ಚಂದ್ರಶೇಖರ ಪೇರಾಲು, ದೀಪ ಪ್ರಜ್ವಲನೆ ಮಾಡಿದರು. ‘ವಿದ್ಯಾರ್ಥಿಗಳಲ್ಲಿ ಯಶಸ್ಸಿಗೆ ಬೇಕಾದ ಸ್ಪಷ್ಟ ಗುರಿ ಇದ್ದಲ್ಲಿ ಯಶಸ್ಸು ಸಾಧ್ಯ. ಹಾಗಾಗಿ ಕಲಿಯುವ ಹಂಬಲ,ಆತ್ಮವಿಶ್ವಾಸ ಜೊತೆಗಿರಬೇಕು.ಹೆತ್ತವರು,ಉಪನ್ಯಾಸಕರು ವಿದ್ಯಾರ್ಥಿಗಳ ಕಲಿಕೆ, ಪ್ರತಿಭೆ, ಸ್ವಯಂ ಶಿಸ್ತಿಗೆ ಮಾರ್ಗದರ್ಶನ, ಬೆಂಬಲ ನೀಡಬೇಕು. ಎಲ್ಲಾ ವಿದ್ಯಾರ್ಥಿಗಳು ಜ್ಞಾನದ ಸದುಪಯೋಗಪಡೆದುಕೊಳ್ಳಿ’ ಎಂದು ಚಂದ್ರಶೇಖರ ಪೇರಾಲು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕರ ಹೆಸರು, ಬೋಧಿಸುವ ವಿಷಯಗಳ ಕುರಿತು ವಿದ್ಯಾರ್ಥಿಗಳಿಗೆ ಪರಿಚಯಿಸಲಾಯಿತು.
ವಿದ್ಯಾರ್ಥಿನಿಯರಾದ ಶರಣ್ಯ ಮತ್ತು ಬಳಗದವರು ಪ್ರಾರ್ಥನೆ ಹಾಡಿದರು. ಅರ್ಥ ಶಾಸ್ತ್ರ ಉಪನ್ಯಾಸಕ ವಿನಯ್ ನಿಡ್ಯಮಲೆ ಸ್ವಾಗತಿಸಿ, ಕನ್ನಡ ಉಪನ್ಯಾಸಕಿ,ವಿದ್ಯಾರ್ಥಿ ಕ್ಷೇಮಾಧಿಕಾರಿ ಬೇಬಿ ವಿದ್ಯಾ ಪಿ ಬಿ ಕಾರ್ಯಕ್ರಮ ನಿರೂಪಿಸಿದರು. ಹಿಂದಿ ಉಪನ್ಯಾಸಕಿ ರಾಜೇಶ್ವರಿ ಎ ವಂದಿಸಿದರು. ಈ ವೇಳೆ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಹೆತ್ತವರು, ವಿದ್ಯಾರ್ಥಿಗಳು, ಉಪನ್ಯಾಸಕರು, ಬೋಧಕೇತರ ವೃಂದದವರು ಉಪಸ್ಥಿತರಿದ್ದರು.
ಚಾರ್ಮಾಡಿ ಘಾಟಿಯಲ್ಲಿ ಪಿಕಪ್ ವಾಹನ ಪಲ್ಟಿ..! ಚಿಕ್ಕಮಗಳೂರಿನಿಂದ ಮಂಗಳೂರಿಗೆ ತರಕಾರಿ ತರುತ್ತಿದ್ದ ವೇಳೆ ಘಟನೆ..!