ನ್ಯೂಸ್ ನಾಟೌಟ್: ವಿದ್ಯಾರ್ಥಿಗಳ ಬದುಕಿನ ಯಶಸ್ಸಿಗೆ ಪದವಿ ಶಿಕ್ಷಣ ಅಮೂಲ್ಯವಾದುದು. ಜತೆಗೆ ವಿದ್ಯಾರ್ಥಿಗಳಲ್ಲಿ ನೈಜ ಪರಿಸರ ಕಾಳಜಿ ನಿರಂತರವಾಗಿರಬೇಕು. ಜೀವನದಲ್ಲಿ ತಾನು ಏನಾಗಬೇಕು ಎಂಬ ನಿರ್ಧಾರ ಮಾಡಿಕೊಂಡು, ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಪೋಷಕರು, ಗುರುಗಳು ಹೆಮ್ಮೆಪಡುವ ಸಾಧನೆಗಳನ್ನು ಮಾಡಬೇಕು ಎಂದು ಕಾಣಿಯೂರು ಸರಕಾರಿ ಪದವಿ ಪೂರ್ವ ಕಾಲೇಜಿನ ಜೀವ ವಿಜ್ಞಾನ ಉಪನ್ಯಾಸಕಿ ಡಾ. ಸಂಧ್ಯಾ ಕೆ. ಅಭಿಪ್ರಾಯಪಟ್ಟರು.
ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ನೇಚರ್ ಕ್ಲಬ್ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಮತ್ತು 2024-25ನೇ ಸಾಲಿನ ವಾರ್ಷಿಕ ಚಟುವಟಿಕೆಗಳ ಸಮಾರೋಪ ಸಮಾರಂಭ ಪ್ರಯುಕ್ತ ಜೂನ್ 5 ರಂದು ಕಾಲೇಜಿನಲ್ಲಿ ಆಯೋಜಿಸಿದ ವಿಶೇಷ ಉಪನ್ಯಾಸದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಗೌರವ ಅತಿಥಿಗಳಾದ ನೆಹರೂ ಮೆಮೋರಿಯಲ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಮಿತಾಲಿ ಪಿ. ರೈ ಮಾತನಾಡಿ, ಎಲ್ಲಾ ವಿದ್ಯಾರ್ಥಿಗಳು ಶ್ರದ್ಧೆಯಿಂದ ನೇಚರ್ ಕ್ಲಬ್ ಕಾರ್ಯಕ್ರಮಗಳಲ್ಲಿ ಶಿಸ್ತು ಬದ್ಧತೆಯಿಂದ ಭಾಗವಹಿಸುತ್ತಿರುವುದು ಸಂತಸದ ವಿಚಾರ. ಇಲ್ಲಿ ಗಳಿಸಿದ ಅನುಭವ ನಾಳೆಯ ನಿಮ್ಮ ಹೊಸ ಬದುಕಿನ ದಿನಗಳ ಯಶಸ್ಸಿಗೆ ಪ್ರೇರಣೆಯಾಗಲಿ ಎಂದು ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ. ರುದ್ರಕುಮಾರ್ ಎಂ.ಎಂ ವಹಿಸಿದ್ದರು. ನೇಚರ್ ಕ್ಲಬ್ ಸಂಯೋಜಕ ಮತ್ತು ಸಸ್ಯಶಾಸ್ತ್ರ ವಿಭಾಗ ಮುಖ್ಯಸ್ಥ ಕುಲದೀಪ್ ಪೆಲ್ತಡ್ಕ ಪ್ರಾಸ್ತಾವಿಕ ಮಾತನಾಡಿದರು. ಕ್ಲಬ್ ಕಾರ್ಯದರ್ಶಿ ಶಿಲ್ಪಾ ವಾರ್ಷಿಕ ವರದಿ ವಾಚಿಸಿದರು. ಕೋಶಾಧಿಕಾರಿ ಶಶಾಂಕ್ ವಾರ್ಷಿಕ ಲೆಕ್ಕಪತ್ರ ಮಂಡಿಸಿ ಉಳಿಕೆಯನ್ನು ಕಿರಿಯ ವಿದ್ಯಾರ್ಥಿಗಳಿಗೆ ಹಸ್ತಾಂತರಿಸಿದರು. ಅಭಿಜ್ಞಾ, ಪ್ರಾರ್ಥನಾ ಮತ್ತು ಅರ್ಪಿತಾ ಪ್ರಾರ್ಥಿಸಿ, ನೇಚರ್ ಕ್ಲಬ್ ಪದಾಧಿಕಾರಿಗಳಾದ ಕಾರ್ತಿಕ್ ಸ್ವಾಗತಿಸಿ, ತನುಶ್ ವಂದಿಸಿದರು. ಮನಸ್ವೀ ಅತಿಥಿಗಳನ್ನು ಪರಿಚಯಿಸಿ, ಅಕ್ಷತ ಕಾರ್ಯಕ್ರಮ ನಿರೂಪಿಸಿದರು.
ಕಾಲೇಜು ವಠಾರದಲ್ಲಿ ಔಷಧಿ ಗಿಡ ನಾಟಿ
ಕಾಲೇಜಿನ ಮುಂಭಾಗದಲ್ಲಿ ಪುಟಾಣಿ ಜೈಷ್ಣವಿ ಮತ್ತು ಅತಿಥಿಗಳು ಔಷಧೀಯ ಸಸ್ಯ ಸೀತಾ ಅಶೋಕ ಗಿಡವನ್ನು ನೆಟ್ಟು ಪರಿಸರ ದಿನದ ಕಾರ್ಯಕ್ರಮ ಆರಂಭಿಸಲಾಯಿತು. ಸಮಾರೋಪ ಸಮಾರಂಭದಲ್ಲಿ ನೇಚರ್ ಕ್ಲಬ್ ಹಮ್ಮಿಕೊಂಡಿದ್ದ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಜೀವವಿಜ್ಞಾನ ಪದವಿ ವಿದ್ಯಾರ್ಥಿಗಳು ನೇಚರ್ ಕ್ಲಬ್ ಒದಗಿಸಿದ ಅವಕಾಶಗಳನ್ನು ಮತ್ತು ಅನುಭವಗಳನ್ನು ಹಂಚಿಕೊಂಡರು. ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಉಪನ್ಯಾಸಕರಾದ ಕೃತಿಕಾ, ಪಲ್ಲವಿ, ಅಶ್ವಿತಾ ಮತ್ತು ರಕ್ಷಿತ್ ಹಾಗೂ ಸಿಬ್ಬಂದಿ ಶಿವಾನಂದ, ಪವನ್, ಜಯಂತಿ, ಭವ್ಯ ಮತ್ತು ಗೀತಾ ಹಾಗೂ ಎಲ್ಲಾ ವಿದ್ಯಾರ್ಥಿಗಳು ಸಹಕರಿಸಿದರು.