ನ್ಯೂಸ್ ನಾಟೌಟ್: ಸುಳ್ಯದಲ್ಲಿ ಕಸದ್ದೇ ದೊಡ್ಡ ಸಮಸ್ಯೆ, ಆಗಾಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪರಸ್ಪರ ಆರೋಪ ಪ್ರತ್ಯಾರೋಪಗಳು ಹಲವು ಸಲ ನಡೆದಿದೆ. ಹೀಗಿದ್ದರೂ ಸುಳ್ಯದ ಕಸದ ಸಮಸ್ಯೆಗೆ ಇನ್ನೂ ಮುಕ್ತಿ ಸಿಕ್ಕಿಲ್ಲ.ಸುಳ್ಯದಿಂದ ಪೆರಾಜೆಯ ಕಲ್ಚರ್ಪೆ ಬಳಿ ಕಸವನ್ನು ಎಸೆಯಲಾಗುತ್ತಿದೆ. ಅಲ್ಲಿನ ಜನ ನಿರಂತರವಾಗಿ ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ. ಕಸವನ್ನು ಹಾಕುವುದಕ್ಕೆ ವಿರೋಧಿಸುತ್ತಿದ್ದಾರೆ. ಈ ನಡುವೆ ಕಸದ ಸಮಸ್ಯೆಯನ್ನು ಶಾಶ್ವತವಾಗಿ ಬಗೆಹರಿಸಬೇಕು ಅನ್ನುವ ಕೂಗು ಕೇಳಿ ಬಂದಿದ್ದು ಇದೀಗ ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಸ್ವತಃ ಮುತುವರ್ಜಿ ವಹಿಸಿದ್ದು ಜನರಲ್ಲಿ ಭರವಸೆ ಮೂಡಿಸಿದೆ.
ದಿನೇಶ್ ಗುಂಡೂರಾವ್ ಹೇಳಿದ್ದೇನು..?
ಜೂ.18ರಂದು ದಿನೇಶ್ ಗುಂಡೂರಾವ್ ಅವರು ಸುಳ್ಯದ ನಗರ ಪಂಚಾಯತ್ ಗೆ ಭೇಟಿ ನೀಡಿದರು. ಈ ವೇಳೆ ಮಾತನಾಡಿದ ಅವರು,’ ಕಸದ ಸಮಸ್ಯೆ ಸುಳ್ಯದ ಜನರನ್ನು ಕಾಡುತ್ತಿದೆ. ಇದಕ್ಕೆ ಶಾಶ್ವತ ಪರಿಹಾರ ಅಗತ್ಯ. ಕಂದಾಯ ಇಲಾಖೆಯ ಜೊತೆಗೂಡಿ ನಗರ ಪಂಚಾಯತ್ ಅಧಿಕಾರಿಗಳು, ಆಡಳಿತ ವರ್ಗ ಸೂಕ್ತ ಜಾಗವನ್ನು ಹುಡುಕಬೇಕು’ ಎಂದು ತಿಳಿಸಿದರು. ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ನಿರಬಿದಿರೆ, ಉಪಾಧ್ಯಕ್ಷ ಬುದ್ಧ ನಾಯಕ್, ಮುಖ್ಯ ಅಧಿಕಾರಿ ಸುಧಾಕರ್ ಸೇರಿದಂತೆ ಅನೇಕರು ಹಾಜರಿದ್ದರು.