ನ್ಯೂಸ್ ನಾಟೌಟ್: ಸಿಂಪಲ್ ವ್ಯಕ್ತಿತ್ವಕ್ಕೆ ಮತ್ತೊಂದು ಹೆಸರಿದ್ದರೆ ಅದು ಸುಳ್ಯದ ಶಾಸಕಿ ಭಾಗೀರಥಿ ಮುರುಳ್ಯ . ಹಿರಿಯರಿರಲಿ ಕಿರಿಯರಿರಲಿ ಎಲ್ಲರಲ್ಲೂ ಒಂದಾಗುವ ಮನಸ್ಸು ಅವರದ್ದು.
ಬಡತನದಲ್ಲಿ ಹುಟ್ಟಿ ಬೆಳೆದು ಹಿಂದುಳಿದ ವರ್ಗಗಳ ಧ್ವನಿಯಾಗಿ ರಾಜಕಾರಣದಲ್ಲಿ ಪಕ್ಷ ಕೊಟ್ಟ ಜನರ ತೀರ್ಪಿನ ಸ್ಥಾನವನ್ನು ಅಲಂಕರಿಸಿದವರು. ಇತ್ತೀಚೆಗೆ ವಿಧಾನ ಸಭೆಯಲ್ಲಿಯೂ ಮಾತನಾಡಿದ್ದರು. ಕರಾವಳಿಯ ಸಮಸ್ಯೆಗಳಿಗೆ ಧ್ವನಿಯಾಗಿದ್ದರು. ಇದೀಗ ಶಾಸಕರು ಪುಟ್ಟ ಮಗುವಿನ ಬೇಡಿಕೆಯನ್ನು ಈಡೇರಿಸಿ ಸುದ್ದಿಯಾಗಿದ್ದಾರೆ.
ಏನಿದು ಸಮಾಚಾರ..?
ಕಳೆದ ಕೆಲವು ತಿಂಗಳಿನಿಂದ ಬೆಳ್ಳಾರೆ-ನಿಂತಿಕಲ್ಲು ರಸ್ತೆ ರಿಪೇರಿ ಆಗದೆ ಜನ ಬಹಳ ಕಷ್ಟ ಪಡುತ್ತಿದ್ದರು. ಅನಾರೋಗ್ಯ ಪೀಡಿತರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವುದು, ವೃದ್ದರು, ಮಹಿಳೆಯರು, ಶಾಲಾ ಮಕ್ಕಳು ದಿನನಿತ್ಯ ಇದೇ ರಸ್ತೆಯಲ್ಲಿ ಕಷ್ಟಪಡುವಂತಾಗಿತ್ತು. ಇಂತಹ ಸಂದರ್ಭದಲ್ಲಿ ಕಡಬ ತಾಲೂಕಿನ ಎಣ್ಮೂರು ಗ್ರಾಮದ ಗುಂಡಿಮಜಲಿನ ಶಿವನಿಲಯದ ಬಾಲಕಿ ಮೇಖಲಾ. ಕೆ ಇತ್ತೀಚೆಗೆ ಶಾಸಕರ ಮನೆಗೆ ಹೋದಾಗ ರಸ್ತೆ ಸಮಸ್ಯೆಯನ್ನು ಸರಿಪಡಿಸಿಕೊಡುವಂತೆ ಮನವಿ ಮಾಡಿದ್ದರು. ಇದಾದ ಕೆಲವೇ ದಿನಗಳಲ್ಲಿ ಇದೀಗ ರಸ್ತೆ ರಿಪೇರಿ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಭಾಗೀರಥಿ ಮುರುಳ್ಯ ಹಾಗೂ ಸಂಸದ ಬ್ರಿಜೇಶ್ ಚೌಟ ಅವರಿಗೆ ಧನ್ಯವಾದಗಳನ್ನು ಬ್ಯಾನರ್ ಮೂಲಕ ಬಾಲಕಿ ಅರ್ಪಿಸಿದ್ದಾಳೆ. ಈ ಬ್ಯಾನರ್ ಇದೀಗ ಎಲ್ಲರ ಗಮನ ಸೆಳೆಯುತ್ತಿದೆ. ಪುಟ್ಟ ಹುಡುಗಿಯ ಮನವಿಗೆ ತಕ್ಷಣ ಸ್ಪಂದಿಸಿದ ಶಾಸಕರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಶ್ರೀನಂದನ್ ಅವರು ಪೋಸ್ಟ್ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ.