ನ್ಯೂಸ್ ನಾಟೌಟ್ : ತಂದೆ ( ಪಿತೃ) ಸ್ಥಾನದಲ್ಲಿರಿಸಿ ಗೌರವಿಸುವ ನನಗೆ ಪೂಜ್ಯ ಡಾ. ಕುರುಂಜಿ ವೆಂಕಟರಮಣ ಗೌಡರ ವ್ಯಕ್ತಿತ್ವವನ್ನು ನಾನು ಕಂಡಂತೆ ಎಂದು ವ್ಯಕ್ತಪಡಿಸುವ ಅವಕಾಶ ನನಗೆ ದೊರೆತದಕ್ಕೆ ಧನ್ಯತಾಭಾವ ನನ್ನಲ್ಲಿದೆ. ಅವರ ವಿದ್ಯಾ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ನನ್ನನ್ನು ಅವರು ಮನೆ ಮಗಳoತೆ ಮಮತೆಯಿಂದ ಕಂಡಿರುವುದರಿಂದ ನಾನು ಅವರಿಗೆ ಹೃದಯಪೂರ್ವಕ ಗೌರವ ಹಾಗೂ ಕೃತಜ್ಞತೆಯನ್ನು ಅರ್ಪಿಸುವ ನನ್ನ ಈ ಪುಟ್ಟ ಪ್ರಯತ್ನ..
ಅವರು ಸ್ಥಾಪಿಸಿದ ವೈದ್ಯಕೀಯ ವಿದ್ಯಾಲಯದಲ್ಲಿ ನಾನು 20 ವರ್ಷಗಳಿಂದ ಕೆಲಸ ನಿರ್ವಹಿಸುತ್ತಿದದ್ದೇನೆ .ಶ್ರೀ ಕುರುಂಜಿಯವರ ನನ್ನ ಮೊದಲ ಭೇಟಿ ಅವಿಸ್ಮರಣೀಯ.ಯಾವುದೇ ಸಾಧನೆ ಮಾಡದ ಮಹಾನ್ ವ್ಯಕ್ತಿಗಳ ತಮ್ಮ ಅಧಿಕಾರದ,ನಡವಳಿಕೆಯನ್ನು ಕಂಡ ನಾನು, ಮೊದಲ ಬಾರಿ 19– 1–2004 ರoದು ಡಾ. ಕುರುಂಜಿಯವರನ್ನು ಕಂಡು ಮಾತನಾಡಿಸಿದಾಗ ಸಾಮಾನ್ಯ ಜನರನ್ನು ನಾಚಿಸುವ ಅವರ ಸರಳತೆ, ಆತ್ಮೀಯತೆ , ಶಾಂತ ಸ್ವಭಾವ , ಒಳ್ಳೆಯ ಸಂಸ್ಕಾರ, ಕಾರ್ಯ ದಕ್ಷತೆ ಹಾಗೂ ದೂರದೃಷ್ಟಿ ,ಆಡಳಿತ ವೈಖರಿಯನ್ನು ಕಂಡು ಬೆರಗಾದೆ..!26 ಡಿಸೆಂಬರ್ 2003 ರಂದು ತಮ್ಮ 75ನೆ ಹುಟ್ಟುಹಬ್ಬವನ್ನು ಪೂರೈಸಿ ಆಗ ತಾನೇ 76 ರ ಹರೆಯಕ್ಕೆ ಕಾಲಿಡುತ್ತಿದ್ದ ಅವರು 2002 ರಲ್ಲಿ ತಾವು ಸ್ಥಾಪಿಸಿದ ವೈದ್ಯಕೀಯ ವಿದ್ಯಾಲಯದ ಬೆಳವಣಿಗೆಗೆ ತನ್ನ ಜವಾಬ್ದಾರಿಯನ್ನು ನಿರ್ವಹಿಸುತ್ತಾ, ತಮ್ಮ ಮಗ ಡಾ. ಚಿದಾನಂದರೊoದಿಗೆ ವಿದ್ಯಾಲಯದ ಅವಶ್ಯಕತೆಗಳಿಗೆ ಬೇಕಾದ ಉಪಕರಣ ಖರೀದಿಸುವ ಹಾಗೂ ಕಟ್ಟಡ ಕಾಮಗಾರಿಗಳ ವಿಷಯ ಚರ್ಚಿಸುತ್ತಿದ್ದರು.ಅವರು ನನ್ನನ್ನು ಮತ್ತು ನನ್ನ ಪತಿಯವರನ್ನು ಕಂಡು ತಕ್ಷಣ ಮುಗುಳ್ನಗುತ್ತಾ ,ಆತ್ಮೀಯರಂತೆ ಗೌರವದಿಂದ,ಹೃತ್ಪೂರ್ವಕವಾಗಿ ಬರಮಾಡಿಕೊಂಡರು .ಅವರ ಆತ್ಮೀಯ, ಸರಳ (Down to earth) ವ್ಯಕ್ತಿತ್ವವನ್ನು ಕಂಡು ಅವರ ವಿದ್ಯಾಲಯವನ್ನು ಸೇರುವ ನಮ್ಮ ನಿರ್ಧಾರ ಸೂಕ್ತ ಎಂದು ಭಾವಿಸಿದೆವು. ನಾವು ಅವರ ಮಗ ಡಾ. ಚಿದಾನಂದರ ಗುರುಗಳು ಎಂದು ತಿಳಿದಾಗ ಕೆ. ವಿ ಜಿ ಯವರಿಗೆ ಬಹಳ ಸಂತೋಷ ವಾಯಿತು.
ಈ ಚಿಕ್ಕದಾದ ಗ್ರಾಮೀಣ ಪ್ರದೇಶ. ಸುಳ್ಯವನ್ನು ಪ್ರಪಂಚದ ಭೂಪಟದಲ್ಲಿ ಮೂಡಿ ಬರುವಂತೆ ಮಾಡಿದ ಶಿಕ್ಷಣಬ್ರಹ್ಮ, ದೀಪ ತಾನು ಉರಿದು ಬೇರೆಯವರಿಗೆ ಬೆಳಕು ಕೊಟ್ಟoತೆ , ಪರಿಶ್ರಮದ ದುಡಿಮೆ ಹಾಗೂ ತನು ಮನ ಧನದಿಂದ ನಿಸ್ವಾರ್ಥ ಸೇವೆ ಯನ್ನು ಸಲ್ಲಿಸಿ ಸುಳ್ಯದ ” ಅಮರ ಶಿಲ್ಪಿ ” ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಕುರುಂಜಿಯವರು ಎಲ್ಲರಿಗೂ ಆದರ್ಶ ವ್ಯಕ್ತಿ.
ಕೆಲವು ದಿನಗಳ ನಂತರ ಒಂದು ಸಾಯಂಕಾಲ ಅವರು ವಿದ್ಯಾಲಯದ ಮುಂಭಾಗದಲ್ಲಿ ತಮ್ಮ ವಾಹನದಿಂದ ಇಳಿಯುವಾಗ ನಮ್ಮನ್ನು ಕಂಡು ನುಡಿದ ಮಾತುಗಳು ಇನ್ನೂ ನನ್ನ ಕಿವಿಯಲ್ಲಿ ಗುಣುಗುತ್ತಿವೆ. ” ನಾನು ನಿಮ್ಮೊಡನೆ ಮಾತನಾಡಬೇಕೆಂದು ಯೋಚಿಸುತ್ತಿದ್ದೆ . ನೀವು ದಂಪತಿ ಒಟ್ಟಿಗೆ ಸಿಕ್ಕಿದ್ದು ಒಳ್ಳೆಯದೇ ಆಯಿತು ಎಂದು ನಮ್ಮ ಯೋಗ ಕ್ಷೇಮ ವಿಚಾರಿಸಿದರು. ವಿದ್ಯಾಲಯದ ಕೆಲಸ, ಪ್ರಗತಿಯ ವಿಷಯ ಎಲ್ಲವನ್ನು ಚರ್ಚಸಿದ ನಂತರ ನಾವು ಹೊರಡುವಾಗ ,ನಮ್ಮನ್ನು ತಡೆದು ” ನೀವು ಇಲ್ಲಿಯೇ ಇರಬೇಕು ( ಆಗ ನನಗೆ ಬೇರೆ ಕಾಲೇಜಿನಿoದ ಕರೆ ಬರುತ್ತಿದ್ದವು) .ಈ ಮೆಡಿಕಲ್ ಕಾಲೇಜ್ ನನ್ನ 8 ವರ್ಷಗಳ ಸತತ ಪ್ರಯತ್ನದಿಂದ ಹುಟ್ಟಿದ ಮಗು. ನಿಮ್ಮ ಮಡಿಲಿನಲ್ಲಿ ಹಾಕುತ್ತೇನೆ. ಇದನ್ನು ಚೆನ್ನಾಗಿ ಬೆಳೆಸುವುದು ನಿಮ್ಮ ಕೈಯಲ್ಲಿದೆ ಎಂದು ಹೇಳಿದಾಗ ಅವರಲ್ಲಿ ಈ ವಿದ್ಯಾಲಯದ ಬೆಳವಣಿಗೆಯ ಬಗ್ಗೆ ಇರುವ ಕನಸುಗಳು, ಅತೀವ ಪ್ರೀತಿ, ಕಾಳಜಿ ತುಂಬಾ ಹೃದಯ ಸ್ಪರ್ಶಿಯಾಗಿತ್ತು. .ಅವರು ನಮ್ಮಲ್ಲಿ ತೋರಿದ ವಿಶ್ವಾಸಕ್ಕೆ ಧನ್ಯರು ಎoಬ ಭಾವನೆ ಮೂಡಿತು.
ನಾನು ಪ್ರಾಂಶುಪಾಲರ ಹುದ್ದೆಯನ್ನು ವಹಿಸಿಕೊಂಡ ದಿವಸ ಕುರುಂಜಿಯವರು ಚೆನ್ನಕೇಶವ ದೇವರ ಪ್ರಸಾದವನ್ನು ತಂದು ಕೊಟ್ಟು ನನ್ನನ್ನು ಆಶೀರ್ವದಿಸಿದಾಗ ನನ್ನ ಕಣ್ಣು ತೇವವಾಯಿತು. ಅವರ ಮಾರ್ಗದರ್ಶನದಲ್ಲಿ ಕಾರ್ಯ ನಿರ್ವಹಿಸುವ ಸೌಭಾಗ್ಯ ದೊರಕಿದ್ದಕ್ಕೆ ತುಂಬಾ ಸಂತೋಷವಾಯಿತು. ನನ್ನಲ್ಲಿ ಅವರಿಗಿದ್ದ ನಂಬಿಕೆಗೆ ಅನುಗುಣವಾಗಿ ಅರ್ಹರಾಗಿ ಸೇವೆ ಸಲ್ಲಿಸಬೇಕೆಂಬ ದೃಢತೆ ನನ್ನಲ್ಲಿ ಮೂಡಿತು.
ಶ್ರೀ ಕುರುಂಜಿಯವರಲ್ಲಿ ನಾನು ಕಂಡ ಅನೇಕ ಶ್ರೇಷ್ಠ ಗುಣಗಳನ್ನು ವ್ಯಕ್ತಪಡಿಸಿದರೆ ಅದು ಅತೀಶಯೋಕ್ತಿ ಅಲ್ಲ.ಅವರ ಗುಣಗಾನವಂತೂ ಅಲ್ಲವೇ ಅಲ್ಲ.ಅವರ ಶಿಸ್ತು,ಸಕಲ ಜೀವನ ಶೈಲಿ, ಸಹನೆ, ತಾಳ್ಮೆ, ಹರೆಯದವರಿ0ದಲೂ ಮಾಡಲಾಗದ ದಿನದ 12 ಘಂಟೆಗಳ ಕಠಿಣ ಪರಿಶ್ರಮ,ಅಸಾಧ್ಯವಾದುದನ್ನೂ ಸಾಧಿಸುವ ಛಲ, ಪ್ರಾಮಾಣಿಕತೆ, ತ್ಯಾಗ,ಸಮಯ ಪ್ರಜ್ಞೆ, ನಿಸ್ವಾರ್ಥ ಸೇವೆ, ದಯೆ,ಕ್ಷಮೆ ಜನರ ಆರೋಗ್ಯದ ಬಗ್ಗೆ ಕಾಳಜಿ, ಸಮಾಜ ಸೇವೆ, ಪ್ರತಿಭೆಯನ್ನು ಗುರುತಿಸಿ ಅವರನ್ನು ಪ್ರೋತ್ಸಾಹಿಸುವ ಮನಸ್ಸು, ಭೇದ ಭಾವ ಇಲ್ಲದೆ ಎಲ್ಲರನ್ನೂ ಸರಿ ಸಮಾನವಾಗಿ ಕಾಣುವ ಸ್ವಭಾವ ಹಾಗೂ ಅವರೊಂದಿಗೆ ಮಮತೆಯಿಂದ ಮಾತನಾಡಿ ಅವರ ಸುಖ ದುಃಖಗಳಿಗೆ ಸ್ಪಂದಿಸಿ ಅವರಿಗ ಧನ ಸಹಾಯ ಅಥವಾ ಉದ್ಯೋಗ ನೀಡಿ ಎಲ್ಲರ ಬದುಕಿನ ಅಭ್ಯುದಯಕ್ಕಾಗಿ ಹಾರೈಸುವುದು, ಹೀಗೆ ಅನೇಕ ಅನೇಕ.ಇವುಗಳಲ್ಲಿ ಕೆಲವನ್ನಾದರೂ ನಾವು ನಿತ್ಯ ಜೀವನದಲ್ಲಿ ಅಳವಡಿಸಿಕೊಂಡರೆ ನಮ್ಮ ಜನ್ಮ ಸಾರ್ಥಕ.
ನಾನು ಈಗಾಗಲೇ ಹೇಳಿದಂತೆ ಕುರುಂಜಿಯವರು ನನ್ನನ್ನು ತಮ್ಮ ಮನೆಯ ಮಗಳ ಹಾಗೆ ಭಾವಿಸಿದ್ದರು ಎಂಬುದಕ್ಕೆ ಒಂದು ಮರೆಯಲಾಗ ಪ್ರಸಂಗವೊಂದಿದೆ. ಏ.2005ರಲ್ಲಿ ಅಮೆರಿಕಾಗೆ ಮುಂಜಾನೆ 11 ಗಂಟೆಗೆ ನಾವು ಹೊರಡುವವರು ಇದ್ದೇವೆ. ಆಗ ಡಾ. ಕೆವಿಜಿಯವರು ತಮ್ಮ ಪಾಲಿಟೆಕ್ನಿಕ್ ಕಚೇರಿಯಿಂದ ಕರೆ ಮಾಡಿ, ನಾನು ನಿಮ್ಮನ್ನು ಕಾಣಲು ಬರುತ್ತೇನೆ ಎಂದು ಹೇಳಿದಾಗ ನನಗೆ ಆಶ್ಚರ್ಯ ಹಾಗೂ ಆನಂದವೂ ಆಯಿತು.12 ರವರೆಗೆ ರಾಹುಕಾಲವಿದೆ. ನಂತರ ಹೊರಡಿ ಎಂದು ಹೇಳಿ ಎರಡು ಪಾಕೆಟ್ ಗೋಡಂಬಿ ಮತ್ತು ಜೇನು ನಮ್ಮ ಕೈಗೆ ನೀಡಿ ಇದನ್ನು ನಿಮ್ಮ ಮೊಮ್ಮಕ್ಕಳಿಗೆ ಕೊಡಿ ಎಂದು ಹರಸಿದರು.ನನಗೆ ನನ್ನ ದಿವಂಗತ ತಂದೆ ಪ್ರತ್ಯಕ್ಷ ವಾದಂತೆ ಭಾಸವಾಯಿತು. ಅವರಿಗೆ ತಮ್ಮ ಉದ್ಯೋಗಿಗಳ ಬಗ್ಗೆ
ಇರುವ ಕಾಳಜಿ ಎಂಥಹದ್ದು ಎಂಬುದಕ್ಕೆ ಈ ಘಟನೆಯೇ ಸಾಕ್ಷಿ.
ಮಮತೆಯ ಸಾಕಾರ ಮೂರ್ತಿ, ವಿಶಾಲವಾದ ಮನಸ್ಸು, ಸಮಯ ಪ್ರಜ್ಞೆ,ಅನುಕಂಪ, ಸಾಮಾಜಿಕ ಕಳಕಳಿ ಹೊಂದಿರುವ ಪೂಜ್ಯರ ಒಡನಾಟ ದೊರೆತಿದ್ದೇ ನನ್ನ ಸೌಭಾಗ್ಯ.
ಕೆ. ವಿ. ಜಿ ಯವರು ಅನೇಕ ವಿದ್ಯಾ ಸಂಸ್ಥೆಗಳನ್ನು ಸ್ಥಾಪಿಸಲು ಪ್ರೇರಣೆ ಅವರಿಗೆ ಶಿಕ್ಷಣದ ಮೇಲಿರುವ ಅತಿಯಾದ ಪ್ರೀತಿ, ಲವಲವಿಕೆ. ವಿದ್ಯಾರ್ಥಿಗಳನ್ನು ಮಾತನಾಡಿಸಿ ಚೆನ್ನಾಗಿ ವಿದ್ಯಾಭ್ಯಾಸ ಮಾಡಲು ಅವರನ್ನು ಹರಿದುoಬಿಸುವುದು ಅವರ ದಿನಚರಿ. ಅಭ್ಯಾಸಬಲ,ಲಕ್ಷಾಂತರ ಮಕ್ಕಳಿಗೆ ದಾನಗಳಲ್ಲಿ ಅತಿ ಶ್ರೇಷ್ಠವಾದ ದಾನ ವಿದ್ಯಾ ದಾನ ಮಾಡಿದ ಸಂತೃಪ್ತಿ .
Simple living , high thinking ಎಂಬಂತೆ ,ಅನವಶ್ಯಕ ದುoದು ವೆಚ್ಚವಿಲ್ಲದ ಸರಳ ಜೀವನ, ಸಕಾರಾತ್ಮಕ ಚಿಂತನೆ, ಸಮತಾಭಾವ, ಆದರ್ಶಗಳ ಸಾಕಾರ ಮೂರ್ತಿ, ನುಡಿದಂತೆ ನಡೆಯುವ , ತಮ್ಮ ಪಂಚತತ್ವಗಳನ್ನು ಚಾಚು ತಪ್ಪದೆ ಅಕ್ಷರಶಹ ಪಾಲಿಸುವ ಆದರ್ಶ ವ್ಯಕ್ತಿ.ನಾ ಕಂಡ ಡಾ.ಕುರುಂಜಿ ವೆಂಕಟರಮಣ ಗೌಡರಿಗೆ ಭಾವ ಪೂರ್ಣ ನಮನಗಳು 🙏