ನ್ಯೂಸ್ ನಾಟೌಟ್: ಸರ್ಕಾರಿ ಅಧಿಕಾರಿ ಮದ್ಯ ಸೇವಿಸಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಯದ್ವಾತದ್ವಾ ವಾಹನ ಚಲಾಯಿಸಿದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಸುಳ್ಯದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿ ನವೀನ್ ಕುಮಾರ್ ಅಮಾನತುಗೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆಡಿಯೋವೊಂದು ವೈರಲ್ ಆದ ಬೆನ್ನಲ್ಲೇ ಅವರನ್ನು ಆಂತರಿಕ ವಿಚಾರಣೆ ನಡೆಸಿ ಅಮಾನತುಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.
ನ.28 ರಂದು ರಾತ್ರಿ ಅರಂಬೂರು ಬಳಿ ಮದ್ಯ ಸೇವಿಸಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಳ್ಯದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿ ನವೀನ್ ಕುಮಾರ್ ಯದ್ವಾತದ್ವಾ ವಾಹನ ಚಲಾಯಿಸಿದ್ದರು. ಅದು ಕೂಡ ಸರ್ಕಾರಿ ವಾಹನದಲ್ಲಿ. ಸಿಕ್ಕಸಿಕ್ಕ ವಾಹನಕ್ಕೆ ಅಡ್ಡ ಹೋಗುವುದನ್ನು ಗಮನಿಸಿದ ಜನರು ಆ ವಾಹನವನ್ನು ಅಡ್ಡಗಟ್ಟಿ ವಿಚಾರಿಸಿದ್ದಾರೆ. ಈ ವೇಳೆ ನವೀನ್ ಕುಮಾರ್ ಕ್ಷಮೆಯಾಚಿಸುತ್ತಿರುವ ವಿಡಿಯೋ ವೈರಲ್ ಆಗಿತ್ತು. ನ್ಯೂಸ್ ನಾಟೌಟ್ ನಲ್ಲೂ ಈ ವಿಡಿಯೋ ಪ್ರಸಾರವಾಗಿತ್ತು. ಸುಮಾರು 54,000 ಸಾವಿರಕ್ಕೂ ಅಧಿಕ ವೀಕ್ಷಣೆ ಕಂಡು ಬಂದಿತ್ತು. ಹಲವಾರು ಮಂದಿ ಈತನನ್ನು ಅಮಾನತು ಮಾಡಬೇಕು ಎಂದು ಒತ್ತಾಯಿಸಿದ್ದರು. ಈ ಬೆನ್ನಲ್ಲೇ ಅಧಿಕಾರಿ ನಾನು ಎಣ್ಣೆ ಹೊಡೆದಿಲ್ಲ ಕಾಫಿ ಕುಡಿಯಲು ಹೋಗಿದ್ದೆ ಎಂದು ನಾಟಕವಾಡಿದ್ದ. ಈ ಬೆನ್ನಲ್ಲೇ ಇಲಾಖೆ ಕಠಿಣ ಕ್ರಮ ತೆಗೆದುಕೊಂಡು ಕುಡಿದ ಕಾಫಿಯ ನಶೆಯನ್ನು ಇಳಿಸಿದೆ. ಸುಳ್ಯಕ್ಕೆ ಬೆಳ್ತಂಗಡಿ ಎ.ಪಿ.ಎಂ.ಸಿ. ಕಾರ್ಯದರ್ಶಿ ಯಾಗಿರುವ ರವೀಂದ್ರ ರಿಗೆ ಪ್ರಭಾರ ವಹಿಸಲಾಗಿದೆ ಎಂದು ತಿಳಿದು ಬಂದಿದೆ.