ನ್ಯೂಸ್ ನಾಟೌಟ್: ಧಾರವಾಡ-ಬೆಂಗಳೂರು ನಡುವೆ ಕಳೆದ ನಾಲ್ಕು ದಿನದ ಹಿಂದೆ ಆರಂಭವಾದ ವಂದೇ ಭಾರತ್ (Dharwad-Bengaluru Vande Bharat Express) ರೈಲಿಗೆ ಕಿಡಿಗೇಡಿಗಳು ಕಲ್ಲು ಹೊಡೆದಿರುವ ಘಟನೆ ದಾವಣಗೆರೆ (Davangere) ನಗರದ ಹೊರವಲಯದ ಜಿಎಂಐಟಿ ಹಿಂಭಾಗದಲ್ಲಿ ನಡೆದಿದೆ.
ಧಾರವಾಡದಿಂದ ಶನಿವಾರ (ಜು.1) ರಂದು ಮಧ್ಯಾಹ್ನ ಬೆಂಗಳೂರಿಗೆ ತೆರಳುತ್ತಿರುವಾಗ ಕಿಡಿಗೇಡಿಗಳು ಕೃತ್ಯವೆಸಗಿದ್ದಾರೆ. ಇದರಿಂದ ಸಿ-4 ಕೋಚ್ನ ಕಿಟಕಿಗೆ ಕಲ್ಲು ಎಸೆದಿದ್ದು, ಗ್ಲಾಸ್ ಬಿರುಕು ಬಿಟ್ಟಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಈ ಕುರಿತು ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜ್ಯದ ಮೊದಲ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಮೈಸೂರು-ಚೆನ್ನೈ ರೈಲಿಗೂ ಕಿಡಿಗೇಡಿಗಳು ಕಲ್ಲು ಎಸೆದಿದ್ದ ಘಟನೆ ಕೆಆರ್ ಪುರಂ ಮತ್ತು ಬೆಂಗಳೂರು ಕಂಟೋನ್ಮೆಂಟ್ ರೈಲ್ವೆ ನಿಲ್ದಾಣದ ಮಧ್ಯೆ ನಡೆದಿತ್ತು. ಘಟನೆಯಲ್ಲಿ ರೈಲಿನ 2 ಗಾಜುಗಳಿಗೆ ಹಾನಿಯಾಗಿದ್ದು, ಪ್ರಯಾಣಿಕರು ಗಾಯಗೊಂಡಿದ್ದಾರೆ ಎಂದು ನೈಋತ್ಯ ರೈಲ್ವೆ ಇಲಾಖೆ ತಿಳಿಸಿತ್ತು.
ಕಿಡಿಗೇಡಿಗಳಿಗಾಗಿ ರೈಲ್ವೆ ಪೊಲೀಸರು ಬಲೆ ಬೀಸಿದ್ದರು. ಈ ಬಗ್ಗೆ ರೈಲ್ವೆ ಇಲಾಖೆ ವಿಷಾದ ವ್ಯಕ್ತಪಡಿಸಿತ್ತು. ಬೆಂಗಳೂರು ರೈಲ್ವೆ ವಿಭಾಗೀಯ ಕಚೇರಿ ಇಲಾಖೆಗೆ ಸಂಬಂಧಿಸಿದ ವಸ್ತುಗಳಿಗೆ ಹಾನಿಯುಂಟು ಮಾಡಿದರೆ, ಅಂತವರ ವಿರುದ್ಧ ಜಾಮೀನು ರಹಿತ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿತ್ತು.
ಇನ್ನು ಜನವರಿ ಮತ್ತು ಫೆಬ್ರವರಿಯಲ್ಲಿ ಒಟ್ಟು 21 ಕಲ್ಲು ತೂರಾಟ ಪ್ರಕರಣಗಳು ವರದಿಯಾಗಿದ್ದು, ಬೆಂಗಳೂರು ವಿಭಾಗದಲ್ಲೇ 13 ಪ್ರಕರಣಗಳು ದಾಖಲಾಗಿದ್ದವು ಎಂದು ನೈರುತ್ಯ ರೈಲ್ವೆ ಇಲಾಖೆ ತಿಳಿಸಿದೆ.