Latest

ಎಸ್ಐಟಿ ತನಿಖೆಯಿಂದ ಸತ್ಯ ಹೊರ ಬರಲಿ, ಪುತ್ತೂರು ಶಾಸಕ ಅಶೋಕ್ ರೈ ಹೇಳಿಕೆ

349

ನ್ಯೂಸ್ ನಾಟೌಟ್: ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಅಸಹಜ ಸಾವುಗಳ ಪ್ರಕರಣದ ತನಿಖೆಗಾಗಿ ರಾಜ್ಯ ಸರ್ಕಾರವು ವಿಶೇಷ ತನಿಖಾ ತಂಡ (ಎಸ್ಐಟಿ) ರಚಿಸಿರುವುದನ್ನು ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಅಶೋಕ್ ಕುಮಾರ್ ರೈ ಅವರು ಸ್ವಾಗತಿಸಿದ್ದಾರೆ.

ಇದು ಸರ್ಕಾರದ ದಿಟ್ಟ ಹಾಗೂ ಜನಪರ ಕ್ರಮವಾಗಿದೆ ಎಂದು ಅವರು ಬಣ್ಣಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, “ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಈ ಪ್ರಕರಣದ ಸತ್ಯಾಸತ್ಯತೆಯನ್ನು ಹೊರಗೆಳೆಯಲು ಎಸ್ಐಟಿ ರಚಿಸಬೇಕೆಂಬ ಜನರ ಆಗ್ರಹಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಸ್ಪಂದಿಸಿದ್ದಾರೆ. ಅವರ ಈ ನಿರ್ಧಾರ ಅತ್ಯಂತ ಸಮಯೋಚಿತ ಹಾಗೂ ಶ್ಲ್ಯಾಘನೀಯ” ಎಂದು ತಿಳಿಸಿದ್ದಾರೆ.

ರಾಜ್ಯದ ಆಂತರಿಕ ಭದ್ರತಾ ವಿಭಾಗದ ಪೊಲೀಸ್ ಮಹಾನಿರ್ದೇಶಕ ಪ್ರಣವ್ ಮೊಹಾಂತಿ ಅವರ ನೇತೃತ್ವದಲ್ಲಿ ನಾಲ್ವರು ಖಡಕ್ ಹಾಗೂ ದಕ್ಷ ಐಪಿಎಸ್ ಅಧಿಕಾರಿಗಳ ತಂಡವನ್ನು ರಚಿಸಿರುವುದು ತನಿಖೆಯ ಮೇಲೆ ನಂಬಿಕೆ ಹೆಚ್ಚಿಸಿದೆ. “ಅಜ್ಞಾತ ವ್ಯಕ್ತಿಯೊಬ್ಬರು ನೀಡಿದ ದೂರಿನಲ್ಲಿನ ವಿಷಯಗಳನ್ನು ಈ ತಂಡವು ಯಾವುದೇ ಮುಲಾಜಿಗೆ ಒಳಗಾಗದೆ, ಪ್ರಾಮಾಣಿಕವಾಗಿ ಹಾಗೂ ನ್ಯಾಯನಿಷ್ಠುರತೆಯಿಂದ ತನಿಖೆ ನಡೆಸಬೇಕು. ಅತಿ ಶೀಘ್ರದಲ್ಲಿ ಸತ್ಯವನ್ನು ಬಯಲಿಗೆಳೆದು, ಜನರ ಮನಸ್ಸಿನಲ್ಲಿ ಮೂಡಿರುವ ಗೊಂದಲಗಳನ್ನು ಪರಿಹರಿಸಬೇಕು” ಎಂದು ಅಶೋಕ್ ರೈ ಆಗ್ರಹಿಸಿದರು.

“ಒಂದು ವೇಳೆ ದೂರಿನಲ್ಲಿ ಉಲ್ಲೇಖಿಸಿರುವಂತೆ ಅಲ್ಲಿ ನೂರಾರು ಶವಗಳು ಪತ್ತೆಯಾದರೆ, ಆ ಎಲ್ಲ ಸಂತ್ರಸ್ತ ಕುಟುಂಬಗಳಿಗೆ ಸೂಕ್ತ ನ್ಯಾಯ ಒದಗಿಸುವುದು ನಮ್ಮ ಸರ್ಕಾರದ ಆದ್ಯ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಎಸ್ಐಟಿ ತನಿಖೆಯು ಪಾರದರ್ಶಕವಾಗಿ ನಡೆದು, ಪ್ರಕರಣಕ್ಕೆ ಅಂತಿಮ ತೆರೆ ಎಳೆಯಲಿದೆ ಎಂಬ ಸಂಪೂರ್ಣ ವಿಶ್ವಾಸವಿದೆ” ಎಂದು ಅವರು ಅಭಿಪ್ರಾಯಪಟ್ಟರು.

See also  ಮೂಡಿಗೆರೆ: ಜ್ವರದಿಂದ ಬಳಲುತ್ತಿದ್ದ ಇಬ್ಬರು ಮಕ್ಕಳು ಮೃತ್ಯು! ಆಗಿದ್ದೇನು?
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget