ನ್ಯೂಸ್ ನಾಟೌಟ್: ಧರ್ಮಸ್ಥಳ ಗ್ರಾಮದಲ್ಲಿ ಸರಣಿ ಹತ್ಯೆಗಳಾಗಿ ಶವಗಳನ್ನು ಪ್ರಭಾವಿಯೊಬ್ಬರ ಆಣತಿಯಂತೆ ನಾನೇ ಹೂತಿದ್ದೇನೆ ಎಂಬ ಅನಾಮಿಕ ಹೇಳಿರುವ ವಿಚಾರ ಇದೀಗ ಭಾರೀ ಚರ್ಚೆಗೆ ಕಾರಣವಾಗುತ್ತಿದೆ.
ದಿನದಿಂದ ದಿನಕ್ಕೆ ಈ ಪ್ರಕರಣದಲ್ಲಿ ಉತ್ತರ ಸಿಗುವ ಬದಲು ಪ್ರಶ್ನೆಗಳೇ ಹೆಚ್ಚಾಗುತ್ತಿದೆ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಅನ್ನುವ ವಿಚಾರವನ್ನು ಎಸ್ ಐಟಿ ಅಧಿಕಾರಿಗಳು ಗೌಪ್ಯವಾಗಿಟ್ಟಿದ್ದಾರೆ. ಸಾರ್ವಜನಿಕರಿಗೆ ಸರಿಯಾದ ಮಾಹಿತಿ ಸಿಗುತ್ತಿಲ್ಲ. ಇದೇ ಕಾರಣಕ್ಕೆ ಸಾಕಷ್ಟು ಅವಾಂತರಗಳು ಸಂಭವಿಸುತ್ತಿದೆ ಎನ್ನುವ ದೂರುಗಳು ವ್ಯಕ್ತವಾಗುತ್ತಿದೆ. ಆಯಾ ದಿನದ ಮಾಹಿತಿಗಳನ್ನು ಸಮಾಜದ ಎದುರು ಪೊಲೀಸರು ತೆಗೆದಿಡಬೇಕು ಎಂಬ ಒತ್ತಾಯಗಳೂ ಕೇಳಿ ಬಂದಿದೆ.
ನೇತ್ರಾವತಿ ಕಿಂಡಿಅಣೆಕಟ್ಟಿನ ಪಕ್ಕದಲ್ಲಿರುವ ಪಾಯಿಂಟ್ ನಂಬರ್ 13ರಲ್ಲಿ ಇಂದು ಉತ್ಖನನ ಕಾರ್ಯ ನಡೆಯಬೇಕಿದೆ. ಆದರೆ ಕೆಲವು ಗೊಂದಲದ ಪರಿಸ್ಥಿತಿ ನಿರ್ಮಾಣವಾಗಿದ್ದು ಇಂದು ಉತ್ಖನನ ಕಾರ್ಯದ ಬಗ್ಗೆ ಪ್ರಶ್ನೆಗಳು ಎದ್ದಿವೆ. ಅದರಲ್ಲೂ ಈ 13ನೇ ಪಾಯಿಂಟ್ ಉತ್ಖನನ ಭಾರೀ ಕುತೂಹಲ ಮೂಡಿಸಿದ್ದು, ಅನಾಮಿಕ ಈ ಒಂದೇ ಸ್ತಳದಲ್ಲಿ 8 ಶವಗಳನ್ನು ಹೂತಿರುವುದಾಗಿ ಹೇಳಿದ್ದಾನೆ.
ಇಂದು 13ನೇ ಪಾಯಿಂಟ್ ಉತ್ಖನನ!
ಧರ್ಮಸ್ಥಳದಲ್ಲಿ ಗಂಭೀರ ಆರೋಪಗಳಿಗೆ ಸಂಬಂಧಿಸಿದಂತೆ ಎಸ್ಐಟಿ ನೇತೃತ್ವದಲ್ಲಿ ನಡೆಯುತ್ತಿರುವ ಉತ್ಖನನ ಕಾರ್ಯವು ಜನರ ಗಮನ ಸೆಳೆದಿದೆ. ಒಬ್ಬ ಮಾಜಿ ಸ್ವಚ್ಛತಾ ಕಾರ್ಮಿಕನಿಂದ ಮಾಡಲಾದ ದೂರಿನ ಆಧಾರದ ಮೇಲೆ, ಧರ್ಮಸ್ಥಳದ ಸುತ್ತಮುತ್ತಲಿನ ಪ್ರದೇಶದಲ್ಲಿ 13 ಸ್ಥಳಗಳನ್ನು ಗುರುತಿಸಲಾಗಿದ್ದು, ಈ ಪೈಕಿ ಆರನೇ ಸ್ಥಳದಲ್ಲಿ ಮಾನವ ಅಸ್ಥಿಪಂಜರ ಕಂಡುಬಂದಿತ್ತು. ಇದೀಗ, 13ನೇ ಸ್ಥಳದಲ್ಲಿ ನಡೆಯಲಿರುವ ಉತ್ಖನನವು ತನಿಖೆಯ ಮೊದಲ ಹಂತದ ಕೊನೆಯ ಕಾರ್ಯವಾಗಿದೆ.
ಈ ಕಾರ್ಯಕ್ಕಾಗಿ ಎಸ್ಐಟಿ ತಂಡವು ನೀರಾವರಿ ಮತ್ತು ಮೆಸ್ಕಾಂ ಇಲಾಖೆಗಳೊಂದಿಗೆ ಸಭೆ ನಡೆಸಿ, ಅಗತ್ಯ ಅನುಮತಿಗಳನ್ನು ಪಡೆದಿದೆ. ಆದರೆ, ನಿನ್ನೆ ಎಸ್ಐಟಿ ತಂಡ ನಿರ್ಗಮಿಸಿದ ಬಳಿಕ ನಡೆದ ಗಲಾಟೆಯಿಂದಾಗಿ ವಾತಾವರಣ ಉದ್ವಿಗ್ನವಾಗಿದೆ. ನಿನ್ನೆಯ ಗಲಾಟೆಯ ಹಿನ್ನೆಲೆಯಲ್ಲಿ ಧರ್ಮಸ್ಥಳ ಮತ್ತು ಬೆಳ್ತಂಗಡಿ ಠಾಣೆಗಳಲ್ಲಿ ಎರಡೂ ಕಡೆಯವರಿಂದ ದೂರುಗಳು ದಾಖಲಾಗಿವೆ. ಧರ್ಮಸ್ಥಳ ಠಾಣೆ ಮತ್ತು ಉಜಿರೆ ಆಸ್ಪತ್ರೆಯ ಎದುರು ಜನ ಜಮಾಯಿಸಿದ ಬಗ್ಗೆಯೂ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಈ ಘಟನೆಗಳಿಂದಾಗಿ ಇಂದು ಧರ್ಮಸ್ಥಳ ಮತ್ತು ನೇತ್ರಾವತಿ ಪ್ರದೇಶದಲ್ಲಿ ಹೆಚ್ಚಿನ ಪೊಲೀಸ್ ಭದ್ರತೆಯನ್ನು ಒದಗಿಸಲಾಗಿದೆ. ಎರಡು ಹೆಚ್ಚುವರಿ ಕೆಎಸ್ಆರ್ ಪಿ ತುಕಡಿಗಳನ್ನು ನಿಯೋಜಿಸಲಾಗಿದ್ದು, ಯಾವುದೇ ಅಹಿತಕರ ಘಟನೆ ತಡೆಗಟ್ಟಲು ಬಿಗಿ ಕ್ರಮಗಳನ್ನು ಕೈಗೊಳ್ಳಲಾಗಿದೆ.ಈ ಉತ್ಖನನ ಕಾರ್ಯವು ಧರ್ಮಸ್ಥಳದಂತಹ ಆಧ್ಯಾತ್ಮಿಕ ಕೇಂದ್ರದಲ್ಲಿ ನಡೆಯುತ್ತಿರುವುದರಿಂದ ಸಾರ್ವಜನಿಕರಲ್ಲಿ ಆತಂಕ ಮತ್ತು ಗೊಂದಲದ ವಾತಾವರಣ ಸೃಷ್ಟಿಯಾಗಿದೆ.