ದೇಶ-ವಿದೇಶವೈರಲ್ ನ್ಯೂಸ್ಶಿಕ್ಷಣ

ರೋಗಿಗಳ ಪಾಲಿಗೆ ಎರಡನೇ ತಾಯಿಯೇ ‘ದಾದಿಯರು’, ‘ವಿಶ್ವ ದಾದಿಯರ ದಿನದ’ ವಿಶೇಷ ಬರಹ, ಇಲ್ಲಿದೆ ವೀಕ್ಷಿಸಿ

197

ನ್ಯೂಸ್ ನಾಟೌಟ್: ನಾವು ವೈದ್ಯ ವೃತ್ತಿಯನ್ನು ದೇವರಿಗೆ ಸಮಾನವಾಗಿ ಕಾಣುತ್ತೇವೆ. ವೈದ್ಯರಿಗಿಂತ ಮೊದಲು ರೋಗಿಗಳನ್ನು ಉಪಚರಿಸುವವರು ದಾದಿಯರು, ವೈದ್ಯರ ಸಲಹೆ ಸೂಚನೆ ಪಡೆದು ದಾದಿಯರು ರೋಗಿಗಳ ಸೇವೆಗೈಯುತ್ತಾರೆ. ನಿರಂತರವಾಗಿ ರೋಗಿಗಳ ಜೊತೆಗಿದ್ದು ಕಾಯಿಲೆ ವಾಸಿ ಆಗುವ ತನಕ ತಮ್ಮ ಸೇವೆಯನ್ನು ನೀಡ್ತಾರೆ. ಆ ಸೇವೆಯನ್ನೇ ನಾವು ದೇವರ ಸೇವೆ ಅಂತ ಕರೆಯುತ್ತೀವಿ.

ದಾದಿಯರಿಗೆ ಪ್ರತಿ ದಿನವೂ ಕೂಡ ವಿಶ್ವ ದಾದಿಯರ ದಿನವಾಗಿಯೇ ಇರುತ್ತದೆ. ರೋಗಿಗಳ ಸೇವೆಗಿಂತ ಮತ್ತೊಂದು ಕಾರ್ಯ ಅವರಿಗಿಲ್ಲ. ವೈಯಕ್ತಿಕವಾಗಿ ಎಷ್ಟೇ ಕಷ್ಟ ಇದ್ದರೂ ದಾದಿಯರು ಒಂದು ಸಲ ಆಸ್ಪತ್ರೆಗೆ ಬಂದ್ರು ಅಂದ್ರೆ ತಮ್ಮೆಲ್ಲ ನೋವುಗಳನ್ನು ಮರೆತು ಬಿಡುತ್ತಾರೆ, ರೋಗಿಗಳ ಸೇವೆಯಲ್ಲಿ ಲೀನರಾಗುತ್ತಾರೆ. ಈ ಕೆಲಸದಲ್ಲಿ ಅಂತಹದ್ದೊಂದು ಖುಷಿ ಇದೆ, ಸಾರ್ಥಕ ಮನೋಭಾವನೆ ಇದೆ.

ಅಂದ ಹಾಗೆ ಈ ವಿಶ್ವ ದಾದಿಯರ ದಿನವನ್ನು ಖ್ಯಾತ ದಾದಿ ಫ್ಲಾರೆನ್ಸ್ ನೈಟಿಂಗೇಲ್ ಅನ್ನುವವರು ಹುಟ್ಟಿದ ಸವಿನೆನಪಿಗಾಗಿ ಪ್ರತಿ ವರ್ಷ ಮೇ೧೨ರಂದು ಆಚರಿಸಲಾಗುತ್ತದೆ. ಹಗಲು ರಾತ್ರಿಯೆನ್ನದೆ ಅಪರಿಚಿತರ ಜೀವಕ್ಕಾಗಿ ದುಡಿಯುವವರು ದಾದಿಯರು. ತಾವು ಸಮಯಕ್ಕೆ ಸರಿಯಾಗಿ ಆಹಾರ ಸೇವಿಸದೇ ಹೋದರೂ ಇತರರಿಗೆ ತಿನ್ನಿಸಿ ಸರಿಯಾದ ಸಮಯಕ್ಕೆ ಔಷಧಿಯನ್ನು ನೀಡಿ ಉಪಚರಿಸುತ್ತಾರೆ.

ಆಸ್ಪತ್ರೆಗೆ ಬರುವ ಎಲ್ಲಾ ರೋಗಿಗಳನ್ನು ತಮ್ಮ ಹೆತ್ತವರಂತೆ ಹಾಗೂ ಸಂಬಂಧಿಕರಂತೆ ಕಾಣುವ ನಿರ್ಮಲ ಮನಸ್ಸು ಇವರದು. ರಜಾದಿನಗಳೇ ಇರಲಿ ಅಥವಾ ಹುಟ್ಟು ಹಬ್ಬದಂತ ವಿಶೇಷ ದಿನಗಳಲ್ಲೂ ಸಹ ಇವರು ತಮ್ಮ ಕರ್ತವ್ಯವನ್ನು ಮರೆಯದೇ ದುಡಿಯುತ್ತಿರುತ್ತಾರೆ. ಇಡೀ ಜಗತ್ತು ಗಾಢ ನಿದ್ರೆಯಲ್ಲಿದ್ದರೂ ಹಗಲಿರುಳೆನ್ನದೇ ಇತರರಿಗಾಗಿ ಎಚ್ಚರದಿಂದ ಕಾದು ಕುಳಿತು ಉಪಚರಿಸುತ್ತಾರೆ. ಪ್ರತೀ ದಿನ ಬೆಳಗ್ಗೆ ಬೇಗನೆ ಕೆಲಸಕ್ಕೆ ಹಾಜರಾಗಿ ಕೊನೆಗೆ ಹೋಗುವವರು ದಾದಿಯರು.

ದಾದಿಯರು ವೈದ್ಯರಿಗಿಂತ ಕಡಿಮೆಯಿಲ್ಲ. ಏಕೆಂದರೆ ಅವರು ಸಮಾನವಾಗಿ ಶ್ರಮಿಸುತ್ತಾರೆ. ಇಷ್ಟೆಲ್ಲ ಸೇವೆಗಳನ್ನು ನೀಡಿಯೂ ಅಪರೂಪಕ್ಕೊಮ್ಮೆ ಸಮಾಜದ ಮುಂದೆ ಪ್ರತ್ಯಕ್ಷವಾದಾಗ “ಅವರು ಎಷ್ಟಾದರೂ ನರ್ಸ್ ಅಲ್ವ ” ಎನ್ನುವ ಅಪಹಾಸ್ಯದ ಮಾತುಗಳನ್ನು ಕೇಳಿಸಿಕೊಂಡು ಸಹಿಸಿಕೊಳ್ಳುತ್ತಾರೆ. ಕೊನೆಗೊಂದು ದಿನ ನಮ್ಮ ಶ್ವಾಸ ನಿಂತಾಗ ಪಕ್ಕದಲ್ಲಿ ಇದ್ದು ಬಿಳಿ ಬಟ್ಟೆಯನ್ನು ಹೊದಿಸುವವರು ಇವರೇ ಅಲ್ಲವೇ..? ನಾವೆಲ್ಲ ಭೂಮಿಯಲ್ಲಿನ ಈ ದೇವತೆಗಳನ್ನು ಗೌರವಿಸಬೇಕು. ಈ ವೃತ್ತಿಯನ್ನು ಆಯ್ಕೆ ಮಾಡಿಕೊಂಡು ಮತ್ತೊಬ್ಬರ ಒಳಿತಿಗಾಗಿ ಜೀವನವನ್ನು ಮುಡಿಪಾಗಿರಿಸುವ ನಿಮ್ಮನ್ನು ಗೌರವಿಸುವುದು ನಮ್ಮ ನಿಮ್ಮೆಲ್ಲರ ಕರ್ತವ್ಯ.

ಕೋವಿಡ್ ಬಿಕ್ಕಟ್ಟಿನ ಸಮಯದಲ್ಲಿ ದಾದಿಯರು ಜೀವದ ಹಂಗನ್ನೇ ತೊರೆದು ಹಗಲಿರುಳು ಶ್ರಮಿಸಿದ್ದರು. ಜೀವನ್ಮರಣದ ನಡುವೆ ಹೋರಾಡುತ್ತಿದ್ದವರ ಶುಶ್ರೂಷೆಗಾಗಿ ಅವರು ತೋರಿದ ಉತ್ಸಾಹ ಮತ್ತು ಕಾಳಜಿ ಅನುಕರಣೀಯ. ದಾದಿಯರು ನಮ್ಮೆಲ್ಲರ ಪಾಲಿಗೆ ಎರಡನೇ ತಾಯಂದಿರಿದ್ದಂತೆ. ರೋಗಿಗಳ ಶುಶ್ರೂಷೆಗೆ ಸಹಾಯ ಮಾಡುವ ಎಲ್ಲ ಸಿಬ್ಬಂದಿಯೂ ಶ್ಲಾಘನೆಗೆ ಅರ್ಹರು. ನೊಂದು ಬಳಲಿರುವ ರೋಗಿಗೆ ಧೈರ್ಯ ತುಂಬುವ, ಸಹಾನುಭೂತಿಯಿಂದ ಎಲ್ಲರ ಕಷ್ಟದಲ್ಲೂ ಜೊತೆಯಾಗಿರುವ, ಎಲ್ಲರ ನೋವನ್ನೂ ಮರೆಸಲು ಯತ್ನಿಸುವ ನಿಮಗೆ ವಿಶ್ವ ದಾದಿಯರ ದಿನಾಚರಣೆಯ ಶುಭಾಶಯಗಳು.

See also  ಮಂಗಳೂರು: ಸ್ವಾಮಿ ಕೊರಗಜ್ಜನ ದರ್ಶನ ಪಡೆದ ರಿಯಲ್ ಸ್ಟಾರ್ ಉಪೇಂದ್ರ, UI ಸಿನಿಮಾ ರಿಲೀಸ್‌ ಹಿನ್ನೆಲೆ ಕಟೀಲು ದೇಗುಲಕ್ಕೆ ಭೇಟಿ

Click 👇

https://newsnotout.com/2024/05/uppinangady-theft-police
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget