Latestಸುಳ್ಯ

ಮಾನಸ ಮಹಿಳಾ ಮಂಡಲದ ಬೆಳ್ಳಿಹಬ್ಬ ಆಚರಣೆ, ರಜತ ಸಂಭ್ರಮದ ಸನ್ಮಾನ ಹಾಗೂ ಸಮಾರೋಪ

334

ಸಮಾಜದ ಹಿರಿಯರ ನಿರಂತರ ಪ್ರೋತ್ಸಾಹ, ಸಹಕಾರದಿಂದ ಸಂಘಟನೆಗೆ ಸಾರ್ಥಕ್ಯ: ಭಾಗೀರಥಿ ಮುರುಳ್ಯ

ನ್ಯೂಸ್‌ ನಾಟೌಟ್‌: ಮಹಿಳೆಯರು ಸಂಘಟಿತರಾಗಿ ಸಂಸ್ಥೆಯೊಂದನ್ನು ಕಟ್ಟಿ ಯಶಸ್ವಿಯಾಗಿ 25 ವರ್ಷ ಪೂರೈಸಿರುವುದು ಹೆಮ್ಮೆಯ ವಿಚಾರ. ಸಮಾಜದ ಹಿರಿಯರ ನಿರಂತರ ಪ್ರೋತ್ಸಾಹ, ಸಹಕಾರದಿಂದ ಮಾತ್ರ ಇದು ಸಾಧ್ಯ ಎಂದು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅಭಿಪ್ರಾಯಪಟ್ಟರು.

ಮಾನಸ ಮಹಿಳಾ ಮಂಡಲ (ರಿ) ಜಟ್ಟಿಪಳ್ಳ ಇದರ ಬೆಳ್ಳಿಹಬ್ಬ ಆಚರಣಾ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ಸಂಸ್ಥೆಯ ಬೆಳ್ಳಿಹಬ್ಬ ಆಚರಣೆ ರಜತ ಸಂಭ್ರಮದ ಸನ್ಮಾನ ಹಾಗೂ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮಾನಸ ಮಹಿಳಾ ಮಂಡಲದ ಸಾಧನೆಗೆ ಸಹಕಾರ ನೀಡಿದ ಈ ಊರಿನ ಜನತೆಯನ್ನು ಶ್ಲಾಘಿಸಿದರು. ಅಲ್ಲದೇ ಈ ಸಂಘಟನೆಗೆ ತನ್ನಿಂದಾಗುವ ಸಹಕಾರ ನೀಡುವ ಭರವಸೆಯನ್ನು ಶಾಸಕಿ ನೀಡಿದರು.

ಮುಖ್ಯ ಅತಿಥಿ ಸುಳ್ಯದ ಕೆವಿಜಿ ಅಮರಜ್ಯೋತಿ ಪ.ಪೂ. ಕಾಲೇಜಿನ ಪ್ರಾಂಶುಪಾಲೆ ಡಾ. ಯಶೋಧಾ ರಾಮಚಂದ್ರ ಮಾತನಾಡಿ, ಮಹಿಳಾ ಸಂಘಟನೆಗಳಿಂದ ವ್ಯಕ್ತಿತ್ವ ರೂಪಿತಗೊಂಡು ನಾಯಕತ್ವ ಗುಣ ಬೆಳೆಯುತ್ತದೆ. ನಮ್ಮ ಪರಂಪರೆಯಲ್ಲಿ ಮಾತೆಯರಿಗೆ ಪವಿತ್ರ ಸ್ಥಾನ ನೀಡಿದ್ದೇವೆ. ನಮ್ಮ ಸುಳ್ಯದ ಅಭಿವೃದ್ಧಿಯಲ್ಲೂ ಹಲವಾರು ಮಾತೆಯರು ಸಹಕಾರ ನೀಡಿದ್ದಾರೆ. ಮಾನಸ ಮಹಿಳಾ ಮಂಡಲಿಯಿಂದ ಇನ್ನಷ್ಟು ಸಮಾಜಮುಖಿ ಕಾರ್ಯಕ್ರಮಗಳು ಮುಂದುವರಿಯಲಿ ಎಂದು ಹಾರೈಸಿದರು.

ಮಾನಸ ಮಹಿಳಾ ಮಂಡಲದ ಗೌರವಾಧ್ಯಕ್ಷೆ ಚಂದ್ರಾಕ್ಷಿ ಜೆ. ರೈ ಪ್ರಾಸ್ತಾವಿಕ ಮಾತನಾಡಿ, ನಮ್ಮ ಸಂಘಟನೆ ಸಾರ್ಥಕ 25 ವರ್ಷಗಳನ್ನು ಪೂರೈಸಿ ಈ ಊರಿನ ಎಲ್ಲಾ ಸಾಂಸ್ಕೃತಿಕ, ಸಾಮಾಜಿಕ, ಶೈಕ್ಷಣಿಕ ಚಟುವಟಿಕೆಗೆ ಪೂರಕವಾಗುವ ಕಾರ್ಯಕ್ರಮಗಳನ್ನು ನೀಡುವಲ್ಲಿ ಯಶಸ್ವಿಯಾಗಿದೆ ಎಂದರು.

ಸಾಧಕರಿಗೆ ಸನ್ಮಾನ

ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ನಳಿನಾಕ್ಷಿ ಎಚ್‌. (ಆರೋಗ್ಯ ), ಕೆ.ಆರ್‌. ಗೋಪಾಲಕೃಷ್ಣ (ಸಂಗೀತ), ಜಲಜಾಕ್ಷಿ ಕೆ.ಡಿ. (ಶಿಕ್ಷಣ) ರಾಮಚಂದ್ರ ಪೆಲ್ತಡ್ಕ (ಸಮಾಜ ಸೇವೆ), ರಘುನಾಥ ಜಟ್ಟಿಪಳ್ಳ (ಸಂಘಟನೆ), ಎನ್‌.ಎ. ಅಬ್ದುಲ್ಲಾ ಜಟ್ಟಿಪಳ್ಳ (ಸಮಾಜ ಸೇವೆ) ಅವರನ್ನು ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.

ಈ ಸಂದರ್ಭ ಮಾನಸ ಮಹಿಳಾ ಮಂಡಲ (ರಿ) ಜಟ್ಟಿಪಳ್ಳ ಇದರ ಬೆಳ್ಳಿಹಬ್ಬ ಆಚರಣಾ ಸಮಿತಿಯ ಸ್ಮರಣ ಸಂಚಿಕೆಯನ್ನು ಅತಿಥಿಗಳು ಬಿಡುಗಡೆಗೊಳಿಸಿದರು. ಸುಳ್ಯ ನಗರಪಂಚಾಯತ್‌ ಅಧ್ಯಕ್ಷೆ ಶಶಿಕಲಾ ನೀರಬಿದಿರೆ, ಸುಳ್ಯ ತಾಲೂಕು ಮಹಿಳಾ ಮಂಡಲಗಳ ಒಕ್ಕೂಟ ಅಧ್ಯಕ್ಷೆ ಮಧುಮತಿ ಬೊಳ್ಳೂರು, ಮಹಿಳಾ ಸಮಾಜ (ರಿ) ಸುಳ್ಯ ಅಧ್ಯಕ್ಷೆ ಪುಷ್ಪಾವತಿ ರಾಧಾಕೃಷ್ಣ ಮಾಣಿಬೆಟ್ಟು ,

ಸುಳ್ಯ ನಗರ ಪಂಚಾಯತ್‌ ಮಾಜಿ ಸದಸ್ಯೆ ಸರೋಜಿನಿ ಪೆಲ್ತಡ್ಕ, ಶ್ರೀರಾಮ ಭಜನಾ ಸೇವಾ ಸಮಿತಿಯ ಅಧ್ಯಕ್ಷರು ಹರೀಶ್ಚಂದ್ರ ಎಂ.ಆರ್‌., ಕಪಿಲ ಯುವಕ ಮಂಡಲದ ಅಧ್ಯಕ್ಷ ಹರೀಶ್‌ ಜೆ.ಬಿ. ಮತ್ತಿತರರು ಪಾಲ್ಗೊಮಡಿದ್ದರು. ಮಾನಸ ಮಹಿಳಾ ಮಂಡಲ (ರಿ) ಜಟ್ಟಿಪಳ್ಳ ಅಧ್ಯಕ್ಷೆ ಚಿತ್ರಲೇಖಾ ಮಡಪಾಡಿ ಸ್ವಾಗತಿಸಿದರು. ಅನನ್ಯ ಮತ್ತು ಕುಲ್‌ದೀಪ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಮಾನಸ ಮಹಿಳಾ ಮಂಡಲ ಮತ್ತು ಊರಿನ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು.

  Ad Widget   Ad Widget     Ad Widget   Ad Widget   Ad Widget   Ad Widget