ನ್ಯೂಸ್ ನಾಟೌಟ್ : ಮೂವರು ವಿದ್ಯಾರ್ಥಿನಿಯರು ಶಾಲೆಯಲ್ಲಿ ಆಗಾಗೆ ವಿದ್ಯುತ್ ಶಾಕ್ಗೆ ತುತ್ತಾಗಿದ್ದರು. ಎಂದಿನಂತೆ ತಾವು ಕುಳಿತುಕೊಳ್ಳುವ ಡೆಸ್ಕ್ನಲ್ಲೇ ಬಾಲಕಿಯರು ಕುಳಿತಿದ್ದರು. ಆದರೆ, ಇದ್ದಕ್ಕಿದ್ದಂತೆಯೇ ಆಂಧ್ರ ಪ್ರದೇಶದ ವಿಜಯವಾಡ ಹೊರ ವಲಯದ ಜಿಲ್ಲಾ ಪಂಚಾಯ್ತಿ ಹೈಸ್ಕೂಲ್ನಲ್ಲಿ ಕರೆಂಟ್ ಶಾಕ್ ಹೊಡೆದಿತ್ತು. ಮೂವರೂ ವಿದ್ಯಾರ್ಥಿನಿಯರೂ ಹೆದರಿ ಹೋದರು.
ಈ ಪೈಕಿ ಓರ್ವ ವಿದ್ಯಾರ್ಥಿನಿ ಭಯದಿಂದ ಶೌಚಾಲಯಕ್ಕೆ ತೆರಳಿ ಮುಖ ತೊಳೆಯುತ್ತಿದ್ದ ವೇಳೆ ಮೂರ್ಛೆ ಹೋಗಿ ಪ್ರಜ್ಞೆ ತಪ್ಪಿ ಬಿದ್ದಿದ್ದಳು. ಕೂಡಲೇ ಆಕೆಯನ್ನು ಆಸ್ಪತ್ರೆಗೆ ರವಾನಿಸಲಾಯ್ತು. ವೈದ್ಯರು ಆಕೆಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಕಳಿಸಿದರು. ಆದರೆ, ವಿದ್ಯುತ್ ಶಾಕ್ ಹೊಡೆಯುವುದು ಮತ್ತೆಯೂ ತಪ್ಪಲಿಲ್ಲ. ವಿದ್ಯಾರ್ಥಿನಿಯರು ತಮ್ಮ ಬೆಂಚ್ಗೆ ಬಂದು ಕುಳಿತದ್ದೇ ತಡ ಶಾಕ್ ಹೊಡೆಯುತ್ತಿತ್ತು. ಇದರಿಂದ ಕಂಗೆಟ್ಟ 15 ವರ್ಷ ವಯಸ್ಸಿನ ವಿದ್ಯಾರ್ಥಿನಿ ತಮ್ಮ ಪೋಷಕರ ಬಳಿ ಏನಾಗುತ್ತಿದೆ ಎಂದು ಹೇಳಿಕೊಂಡಳು. ವಿದ್ಯಾರ್ಥಿನಿಯ ಮಾತು ಕೇಳಿ ಶಾಲೆಗೆ ಬಂದ ಪೋಷಕರು ಪ್ರಾಂಶುಪಾಲರ ಜೊತೆ ಗಲಾಟೆ ಮಾಡಿದರು.
ಸರ್ಕಾರಿ ಶಾಲೆಯಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಿದ ಹಲವು ವೈರ್ಗಳು, ಸಾಕೆಟ್ಗಳು ಹಳತಾಗಿದ್ದವು. ಇದನ್ನು ಬದಲಿಸಲು 30 ವರ್ಷ ವಯಸ್ಸಿನ ಸೂರಿ ಬಾಬು ಹಾಗೂ 45 ವರ್ಷ ವಯಸ್ಸಿನ ವಿಜಯ ಶೇಖರ್ಗೆ ಗುತ್ತಿಗೆ ನೀಡಲಾಗಿತ್ತು. ಈ ಪೈಕಿ 30 ವರ್ಷ ವಯಸ್ಸಿನ ಸೂರಿ ಬಾಬು ಹುಡುಗಾಟಿಕೆ ಮಾಡಿದ್ದ. ಶಾಲಾ ಕೊಠಡಿಯ ಸಾಕೆಟ್ ಬದಲಿಸುವ ವೇಳೆ ಸಾಕೆಟ್ ಬಳಿಯಲ್ಲೇ ವಿದ್ಯಾರ್ಥಿನಿಯರ ಬೆಂಚ್ ಇತ್ತು. ಇದು ಕಬ್ಬಿಣದ ಬೆಂಚ್ ಆಗಿತ್ತು. ಇದನ್ನು ಗಮನಿಸಿದ್ದ ಸೂರಿ ಬಾಬು ಹಾಗೂ ಶೇಖರ್, ಆಗಾಗ ಸ್ಟೀಲ್ ಬೇಂಚ್ಗೆ ವೈಯರ್ ಸುತ್ತಿ ವಿದ್ಯುತ್ ಸಂಪರ್ಕ ಕೊಡುತ್ತಿದ್ದರು.
ವಿದ್ಯಾರ್ಥಿನಿಯರು ಬೆಂಚ್ನಲ್ಲಿ ಕುಳಿತ ಕೂಡಲೇ ಶಾಕ್ ಹೊಡೆಯುತ್ತಿತ್ತು. ಆಗ ವಿದ್ಯಾರ್ಥಿನಿಯರು ಕೂಗಿಕೊಂಡ ಕೂಡಲೇ ವೈರ್ ಸಂಪರ್ಕ ತೆಗೆದುಬಿಡ್ತಿದ್ದರು! ಯಾರಾದ್ರೂ ಬಂದು ಪರೀಕ್ಷಿಸಿದರೆ ಯಾವುದೇ ಸಮಸ್ಯೆ ಕಂಡು ಬರುತ್ತಿರಲಿಲ್ಲ ಎಂದು ಹವು ದಿನಗಳ ಬಳಿಕ ತಿಳಿಯಿತು. ಈ ರೀತಿ ಹಲವು ಬಾರಿ ಕಾಟ ಕೊಟ್ಟಿದ್ದ ಸೂರಿ ಬಾಬು, ಶೇಖರ್, ವಿದ್ಯಾರ್ಥಿನಿಯರು ಬೆಂಚ್ ಬಳಿ ಸುಳಿಯದಂತೆ ಮಾಡಿದ್ದರು. ಪದೇ ಪದೇ ವಿದ್ಯುತ್ ಶಾಕ್ಗೆ ತುತ್ತಾಗುತ್ತಿದ್ದ ಬಾಲಕಿಯರು ಸುಸ್ತಾಗಿ ಹೋಗಿದ್ದರು. ಈ ವಿಚಾರವನ್ನ ಹೇಗೋ ಪತ್ತೆ ಮಾಡಿದ ಶಾಲೆಯ ಆಡಳಿತ ಮಂಡಳಿ ಕೂಡಲೇ ಪೊಲೀಸರಿಗೆ ದೂರು ನೀಡಿದೆ. ಈಗ ಇಬ್ಬರೂ ಎಲೆಕ್ಟ್ರೀಷಿಯನ್ಗಳೂ ಕಂಬಿ ಎಣಿಸುತ್ತಿದ್ದಾರೆ.