ನ್ಯೂಸ್ ನಾಟೌಟ್: ಸುಳ್ಯದ ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಆಯೋಜಿಸಿದ 10 ದಿನಗಳ ಸಂಸ್ಕೃತ ಸಂಭಾಷಣ ಶಿಬಿರ ಜ.24ರಂದು ಯಶಸ್ವಿಯಾಗಿ ಸಮಾರೋಪಗೊಂಡಿತು.
ಕಾಲೇಜಿನ ಸಂಸ್ಕೃತ ಸಂಘ ಕಾರ್ಯಕ್ರಮ ಆಯೋಜಿಸಿದ್ದು, ಸಂಸ್ಕೃತ ಭಾರತಿ ಕಾಸರಗೋಡು ಇವರ ನೇತೃತ್ವದಲ್ಲಿ ಆಯುರ್ವೇದ ವಿದ್ಯಾರ್ಥಿಗಳಿಗೆ ತರಬೇತಿ ಆಯೋಜಿಸಲಾಗಿತ್ತು. ಸಂಸ್ಕೃತ ಭಾರತ ಕಾಸರಗೋಡು, ಮಂಗಳೂರು ಗ್ರಾಮಾಂತರ ವಿಭಾಗದಿಂದ ಪ್ರತಿನಿಧಿಸಿದ ಪ್ರಶಿಕ್ಷಕಿ ಸಂಧ್ಯಾ ಅವರು ವಿದ್ಯಾರ್ಥಿಗಳಿಗೆ ಸಂಸ್ಕೃತ ವ್ಯಾಕರಣ, ಸಂಭಾಷಣೆ, ಸಂಸ್ಕೃತದ ಮಹತ್ವ ಹಾಗೂ ಸಂಸ್ಕೃತ ಕಲಿಯುವುದರ ಪ್ರಯೋಜನ ಮತ್ತು ಅನಿವಾರ್ಯದ ಕುರಿತು ಬೋಧಿಸಿದರು. ಕಾರ್ಯಕ್ರಮವನ್ನು ಕಾಲೇಜಿನ ಪ್ರಾಂಶುಪಾಲ ಡಾ. ಲೀಲಾಧರ್ ಡಿವಿ ದೀಪ ಬೆಳಗಿಸಿ ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ವೆಂಕಟೇಶ್ ಕುಮಾರ್ ಉಳುವಾರು ಹಾಗೂ ಮಂಜುನಾಥ ಉಡುಪ ಆಗಮಿಸಿ ಸಂಸ್ಕೃತದ ಹಿರಿಮೆಯ ಬಗ್ಗೆ ತಿಳಿಸಿದರು. ವಿದ್ಯಾರ್ಥಿಗಳಿಂದ ಸಂಸ್ಕೃತ ಸಂಭಾಷಣ ನಾಟಕ, ಸಂಸ್ಕೃತ ಕಥನ, ಶಿಬಿರದ ಅನುಭವದ ಕಥನ ಹಾಗೂ ಇನ್ನು ಹಲವು ಮನೋರಂಜನ ಕಾರ್ಯಕ್ರಮಗಳೊಂದಿಗೆ ಮುಕ್ತಾಯವಾಯಿತು. ಕಾಲೇಜಿನ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಅಧಿಕಾರಿ ಡಾ. ಹರ್ಷಿತಾ ಎಂ, ಕಾಲೇಜಿನ ಸಂಸ್ಕೃತ ಸಂಘದ ಸದಸ್ಯರು, ಬೋಧಕ ಬೋಧಕೇತರ ವೃಂದದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ನೀಲಿಮಾ, ಸ್ವಾತಿ ಹಾಗೂ ಸಹನ ಪ್ರಾರ್ಥಿಸಿ, ಕಾಲೇಜಿನ ಸಂಸ್ಕೃತ ಉಪನ್ಯಾಸಕಿಯಾದ ಶಶಿಕಲಾ ದೇರ್ಲ ವಂದಿಸಿ, ಮಾನ್ಯ ಅಂಬೆಕಲ್ಲು, ಧ್ಯಾನ್ ವಿಜಯ್ ಹಾಗೂ ಅಧ್ವಿಕಾ ಕೆ ಆರ್ ನಿರೂಪಿಸಿ ಸ್ವಾಗತಿಸಿದರು.