ನ್ಯೂಸ್ ನಾಟೌಟ್: ಬೆಂಗಳೂರಿನಲ್ಲಿ ಭಾರತಿನಗರ ರೌಡಿಶೀಟರ್ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಮಾಜಿ ಸಚಿವ, ಕೆಆರ್ ಪುರಂನ ಬಿಜೆಪಿ ಶಾಸಕ ಬೈರತಿ ಬಸವರಾಜ್ ಹೆಸರು ತಳುಕು ಹಾಕಿಕೊಂಡಿದೆ.
ಮೃತ ವ್ಯಕ್ತಿಯ ತಾಯಿ ನೀಡಿದ ದೂರಿನಂತೆ, ಕಿತ್ತಕನೂರು ಜಾಗದ ವಿಚಾರವಾಗಿ ಕೊಲೆ ಮಾಡಲಾಗಿದೆ. ಬಿಳಿ ಬಣ್ಣದ ಸ್ಕಾರ್ಪಿಯೋದಲ್ಲಿ 8 ರಿಂದ 9 ಮಂದಿ ಬಂದು ಮಚ್ಚಿನಿಂದ ಹೊಡೆದಿದ್ದಾರೆ. ಕೊಲೆ ಮಾಡಿರುವ ಆರೋಪಿಗಳು ಹಲವು ಬಾರಿ ಮಗನಿಗೆ ಬೆದರಿಕೆ ಹಾಕಿದ್ದರು. ಮಾಜಿ ಸಚಿವ ಬೈರತಿ ಬಸವರಾಜ್ , ಜಗದೀಶ್ ಮತ್ತು ಇತರರಿಂದ ನನಗೆ ಪ್ರಾಣ ಬೆದರಿಕೆಯಿದೆ ಎಂದು ಹಲವು ಬಾರಿ ಮಗ ಹೇಳಿದ್ದ. ಬಸವರಾಜ್ ಕುಮ್ಮಕ್ಕಿನಿಂದಲೇ ಕೊಲೆ ನಡೆದಿದೆ ಎಂದು ಆರೋಪಿಸಿದ್ದಾರೆ.
ಈ ಬಗ್ಗೆ ಕಳೆದ ಫೆಬ್ರವರಿ 21 ರಂದು ಜಗದೀಶ್ ಮತ್ತು ಇತರರ ವಿರುದ್ಧ ಭಾರತಿ ನಗರ ಠಾಣೆಯಲ್ಲಿ ಶಿವಪ್ರಕಾಶ್ ದೂರು ನೀಡಿದ್ದ. ಕಿತ್ತಕನೂರು ಬಳಿ ನಾನು ಜಾಗವನ್ನು ಖರೀದಿಸಿದ್ದೆ. ಈ ಜಾಗವನ್ನು ಮಾರಾಟ ಮಾಡಬೇಕೆಂದು ಜಗದೀಶ್ ಮತ್ತು ಇತರರು ನನಗೆ ಜೀವ ಬೆದರಿಕೆ ಹಾಕಿದ್ದಾರೆ. ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ದೂರು ನೀಡಿದ್ದ. ಈ ಸಂಬಂಧ ಜಗದೀಶ್ ಮತ್ತು ಇತರರ ವಿರುದ್ಧ ಪ್ರಕರಣ ದಾಖಲಾಗಿತ್ತು.
‘ರಾಜಕೀಯ ಪಿತೂರಿ’
ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಬೈರತಿ ಬಸವರಾಜ್, ಈ ಪ್ರಕರಣಕ್ಕೂ ನನಗೂ ಯಾವುದೇ ರೀತಿಯಲ್ಲಿ ಸಂಬಂಧವಿಲ್ಲ. ನಾನು ಈ ವಿಷಯವನ್ನು ಮಾಧ್ಯಮಗಳಿಂದ ತಿಳಿದು ಅಚ್ಚರಿಯಾಯಿತು ಮತ್ತು ನೋವಾಯಿತು. ನಾನು ನನ್ನ ಕ್ಷೇತ್ರದ ಜನ ಸಮಸ್ಯೆಗಳ ಪರಿಹಾರಕ್ಕಾಗಿ ಕೆಲಸ ಮಾಡುತ್ತಿದ್ದೇನೆ. ಜಮೀನು ವ್ಯವಹಾರಗಳ ಬಗ್ಗೆ ನನ್ನ ಯಾವುದೇ ಸಂಪರ್ಕವಿಲ್ಲ. ಯಾರೋ ಸುಳ್ಳು ಆರೋಪ ಮಾಡಿ ನನ್ನನ್ನು ತೇಜೋವಧೆ ಮಾಡಲು ಯತ್ನಿಸುತ್ತಿದ್ದಾರೆ. ‘ಈ ಜಮೀನು ಮಹದೇವಪುರ ಕ್ಷೇತ್ರದಲ್ಲಿದೆ. ಕೆ.ಆರ್.ಪುರ ಕ್ಷೇತ್ರಕ್ಕೆ ಯಾವುದೇ ಸಂಬಂಧವಿಲ್ಲ. ಈ ಪ್ರಕರಣ ರಾಜಕೀಯ ದುರುದ್ದೇಶದಿಂದ ನಡೆದಿದೆ. ನಿಷ್ಠಾವಂತ ರಾಜಕಾರಣಿಯ ಮೇಲಿನ ಆರ್ಭಟ ಮಾತ್ರವಿದು’ ಎಂದು ಹೇಳಿದ್ದಾರೆ.