ನ್ಯೂಸ್ ನಾಟೌಟ್: ಅನೈತಿಕ ಸಂಬಂಧದಲ್ಲಿ ಮನಸ್ತಾಪ ಉಂಟಾದ ಹಿನ್ನೆಲೆ ಮಹಿಳೆಯೊಬ್ಬರು ನಿವೃತ್ತ ಇನ್ಸ್ ಪೆಕ್ಟರ್ ಮೇಲೆ ಸೀಮೆಎಣ್ಣೆ ಸುರಿದು ಸುಟ್ಟುಹಾಕಿರುವ ಘಟನೆ ಒಡಿಶಾದ ಬೆರ್ಹಾಂಪುರದಲ್ಲಿ ನಡೆದಿದೆ.
ಮೃತರನ್ನು ನಿವೃತ್ತ ಪೊಲೀಸ್ ಅಧಿಕಾರಿ ಹರಿಹರ ಸಾಹು ಹಾಗೂ ಆರೋಪಿ ಮಹಿಳೆಯನ್ನು ಸುದೇಶ್ನಾ ಜೇನಾ ಎಂದು ಗುರುತಿಸಲಾಗಿದೆ.
ಘಟನೆಯ ಬಳಿಕ ಅಧಿಕಾರಿ ಸಾಹು ಮಗಳು ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಪೊಲೀಸ್ ಅಧಿಕಾರಿಯನ್ನು ಬೆರ್ಹಾಂಪುರದ ಎಂಕೆಸಿಜಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ರವಾನಿಸಲಾಯಿತು. ಬಳಿಕ ಹೆಚ್ಚಿನ ಚಿಕಿತ್ಸೆಗಳಿಗಾಗಿ ಕಟಕ್ ನ ಎಸ್ ಸಿಬಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆದರೆ ಚಿಕಿತ್ಸೆಗೆ ಫಲಕಾರಿಯಾಗದೇ ಸಾಹು ಸಾವನ್ನಪ್ಪಿದ್ದಾರೆ.
ಮೃತ ಅಧಿಕಾರಿಯ ಮನೆಯಲ್ಲಿ ಆರೋಪಿತೆ ಬಾಡಿಗೆಗಿದ್ದರು. ಬಳಿಕ ಅಧಿಕಾರಿ ಹಾಗೂ ಮಹಿಳೆಯ ನಡುವೆ ಸಂಬಂಧ ಬೆಳೆದಿತ್ತು. ಆದರೆ ಕೆಲವು ಸಮಯದ ನಂತರ ಮಹಿಳೆ ಹಾಗೂ ಅಧಿಕಾರಿಯ ನಡುವೆ ಮನಸ್ತಾಪ ಉಂಟಾಗಿದ್ದು, ಜಗಳಕ್ಕೆ ಕಾರಣವಾಗಿದೆ. ಜಗಳ ವಿಕೋಪಕ್ಕೆ ತಿರುಗಿದ್ದು, ಸಂಚು ರೂಪಿಸಿ ಸೀಮೆ ಎಣ್ಣೆ ಸುರಿದು ಅಧಿಕಾರಿಯನ್ನು ಮಹಿಳೆ ಕೊಲೆ ಮಾಡಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಶ್ರವಣ್ ವಿವೇಕ್ ಎಂ ತಿಳಿಸಿದ್ದಾರೆ.
ಇನ್ನೂ ಈ ಕುರಿತು ಮಹಿಳೆಯನ್ನು ವಿಚಾರಣೆ ನಡೆಸಿದಾಗ, ತಾನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ ಹಾಗೂ ನಾನು ಕೊಲೆ ಮಾಡುವುದಕ್ಕಾಗಿ ಮೊದಲೇ ಸಿದ್ಧತೆ ಮಾಡಿಕೊಂಡಿದ್ದೆ ಎಂದು ಹೇಳಿಕೊಂಡಿದ್ದಾಳೆ. ಆದರೆ ಇವರಿಬ್ಬರ ಸಂಬಂಧದ ಬಗ್ಗೆ ಸ್ಥಳೀಯರು ಹಾಗೂ ಕುಟುಂಬಸ್ಥರಿಗೆ ಯಾವುದೇ ಮಾಹಿತಿ ಇರಲಿಲ್ಲ ಎನ್ನಲಾಗಿದೆ.